ಜನಸಂಕಲ್ಪ: ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ನದ್ದು, ಬಿಜೆಪಿಯಲ್ಲಿ ಇಲ್ಲ- ಬಸವರಾಜ ಬೊಮ್ಮಾಯಿ
ವಿಜಯನಗರ, ಅಕ್ಟೋಬರ್ 13: ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ನದ್ದು, ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ. ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂವಿನಹಡಗಲಿಯಲ್ಲಿ ವ್ಯಂಗ್ಯವಾಡಿದರು.
ಹೂವಿನಹಡಗಲಿಯಲ್ಲಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, "ಹಿಂದಿನ ಮುಖ್ಯಮಂತ್ರಿ ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರುವುದು ಕಾಂಗ್ರೆಸ್ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ. ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ. ನಮಗೆ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ರಾಜ್ಯದ ಜನರು ಈಗ ಜಾಗೃತರಾಗಿದ್ದಾರೆ. ನೀವು ಆ ಭಾಗ್ಯ ಈ ಭಾಗ್ಯ ಅಂತ ಹೇಳಿಕೊಂಡು ಲೂಟಿ ಮಾಡಿದ್ದೀರಿ. ಅನ್ನಭಾಗ್ಯ ಅಂತ ಹೇಳಿಕೊಂಡು ಕನ್ನ ಭಾಗ್ಯ ಮಾಡಿದ್ದೀರಿ. ಎಸ್ಸಿ, ಎಸ್ಟಿಗೆ ಕೊಳವೆಬಾವಿ ಕೊರೆಸಿದ್ದೇವೆ ಎಂದು ಲೂಟಿ ಮಾಡಿದ್ದೀರಿ. ನೀವು ಭಾಗ್ಯ ಕೊಟ್ಟಿದ್ದರೆ ಜನರು ನಿಮ್ಮನ್ನು ಯಾಕೆ ಸೋಲಿಸುತ್ತಿದ್ದರು? ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿದ್ದರೆ, ಅದು ಕಾಂಗ್ರೆಸ್ನ ಭ್ರಷ್ಟಾಚಾರದಿಂದ," ಎಂದು ಗುಡುಗಿದರು.
SCST ಮೀಸಲಾತಿ ಹೆಚ್ಚಳ, ಹಲವು ದಶಕಗಳ ಬೇಡಿಕೆ ಇಡೇರಿಸಿದ್ದೇವೆ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ವಿರುದ್ದ ಬೊಮ್ಮಾಯಿ ವಾಗ್ದಾಳಿ
"ನಾಳೆ ಕಾಂಗ್ರೆಸ್ ಪಾದಯಾತ್ರೆ ಬಳ್ಳಾರಿಗೆ ಬರುತ್ತಿದೆ. ನೀವೆಲ್ಲಾ ಸೇರಿ ಸೋನಿಯಾ ಗಾಂಧಿಗೆ ಎಂಪಿ ಮಾಡಿ ಆರಿಸಿ ಕಳುಹಿಸಿದ್ದೀರಿ. ಅವರು ಆಯ್ಕೆಯಾಗಿ ಬಂದ ಮೆಲೆ ಇಲ್ಲಿನ ಸ್ಥಾನಕ್ಕೆ ರಾಜಿನಾಮೆ ನೀಡಿ ಉತ್ತರ ಪ್ರದೇಶಕ್ಕೆ ಹಾರಿ ಹೋದರು. ಆಗ 3,000 ಕೋಟಿ ರೂಪಾಯಿ ಪ್ಯಾಕೇಜ್ ಕೊಡುತ್ತೇನೆ ಎಂದು ಹೇಳಿದ್ದರು. ಆ 3,000 ಕೋಟಿ ರೂಪಾಯಿ ಎಲ್ಲಿ ಹೋಯಿತು? ನಿಮ್ಮ ಮತವನ್ನು ಪಡೆದುಕೊಂಡು, ಈ ಕ್ಷೇತ್ರವನ್ನು ತಿರುಗಿಯೂ ನೋಡದ ಕಾಂಗ್ರೆಸ್ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.
ಜನರಿಗೆ ಸಿಎಂ ಬೊಮ್ಮಾಯಿ ಕಿವಿಮಾತು
ಈಗ ಸೋನಿಯಾ ಗಾಂಧಿ ಅವರ ಮಗ ಬರುತ್ತಿದ್ದಾನೆ. ನಿಮ್ಮ ತಾಯಿಯನ್ನು ಆರಿಸಿ ಕಳುಹಿಸಿದ್ದೆವು ಅವರು ಏನು ಮಾಡಿದ್ದರು? ಈಗ ನೀವು ಏನು ಸುಳ್ಳು ಹೇಳಲು ಬಂದಿದ್ದೀರಿ ಎಂದು ಜನ ಪ್ರಶ್ನಿಸಬೇಕು. ಈ ಭಾಗದಲ್ಲಿ ಸುಳ್ಳು ನಡೆಯುವುದಿಲ್ಲ. ಎಂಬ ಸಂದೇಶ ನೀಡಬೇಕು ಎಂದು ಜನರಿಗೆ ಬಸವರಾಜ ಬೊಮ್ಮಾಯಿ ಹೇಳಿದರು.
ಸಣ್ಣ ಪುಟ್ಟ ವ್ಯತ್ಯಾಸವನ್ನು ಬದಿಗಿಡಬೇಕು
ಹೂವಿನಹಡಗಲಿಯಲ್ಲಿ ಈ ಬಾರಿ ಕಮಲ ಅರಳುತ್ತದೆ. ನಾಯಕರುಗಳು ನಿಮ್ಮಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ಬದಿಗಿಡಬೇಕು. ಯಾರಿಗೆ ಟಿಕೆಟ್ ನೀಡಿದರೂ ನಿಷ್ಟೆಯಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾರ್ಯಕರ್ತರ ಬಳಿ ಮುಖ್ಯಮಂತ್ರಿಗಳು ಪ್ರಮಾಣ ಮಾಡಿಸಿದರು.
ಎಂ.ಪಿ.ಪ್ರಕಾಶ್ ಬಗ್ಗೆ ಮುಖ್ಯಮಂತ್ರಿ ಹೇಳಿದ್ದೇನು?
ನಮ್ಮ ಹಿರಿಯರಾದ ಎಂ.ಪಿ.ಪ್ರಕಾಶ್ ಅವರು ಇಡೀ ಜೀವನವನ್ನು ಕಾಂಗ್ರೆಸ್ ವಿರೋಧ ಮಾಡುತ್ತಾ ಬಂದಿದ್ದರು. ಆದರೆ ಅವರು ಯಾಕೆ ಕಾಂಗ್ರೆಸ್ಗೆ ಹೋಗಿದ್ದಾರೆಯೋ ಗೊತ್ತಿಲ್ಲ. ಕಾಂಗ್ರೆಸ್ ಅಂದರೆ ಸೋಲು, ಅಲ್ಲಿಗೆ ಹೋದರೆ ಸೋಲುವುದು ಖಚಿತ. ಆದರೆ ಅವರ ಕನಸಿನ ಯೋಜನೆಗಳನ್ನು ನಾನು ಜಾರಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದ್ ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.