ಬಳ್ಳಾರಿ ಕನಕ ದುರ್ಗಮ್ಮನಿಗೆ ಲಕ್ಷಾಂತರ ರು ಕಾಣಿಕೆ
ಬಳ್ಳಾರಿ, ಫೆ.18: ಕನಕ ದುರುಗಮ್ಮ ದೇವಿ ದೇಗುಲದ ಹುಂಡಿಯಲ್ಲಿ ಭಕ್ತಾದಿಗಳ ಕಾಣಿಕೆ ರೂಪದಲ್ಲಿ ಲಕ್ಷಾಂತರ ರುಪಾಯಿ ಸಂಗ್ರಹವಾಗಿದೆ. ಈ ಋತುವಿನಲ್ಲಿ ಒಂದು ಹುಂಡಿಯಲ್ಲೇ ಈ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗಿರುವುದು ಇದೆ ಮೊದಲು ಎನ್ನಲಾಗಿದೆ.
ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ಹಲವಾರು ಜಿಲ್ಲೆಗಳ ಭಕ್ತಾದಿಗಳು ನಗರ ದೇವತೆ ಶ್ರೀ ಕನಕ ದುರುಗಮ್ಮ ದೇವಿ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಇತ್ತೀಚೆಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಎಸ್.ಪಿ.ಬಿ.ಮಹೇಶ್ ಹಾಗೂ ಶ್ರೀ ಕನಕ ದುರುಗಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಪಿ.ಮಲ್ಲಣ್ಣರವರ ಸಮಕ್ಷಮದಲ್ಲಿ ಒಂದು ಹುಂಡಿಯನ್ನು ತೆರೆದು ಲೆಕ್ಕ ಮಾಡಲಾಯಿತು.
ದೇಗುಲದದ ಒಂದು ಹುಡಿಯಲ್ಲಿ 19,21,210 ರೂ (ಹತ್ತೊಂಬತ್ತು ಲಕ್ಷದ ಇಪ್ಪತ್ತೊಂದು ಸಾವಿರದ ಇನ್ನೂರ ಹತ್ತು ರೂಗಳು) ಸಂಗ್ರಹವಾಗಿತ್ತು ಎಂದು ಶ್ರೀ ಕನಕ ದುರುಗಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಮಲ್ಲಣ್ಣರವರು ಹೇಳಿದ್ದಾರೆ.

ರೆಡ್ಡಿಗಳ ಮೆಚ್ಚಿನ ದೈವ ಕನಕ ದುರ್ಗಿ: ಬಳ್ಳಾರಿಯಲ್ಲಿ ವರಲಕ್ಷ್ಮಿ ಪೂಜೆಯ ಸಂಭ್ರಮವನ್ನು ಪರಿಚಯಿಸಿದ ಗಾಲಿ ರೆಡ್ಡಿ ಸೋದರರು, ಗುಂತಕಲ್ ಸಮೀಪದ ಕಸ್ವಾಪುರ ನೆಟ್ಟಿಗಂಟಿ ಆಂಜನೇಯ ಸ್ವಾಮಿ ಅಲ್ಲದೆ ಬಳ್ಳಾರಿಯ ಕನಕ ದುರ್ಗಮ್ಮ ದೇಗುಲಕ್ಕೆ ತುಂಬಾ ನಡೆದುಕೊಳ್ಳುತ್ತಾರೆ. ಗಾಲಿ ರೆಡ್ಡಿ ಸೋದರರಲ್ಲದೆ ಬಿ. ಶ್ರೀರಾಮುಲು, ಶಾಂತಾ ಅವರು ಕೂಡಾ ಈ ದೇಗುಲಕ್ಕೆ ವಿಶೇಷ ಸಂದರ್ಭಗಳಲ್ಲಿ ತಪ್ಪದೇ ಭೇಟಿ ಕೊಡುತ್ತಾರೆ.
ಶರನ್ನವರಾತ್ರಿಯ ಸಂದರ್ಭದಲ್ಲಿ ಈ ದೇಗುಲದಲ್ಲಿ 9 ದಿನಗಳ ಕಾಲ ಬನ್ನಿ ಮಹಾಂಕಾಳಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತದೆ. ವಿಜಯದಶಮಿಯ ದಿನ ಮಹಿಳೆಯರು ದೇವಿಗೆ ಸೀರೆ, ಬಳೆ, ಉಡಿಗೆ ಅಕ್ಕಿ, ನೈವೇದ್ಯದೊಂದಿಗೆ ತೆರಳಿ ಮಲ್ಲಿಗೆ, ಸೇವಂತಿ, ಕನಕಾಂಬರ ಹೀಗೆ ಬಗೆಬಗೆಯ ಪುಷ್ಪಗಳಿಂದ ಪೂಜೆ ಸಲ್ಲಿಸುತ್ತಾರೆ.
ನಗರದ ಹೃದಯಭಾಗದಲ್ಲಿರುವ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಸರಕಾರದಿಂದ ಇದುವರೆವಿಗೂ 7 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದೆ.
ಅದರೆ, ಇಲ್ಲಿ ಎಲ್ಲವೂ ಗಾಲಿ ರೆಡ್ಡಿ ಕುಟುಂಬ ಸೇರಿದಂತೆ ಖಾಸಗಿಯವರಿಂದ ನಡೆಸಲಾದ ಅಭಿವೃದ್ಧಿ ಕಾಮಗಾರಿಯಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಇನ್ನೂ ಕುಂಠಿತವಾಗಿದೆ ಎಂದು ಜನಾರ್ದನ ರೆಡ್ಡಿ ಅಭಿಮಾನಿ ಬಳಗ ದೂರಿದೆ.












Click it and Unblock the Notifications