ಬಳ್ಳಾರಿ ಅಪಘಾತ ಪ್ರಕರಣ; ಸತ್ತ ರವಿ ನಾಯ್ಕನ ಮನೆಯವರಿಗೆ ಉತ್ತರ ನೀಡುವವರಾರು?
ಬಳ್ಳಾರಿ, ಫೆಬ್ರವರಿ 14: ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಬಹು ಚರ್ಚಿತ ವಿಷಯ ಎಂದರೆ ಬಳ್ಳಾರಿಯ ಕಾರು ಅಪಘಾತ. ಬಳ್ಳಾರಿಯ ಹೊಸಕೋಟೆ ಹೊರವಲಯದ ಮರಿಯಮ್ಮನ ಹಳ್ಳಿಯಲ್ಲಿ ಫೆಬ್ರವರಿ 10ರಂದು ನಡೆದಿದ್ದ ಅಪಘಾತ ಎರಡು ದಿನಗಳ ನಂತರ ಸುದ್ದಿಯಾಗಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅಪಘಾತ ಮಾಡಿದ ಕಾರಿನಲ್ಲಿ ಸಚಿವ ಆರ್ ಅಶೋಕ್ ಮಗ ಇದ್ದರೋ ಇರಲಿಲ್ಲವೋ ಎಂಬುದೇ ಚರ್ಚೆಯ ಕೇಂದ್ರಿತ ವಿಷಯವಾಗಿತ್ತು.
ಈ ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲೂ ಗೊಂದಲಮಯ ಹೇಳಿಕೆಗಳು ವ್ಯಕ್ತವಾದವು. ಕಂದಾಯ ಸಚಿವ ಆರ್ ಅಶೋಕ್, ತಮ್ಮ ಮಗ ಆ ಕಾರಿನಲ್ಲಿರಲಿಲ್ಲ ಎಂದರು. ಪೊಲೀಸರು ಕೂಡ ಇದೇ ಹೇಳಿಕೆಯನ್ನು ನೀಡಿದರು. ವೈದ್ಯರು ಮತ್ತೊಂದು ಹೇಳಿಕೆ ನೀಡಿದರು.
ಬಳ್ಳಾರಿಯಲ್ಲಿ ಕಾರು ಅಪಘಾತ; "ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ" ಎಂದ ರವಿ ನಾಯ್ಕ್ ಅಜ್ಜಿ
ಆದರೆ ಈ ಅಪಘಾತದಲ್ಲಿ ಬಲಿಪಶುವಾದ ಸ್ಥಳೀಯ ರವಿ ನಾಯ್ಕ್ ಸಾವಿನ ಬಗ್ಗೆ ಗಮನ ಕೊಟ್ಟವರೇ ಕಡಿಮೆ. ಮನೆ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಈ ಕುಟುಂಬವನ್ನು ನೋಡಿದರೆ ಎಂಥವರ ಮನಸ್ಸೂ ಭಾರವಾಗದೇ ಇರದು...
ಅಪಘಾತದಲ್ಲಿ ನಂದಿದ ಮನೆಯ ದೀಪ
ಅಪಘಾತದಲ್ಲಿ ಮೃತಪಟ್ಟ ರವಿ ನಾಯ್ಕ ಮರಿಯಮ್ಮನಹಳ್ಳಿಯ ತಾಂಡಾದಲ್ಲಿ ವಾಸವಿದ್ದದ್ದು. ತಂದೆ ತಾಯಿ ಮನೆಯವರೆಲ್ಲರೂ ಕೂಲಿ ಕೆಲಸ ಮಾಡುತ್ತಾರೆ. ಬಸವಣ್ಣ ನಾಯ್ಕ ದಂಪತಿಗೆ ಒಟ್ಟು ನಾಲ್ಕು ಮಕ್ಕಳು. ಅದರಲ್ಲಿ ರವಿ ನಾಯ್ಕ ಎರಡನೇ ಮಗ. ಇಡೀ ನಾಲ್ಕು ಮಂದಿಯಲ್ಲಿ ಓದುತ್ತಿದ್ದುದು ರವಿ ನಾಯ್ಕ ಮಾತ್ರ. ಉಳಿದವರೆಲ್ಲರೂ ಕೂಲಿ ಕೆಲಸ, ಗಾರೆ ಕೆಲಸ ಮಾಡಿಕೊಂಡಿದ್ದರು. ಎಂಟನೇ ತರಗತಿ ನಂತರ ರವಿ ನಾಯ್ಕ ಕೂಡ ಶಾಲೆ ಬಿಟ್ಟಿದ್ದ. ಆದರೆ ಓದಿನಲ್ಲಿ ಜಾಣನಾಗಿದ್ದ ಈತನನ್ನು ಮೂರು ವರ್ಷದ ನಂತರ, ಈ ವರ್ಷ ಮತ್ತೆ ಒಂಬತ್ತನೇ ತರಗತಿಗೆ ಸೇರಿಸಿದ್ದರು.
