ಪತಿ ಬಿಜೆಪಿ ಅಭ್ಯರ್ಥಿ, ಪತ್ನಿ ಕಾಂಗ್ರೆಸ್ನಿಂದ ಜಿ.ಪಂಚಾಯಿತಿ ಸದಸ್ಯೆ!
ಬಳ್ಳಾರಿ, ಮಾರ್ಚ್ 26 : ಗಣಿನಾಡು ಬಳ್ಳಾರಿಯ ರಾಜಕೀಯ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಪತಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಪತ್ನಿ ಕಾಂಗ್ರೆಸ್ನಿಂದ ಜಿಲ್ಲಾ ಪಂಚಾಯಿತಿ ಸದಸ್ಯೆ. ಯಾರನ್ನು ಬೆಂಬಲಿಸಬೇಕು ಎಂಬುದು ಜನರ ಗೊಂದಲವಾಗಿದೆ.
ಹೌದು.. ಇದು ಬಳ್ಳಾರಿ ಲೋಕಸಭಾ ಕ್ಷೇತ್ರದ ರಾಜಕೀಯ ಚಿತ್ರಣ. ಬಿಜೆಪಿಯಿಂದ ದೇವೇಂದ್ರಪ್ಪ ಅವರು ಅಭ್ಯರ್ಥಿಯಾಗಿದ್ದಾರೆ. ಅವರ ಪತ್ನಿ ಸುಶೀಲಮ್ಮ ಅವರು ಹರಪನಹಳ್ಳಿಯ ಅರಸಿಕೆರೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್ನಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಅಭ್ಯರ್ಥಿ. ಬಿಜೆಪಿಯಿಂದ ಬಿ.ಶ್ರೀರಾಮುಲು ಅವರ ಆಪ್ತರಾದ ದೇವೇಂದ್ರಪ್ಪ ಕಣದಲ್ಲಿದ್ದಾರೆ. ಗಂಡ-ಹೆಂಡತಿ ಇಬ್ಬರ ಪೈಕಿ ಮತದಾರರು ಯಾರನ್ನು ಬೆಂಬಲಿಸಬೇಕು?.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಸುಶೀಲಮ್ಮ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ಪತಿ ದೇವೇಂದ್ರಪ್ಪ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ?. ಜನರು ಕಾಂಗ್ರೆಸ್ ಅಥವ ಬಿಜೆಪಿ ಯಾವುದನ್ನು ಬೆಂಬಲಿಸಲಿದ್ದಾರೆ ಎಂಬುದು ಮೇ 23ರಂದು ತಿಳಿಯಲಿದೆ....

ಕಾಂಗ್ರೆಸ್ ಪಕ್ಷದಲ್ಲಿ ಇದ್ದರು
62 ವರ್ಷ ವಯಸ್ಸಿನ ವೈ.ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದರು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಲ್ಲಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. 1995ರಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಐದು ವರ್ಷ ಅವರು ಕೆಲಸ ಮಾಡಿದ್ದಾರೆ. ಈಗ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.

ಜಿಲ್ಲಾ ಪಂಚಾಯಿತಿಗೆ ಆಯ್ಕೆ
ಹರಪನಹಳ್ಳಿಯ ಅರಸಿಕೆರೆಯಿಂದ ಸುಶೀಲಮ್ಮ ಅವರು ದಾವಣಗೆರೆ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಈಗ ಹರಪನಹಳ್ಳಿ ದಾವಣಗೆರೆ ಜಿಲ್ಲೆಗೆ ಸೇರಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನದ ಅವಧಿ ಪೂರ್ಣಗೊಳ್ಳುವ ತನಕ ಸುಶೀಲಮ್ಮ ಅವರು ಕಾಂಗ್ರೆಸ್ ತೊರೆಯುವುದಿಲ್ಲ.

ಪ್ರಚಾರವನ್ನು ನಡೆಸಲಿದ್ದಾರೆಯೇ?
'ಪತ್ನಿ ನನ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ? ಎಂದು ಅವರನ್ನೇ ಕೇಳಬೇಕು. ಇದು ಪ್ರಜಾಪ್ರಭುತ್ವ ಅವರಿಗೂ ಅವರದ್ದೇ ಆದ ಹಕ್ಕು ಇದೆ' ಎಂದು ದೇವೇಂದ್ರಪ್ಪ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ದೇವೇಂದ್ರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀರಾಮುಲು ಟೀಕಿಸಿದ ಡಿಕೆ ಶಿವಕುಮಾರ್
ದೇವೇಂದ್ರಪ್ಪ ಅಭ್ಯರ್ಥಿಯಾದ ವಿಚಾರದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬಿ.ಶ್ರೀರಾಮುಲು ಅವರನ್ನು ಟೀಕಿಸಿದ್ದಾರೆ. 'ನನ್ನ ಸ್ನೇಹಿತರಾದ ಶ್ರೀರಾಮುಲು ಅಣ್ಣ ಬಿಜೆಪಿಯ ಒಂದು ಕಾರ್ಯಕರ್ತನನ್ನು ಹುಡುಕಿ ಅವರನ್ನು ನಾಯಕರನ್ನಾಗಿ ಮಾಡಲಿಲ್ಲ ಎಂಬ ವ್ಯಥೆ ನನ್ನ ಕಾಡುತ್ತಿದೆ. ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯೇ ಬೇಕಾಗಿತ್ತಾ?, ಪಾಪ ದೇವೇಂದ್ರಪ್ಪ ಅವರು ದೇವರು ಇದ್ದಂಗೆ ಇರಲಿ' ಎಂದು ವ್ಯಂಗ್ಯವಾಡಿದ್ದಾರೆ.

ನಾನು ಬಳ್ಳಾರಿ ಮನೆ ಮಗ
'ನಾನು ಬಳ್ಳಾರಿಯ ಮನೆ ಮಗ. ಇಲ್ಲಿನ ಜನರೊಂದಿಗೆ ಹಳೆಯ ನಂಟಿದೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ' ಎಂದು ದೇವೇಂದ್ರಪ್ಪ ಹೇಳಿದ್ದಾರೆ. '1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವೆ' ಎಂದು ಬಿ.ಶ್ರೀರಾಮುಲು ಪಣ ತೊಟ್ಟಿದ್ದಾರೆ.












Click it and Unblock the Notifications