ಹಂಪಿ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನ
ಬಳ್ಳಾರಿ, ಏಪ್ರಿಲ್ 25; ಹಂಪಿಯ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನರಾಗಿದ್ದಾರೆ. ಶಿವಲಿಂಗದ ಪಾಣಿಪೀಠದ ಮೇಲೆಯೇ ಹತ್ತಿ ಸುಮಾರು 40 ವರ್ಷಗಳಿಂದ ಅವರು ಪೂಜೆ ಸಲ್ಲಿಸುತ್ತಿದ್ದರು.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣ ಭಟ್ ಭಾನುವಾರ ಮುಂಜಾನೆ ನಿಧನ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಗಣ್ಯರು ಕೃಷ್ಣಭಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ಈಗ ಶಿವನಲ್ಲಿ ಐಕ್ಯರಾಗಿದ್ದಾರೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್ 1979ರಲ್ಲಿ ಹಂಪಿಗೆ ಆಗಮಿಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದರು. ಕಳೆದ ವರ್ಷ ಅನಾರೋಗ್ಯದ ಕಾರಣ ಪೂಜೆ ನಿಲ್ಲಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಭಟ್ ಅವರ ಫೋಟೋಗಳು ವೈರಲ್ ಆಗಿದ್ದವು. ಅವರು ಶಿವಲಿಂಗದ ಪಾಣಿಪೀಠದ ಮೇಲೆ ಹತ್ತಿ ಪೂಜೆ ಮಾಡುವುದು ಹಲವರ ವಿಸ್ಮಯಕ್ಕೆ ಕಾರಣವಾಗಿತ್ತು. ಪ್ರಸ್ತುತ ಕೃಷ್ಣ ಭಟ್ ಪುತ್ರ ದೇವಾಲಯದ ಪೂಜೆ ಮಾಡುತ್ತಿದ್ದಾರೆ.
ಬಡವಿಲಿಂಗ ದೇವಾಲಯ ಸಾಮಾನ್ಯವಾದದ್ದಲ್ಲ. ನೀರಿನೊಳಗೆ ಇರುವ ಶಿವಲಿಂಗ ಸುಮಾರು 3 ಮೀಟರ್ ಎತ್ತರದ ಏಕಶಿಲಾ ವಿಗ್ರಹವಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಇದನ್ನು ಕೆತ್ತಲಾಗಿದೆ.
ಅವರು ಬಡವಿ ಲಿಂಗದಲ್ಲಿ ನೆಲೆಸಿದ ಶಿವನಲ್ಲಿ ಐಕ್ಯವಾಗಿ ಬಹು ಕಾಲವೆ ಆಗಿತ್ತು. ಇಂದು ಇಹಕಾಯವನ್ನಾಗಲಿದ್ದಾರೆ, ಮೋಕ್ಷ ಪ್ರಾಪ್ತಿಯಾಗಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) April 25, 2021
ಓಂ ಶಾಂತಿ ಶ್ರೀ ಕೃಷ್ಣ ಭಟ್ಟರೆ...#ಓಂಶಾಂತಿ pic.twitter.com/Pv6uKxybv7
ನೀರಿನೊಳಗೆ ಇರುವ ವಿಶಾಲವಾದ ಲಿಂಗಕ್ಕೆ ಪೂಜೆ ಸಲ್ಲಿಸಲು ಲಿಂಗದ ಪಾಣಿಪೀಠವನ್ನು ಕೃಷ್ಣ ಭಟ್ ಏರುವುದು ಅನಿವಾರ್ಯವಾಗಿತ್ತು. ಭಟ್ ಪಾಣಿಪೀಠ ಏರಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಪ್ಪು ಕಲ್ಲಿನಿಂದ ಕೆತ್ತಲಾಗಿರುವ ಲಿಂಗದ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುತ್ತದೆ. ಹಂಪಿಗೆ ಭೇಟಿ ನೀಡುವ ಹಲವು ಪ್ರವಾಸಿಗರು ಕೃಷ್ಣ ಭಟ್ ಅವರನ್ನು ಮಾತನಾಡಿಸದೇ ವಾಪಸ್ ಬರುತ್ತಿರಲಿಲ್ಲ.












Click it and Unblock the Notifications