"ಜಿಲ್ಲಾ ವಿಭಜನೆ ವಿಷಯಕ್ಕೆ ರಾಜೀನಾಮೆ ನೀಡಲೂ ನಾನು ಸಿದ್ಧ"
ಬಳ್ಳಾರಿ, ಡಿಸೆಂಬರ್ 03: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ನನ್ನ ಕ್ಷೇತ್ರದ ಜನ ಇಷ್ಟಪಟ್ಟರೆ ರಾಜೀನಾಮೆ ನೀಡಲೂ ಸಿದ್ಧ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಗುರುವಾರ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ಜಿಲ್ಲೆ ವಿಭಜನೆ ವಿಚಾರವಾಗಿ ನನಗೆ ರಾಜೀನಾಮೆ ನೀಡಿ ಅಂದರೆ ನಾನು ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಮುಂದೆ ಓದಿ...

"ದಿನವು ನನಗೆ ಫೋನ್ ಬರುತ್ತಿದೆ"
ಜಿಲ್ಲೆಯ ವಿಭಜನೆ ಮಾಡುವ ವಿಚಾರವಾಗಿ ನನಗೆ ಪಶ್ಚಿಮ ತಾಲೂಕುಗಳ ಜನರು ಫೋನ್ ಮಾಡಿ ಮಾತನಾಡಿದ್ದಾರೆ. ಯಾಕೆ ವಿಭಜನೆ ಮಾಡ್ತಾರೆ ಅಂತ ಗೋಳು ಹೇಳಿಕೊಂಡಿದ್ದಾರೆ. ಸಿಎಂ ಬಿಎಸ್ ವೈ ಯಡಿಯೂರಪ್ಪ ಇದ್ದಾರೆ. ನಿಮ್ಮದೇ, ಸರ್ಕಾರ ಇದೆ ಹಣ ತಂದು ಅಭಿವೃದ್ಧಿ ಮಾಡಬಹುದೆಂದು ಕೇಳುತ್ತಿದ್ದಾರೆ. ಇದಕ್ಕೆ ನಾನು ಏನೆಂದು ಉತ್ತರಿಸಲಿ ಎಂದಿದ್ದಾರೆ.

ಜಿಲ್ಲೆ ಒಡೆಯೋದು ಬೇಡ ಅಂತ ಮನವಿ
ಜಿಲ್ಲಾ ಕೇಂದ್ರದ ಕಚೇರಿಗಳು ಬೇಕಾದರೆ ಹೊಸಪೇಟೆಗೆ ಶಿಫ್ಟ್ ಆಗಲಿ, ಆದರೆ ಜಿಲ್ಲೆ ಒಡೆಯೋದು ಬೇಡ ಅಂತ ಮನವಿ ಮಾಡುವೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳ್ಳಾರಿ ಜಿಲ್ಲೆಗೆ ಸೇರಿಸೋದು ಬೇಡ. ಈ ಬಗ್ಗೆ ನಾನು ಶ್ರೀರಾಮುಲು ಅವರ ಮನವೊಲಿಸುವೆ ಎಂದು ಹೇಳಿದ್ದಾರೆ.

ಮೊಳಕಾಲ್ಮೂರು ಸೇರಿಸದಿರಲು ಆಗ್ರಹ
ನಾಳೆ ನೆರೆಯ ಆಂಧ್ರ ಪ್ರದೇಶದ ನಾನಾ ತಾಲೂಕುಗಳು ಬರ್ತಾವೆ, ಚಳ್ಳಕೆರೆನೂ ಕೇಳ್ತಾರೆ. ಹಾಗೆ ಸೇರಿಸುತ್ತಾ ಹೋದರೆ 371 ಜೆ ಸೌಲಭ್ಯದಿಂದ ನಮ್ಮ ಭಾಗದ ಮಕ್ಕಳು ವಂಚಿತರಾಗ್ತಾರೆ. ಯಾವುದೇ ಕಾರಣಕ್ಕೂ ಮೊಳಕಾಲ್ಮೂರು ಬಳ್ಳಾರಿಗೆ ಸೇರಿಸೋದು ಬೇಡ ಎಂದು ಆಗ್ರಹಿಸಿದ್ದಾರೆ.

ಎಚ್ಚರಿಕೆ ಕೊಟ್ಟಿದ್ದ ಸೋಮಶೇಖರ್
ಗಣಿ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸದೆ ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದಕ್ಕೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications