ಹೊಸಪೇಟೆ; ಕೋವಿಡ್ ಪರಿಸ್ಥಿತಿ ನಡುವೆ ತೆರಿಗೆ ಹೆಚ್ಚಳದ ಬಿಸಿ
ವಿಜಯನಗರ, ಮೇ 30; ಕೋವಿಡ್ ಪರಿಸ್ಥಿತಿಯ ನಡುವೆಯೇ ಹೊಸಪೇಟೆಯ ಜನರಿಗೆ ತೆರಿಗೆ ಹೆಚ್ಚಳದ ಬಿಸಿ ತಟ್ಟಿದೆ. ಕೆಲವೆಡೆ ಶೇ 10ರಷ್ಟು ಹೆಚ್ಚಳವಾಗಿದೆ ಎಂಬ ಸುದ್ದಿ ಹರಿದಾಡಿದರೆ, ಇನ್ನೊಂದೆಡೆ ಶೇ 30 ಹೆಚ್ಚಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಜನರಲ್ಲಿ ಗೊಂದಲವೂ ಉಂಟಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮನೆ, ಖಾಲಿ ನಿವೇಶನ, ವಾಣಿಜ್ಯ, ವಾಣಿಜ್ಯೇತರ ಕಟ್ಟಡಗಳಿಗೆ ಪ್ರತ್ಯೇಕವಾದ ತೆರಿಗೆ ದರ ನಿಗದಿ ಮಾಡಲಾಗಿದೆ. ಮಾರ್ಗಸೂಚಿ ಅನ್ವಯ ತೆರಿಗೆ ದರವನ್ನು ನಿಗದಿ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಏಕಾಏಕಿ ತೆರಿಗೆ ಹೆಚ್ಚಳ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ಅನ್ವಯ ತೆರಿಗೆ ದರ ಪರಿಷ್ಕರಿಸಲು ಆದೇಶವಾಗಿದೆ. ಅದರಂತೆ ಪರಿಷ್ಕರಣೆ ಮಾಡಲಾಗಿದೆ.

"ಇದು ಕೇವಲ ಹೊಸಪೇಟೆಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದ ಎಲ್ಲ ನಗರ ಪ್ರದೇಶಗಳಿಗೆ ಅನ್ವಯವಾಗಲಿದೆ. ತೆರಿಗೆ ಪರಿಷ್ಕರಿಸದಿದ್ದರೆ ರಾಜ್ಯ, ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯ 10 ಕೋಟಿ, ವಿದ್ಯುತ್ ಬಿಲ್ ಅನುದಾನ ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಆದಕಾರಣ ತೆರಿಗೆ ಪರಿಷ್ಕರಿಸಲಾಗಿದೆ" ಎಂದು ನಗರಸಭೆ ಆಯುಕ್ತ ಮನ್ಸೂರ ಅಲಿ ಮಾಹಿತಿ ನೀಡಿದರು.
ತೆರಿಗೆ ಕಟ್ಟಬೇಕು; ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡು ದಶಕ ಕಳೆದರೂ ಇನ್ನೂ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ. ನಗರದ 35 ವಾರ್ಡ್ಗಳಲ್ಲಿ ಇನ್ನೂ ಒಳ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ ನಗರದ 15ನೇ ವಾರ್ಡ್ ಅಮರಾವತಿ ಬಡಾವಣೆಯಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸದಿದ್ದರೂ ಸಹ ಯುಜಿಡಿ ತೆರಿಗೆಯನ್ನು ನಗರಸಭೆ ವಸೂಲಿ ಮಾಡುತ್ತಿದೆ.
ನಾಗರಿಕರ ಅನುಕೂಲಕ್ಕಾಗಿ ನಗರಸಭೆ ವೆಬ್ಸೈಟ್ನಲ್ಲಿ ತೆರಿಗೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ, ತೆರಿಗೆ ಹೆಚ್ಚಳದ ಆದೇಶ ಹೊರಬಿದ್ದು 3+4 ದಿನಗಳು ಕಳೆದರೂ ಈವರೆಗೆ ವೆಬ್ಸೈಟ್ನಲ್ಲಿ ಯಾವುದೇ ಮಾಹಿತಿ ಅಪ್ಲೋಡ್ ಮಾಡಿಲ್ಲ.
"ನಗರದ ಸಂಘ-ಸಂಸ್ಥೆಗಳು, ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘಗಳೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಯನ್ನು ಮಾಡದೇ ಏಕ ಪಕ್ಷೀಯವಾಗಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಕೂಡಲೇ ಆದೇಶ ಹಿಂಪಡೆದು, ಕಳೆದ ಸಾಲಿನಲ್ಲಿದ್ದ ತೆರಿಗೆ ದರ ಮುಂದುವರಿಸಲು ಕ್ರಮವಹಿಸುವಂತೆ ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿಗೆ, ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ" ಎಂದು ತಾಲೂಕು ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೋತಂಬ್ರಿ ಹೇಳಿದ್ದಾರೆ.
ಆಯುಕ್ತರ ಹೇಳಿಕೆ; "ಸರ್ಕಾರದ ಆದೇಶದಂತೆ 2021-22ನೇ ಸಾಲಿನ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಆದ ಕಾರಣ ಮನೆ, ವಾಣಿಜ್ಯ, ವಾಣಿಜ್ಯೇತರ ಕಟ್ಟಡಗಳ ತೆರಿಗೆ ಶೇ 10 ಬಾಡಿಗೆ ಹೆಚ್ಚಳವಾಗಿದೆ. ಹಾಗೆಯೇ ಖಾಲಿ ನಿವೇಶನಗಳ ತೆರಿಗೆ ಶೇ 30 ಹೆಚ್ಚಳವಾಗಿದೆ. ಉಪನೋಂದಣಾಧಿಕಾರಿಗಳು ನಿಗದಿಪಡಿಸಿರುವ ಬೆಲೆಯ ಆಧಾರದ ಮೇಲೆ ತೆರಿಗೆ ನಿಗದಿಯಾಗಲಿದೆ. ಎಲ್ಲಾ ವಾರ್ಡ್ಗಳಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ನಿರ್ವಹಣೆ ಇಲ್ಲದ್ದರಿಂದ ಸಮಸ್ಯೆಯಾಗಿದೆ. ಒಳಚರಂಡಿ ಕರವನ್ನು ವಿಧಿಸಲಾಗುತ್ತಿದೆ" ಎಂದು ಹೊಸಪೇಟೆ ನಗರಸಭೆ ಆಯುಕ್ತ ಮನ್ಸೂರ್ ಅಲಿ ಹೇಳಿದ್ದಾರೆ.












Click it and Unblock the Notifications