ಕೆಲವೇ ಕ್ಷಣಗಳಲ್ಲಿ ಗಣಿನಾಡು ಬಳ್ಳಾರಿಗೆ ಪ್ರಧಾನಿ ಮೋದಿ ಆಗಮನ, ಸಿದ್ಧವಾಯ್ತು ನೆನಪಿನ ಕಾಣಿಕೆ
ಬಳ್ಳಾರಿ, ಮೇ, 05: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ಕ್ಷಣಗಳಲ್ಲಿ ಬಳ್ಳಾರಿಗೆ ಆಗಮಿಸಲಿದ್ದಾರೆ. ಮತ್ತೊಂದೆಡೆ ಇಲ್ಲಿನ ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರಿಗೆ ಕನಕದುರ್ಗಮ್ಮ ದೇವಿ ಮೂರ್ತಿಯನ್ನು ನೆನಪಿನ ಕಾಣಿಕೆ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇಂದು ಬಳ್ಳಾರಿಯಲ್ಲಿ ನಡೆಯುವ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ನಾಯಕರು ಪ್ರಧಾನಿ ಅವರಿಗೆ ಬಳ್ಳಾರಿ ನಗರದ ಆದಿ ದೇವತೆ ಆಗಿರುವ ಕನಕ ದುರ್ಗಮ್ಮ ದೇವಿಯ ಮೂರ್ತಿಯನ್ನು ನೆನಪಿನ ಕಾಣಿಕೆ ಕೊಡಲು ಸಜ್ಜಾಗಿದ್ದಾರೆ.

ಬೆಳ್ಳಿಯಿಂದ ಸಿದ್ದವಾದ ಈ ಕನಕ ದುರ್ಗಮ್ಮ ದೇವಿ ಮೂರ್ತಿ ಸುಮಾರು ಎರಡುವರೇ ಕೆ.ಜಿ.ತೂಕ ಇದೆ. ಈ ಮೂರ್ತಿಯನ್ನು ಶಾಸಕ ಸೋಮಶೇಖರ್ ರೆಡ್ಡಿ ಅವರು ಕೈಯಲ್ಲಿ ಹಿಡಿದು ತಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮತ್ತೊಂದೆಡೆ ಬಳ್ಳಾರಿಯಲ್ಲಿ ಮೋಡ ಮುಚ್ಚಿದ ವಾತಾವರಣವಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮಳೆ ಆತಂಕ ಎದುರಾಗಿದೆ. ನಿನ್ನೆ ರಾತ್ರಿಯೂ ಮಳೆ ಸುರಿದ ಪರಿಣಾಮ ವೇದಿಕೆ ಕೆಸರುಮಯವಾಗಿದ್ದು, ಇಂದು ಮತ್ತೆ ಮಳೆ ಏನಾದರೂ ಬಂದರೆ ಕಾರ್ಯಕ್ರಮ ರದ್ದಾಗುವ ಸಾಧ್ಯತೆಯು ಇದೆ ಎನ್ನಲಾಗಿದೆ.
ಇನ್ನು ಕೆಸರುಗದ್ದೆಯಾಗಿದ್ದ ವೇದಿಕೆಯನ್ನು ಸಿಬ್ಬಂದಿಗಳು ಸರಿಪಡಿಸುತ್ತಿದ್ದಾರೆ. ಬಳ್ಳಾರಿಯ ಕಪಗಲ್ಲು ರಸ್ತೆಯಲ್ಲಿ ಮೋದಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕರ್ತರಿಗಾಗಿ ಸುಮಾರು 80 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ಸುಮಾರು 1.5 ರಿಂದ 2 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.












Click it and Unblock the Notifications