ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಪಿಐಎಲ್ ವಜಾ
ಬಳ್ಳಾರಿ, ಜನವರಿ 04: ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸಿ ವಿಜಯನಗರವನ್ನು ಹೊಸ ಜಿಲ್ಲೆಯಾಗಿ ರಚನೆ ಮಾಡಲು ಕರ್ನಾಟಕ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಹೊಸ ಜಿಲ್ಲೆಯ ರಚನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರ ವಿಜಯನಗರ ಜಿಲ್ಲಾ ರಚನೆ ಬಗ್ಗೆ ಅಧಿಸೂಚನೆ ಪ್ರಕಟಿಸಿದೆ ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಸರ್ಕಾರ ಕರಡು ಅಧಿಸೂಚನೆಯನ್ನು ಮಾತ್ರ ಹೊರಡಿಸಿದೆ. ನೀತಿ ಸಂಹಿತೆ ಜಾರಿ ವಿಚಾರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು ಎಂದು ಸರ್ಕಾರದ ಪರವಾಗಿ ವಕೀಲ ವಿಕ್ರಮ್ ಹುಯಿಲ್ಗೋಳ್ ವಾದ ಮಂಡನೆ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಪಿಐಎಲ್ ವಜಾಗೊಳಿಸಿದೆ. ತರಕಾರು ಇದ್ದರೆ ಚುನಾವಣಾ ಆಯೋಕ್ಕೆ ಮನವಿ ಸಲ್ಲಿಸಲು ಸೂಚನೆ ನೀಡಿದೆ. ಕರ್ನಾಟಕ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಸಹ ಅವಕಾಶವನ್ನು ನೀಡಲಾಗಿದೆ.
ಬಳ್ಳಾರಿ ವಿಭಜನೆ; ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಹೊಸ ಜಿಲ್ಲೆಯಾಗಿ ರಚನೆ ಮಾಡಲಾಗುತ್ತಿದೆ. ಹೊಸಪೇಟೆ ಹೊಸ ಜಿಲ್ಲೆಯ ಕೇಂದ್ರಸ್ಥಾನವಾಗಲಿದೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹೊರಪನಹಳ್ಳಿ ಹೊಸ ಜಿಲ್ಲೆಗೆ ಸೇರಲಿವೆ.
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಗಿ ತಾಲೂಕುಗಳು ಉಳಿದುಕೊಳ್ಳಲಿವೆ. ಹೊಸ ಜಿಲ್ಲೆ ರಚನೆ ಮಾಡಬಾರದು ಎಂದು ಬೃಹತ್ ಹೋರಾಟವೂ ನಡೆಯುತ್ತಿದೆ.












Click it and Unblock the Notifications