13 ದಿನಗಳ ಹಿಂದಷ್ಟೆ ಮೊದಲ ಮಗ ಸಾವನ್ನಪ್ಪಿದ
ಬಸವಣ್ಣ ನಾಯ್ಕ ಅವರ ಮೊದಲ ಮಗ, ಅಂದರೆ ರವಿ ನಾಯ್ಕ ಅಣ್ಣ ಹದಿಮೂರು ದಿನಗಳ ಹಿಂದಷ್ಟೆ ಸಾವನ್ನಪ್ಪಿದ್ದ. ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ನೋವು ತಗ್ಗುವ ಮುನ್ನವೇ ಮತ್ತೊಬ್ಬ ಮಗನ ಸಾವು ಸಿಡಿಲಿನಂತೆ ಎರಗಿದೆ. ಇನ್ನುಳಿದ ಇಬ್ಬರು ಮಕ್ಕಳಿಗೆ, ಮನೆಗೆ ದಾರಿ ದೀಪವಾಗುತ್ತಾನೆ ಎಂದುಕೊಂಡಿದ್ದ ತಂದೆ ತಾಯಿ ಆಸೆಯೂ ಮುರುಟಿಹೋಗಿದೆ. ತಾನು ಓದಿ ಎಂಜಿನಿಯರ್ ಆಗುತ್ತೇನೆ ಎಂದು ಹೇಳುತ್ತಿದ್ದ ಮಗನ ನೆನಪು ಅವರನ್ನು ಪದೇ ಪದೇ ಕಾಡದೇ ಇರಲು ಸಾಧ್ಯವಾದೀತೇ?
ಅಪಘಾತವಾದ ಕಾರಿನಲ್ಲಿದ್ದರೇ ಆರ್.ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳು
ಅಪಘಾತದ ದಿನ ಕಬ್ಬು ಕಡಿಯಲು ಹೋಗಿದ್ದ ತಂದೆ ತಾಯಿ
ಹೊಟ್ಟೆ ಪಾಡಿಗೆಂದು ಕಬ್ಬು ಕಡಿಯುವ ಕೆಲಸವನ್ನು ಮಾಡುವ ತಂದೆ ತಾಯಿ, ಆ ದಿನ ಎಚ್ ಡಿ ಕೋಟೆಗೆ ಕಬ್ಬು ಕಡಿಯಲೆಂದು ಹೋಗಿದ್ದರು. ಅವರಿಗೆ ಅಪಘಾತವಾದ ವಿಷಯ ಎಷ್ಟೋ ಸಮಯದವರೆಗೂ ಗೊತ್ತಿರಲಿಲ್ಲ. ನಂತರ ವಿಷಯ ತಿಳಿದು ಊರಿಗೆ ವಾಪಸ್ಸಾಗಿ ತಮ್ಮ ಮನಗ ಕಳೇಬರ ಕಂಡು ಕಣ್ಣೀರಾಗಿದ್ದಾರೆ. ಆದರೆ ಕನಿಷ್ಠ ಸೌಜನ್ಯಕ್ಕಾದರೂ ಯಾವ ದೊಡ್ಡ ವ್ಯಕ್ತಿಗಳೂ ಬಂದು ವಿಚಾರಿಸಿಲ್ಲ. ಮಗನ ಈ ದುರ್ಮರಣಕ್ಕೆ ಯಾರೂ ಸಾಂತ್ವನ ಕೂಡ ಹೇಳಿಲ್ಲ. ಯಾರು ಅಪಘಾತ ಮಾಡಿದ್ದು, ಯಾರು ಇದಕ್ಕೆ ಕಾರಣ ಇವ್ಯಾವುದೂ ಮಗನನ್ನು ಕಳೆದುಕೊಂಡ ಈ ತಂದೆ ತಾಯಿಗೆ ಗೊತ್ತಾಗಿಲ್ಲ.
ಗೋಳಿಡುತ್ತಿರುವ ರವಿ ನಾಯ್ಕ ಅಜ್ಜಿ
ತನ್ನ ಮೊಮ್ಮಗನನ್ನು ನೆನೆದು ಅಜ್ಜಿ ಶಾಂತಾಬಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಅಪಘಾತದಲ್ಲಿ ನನ್ನ ಮೊಮ್ಮಗನನ್ನು ಬಲಿ ಪಡೆದರು, ಅವರು ಎಷ್ಟೇ ಶ್ರೀಮಂತರಾದರೂ ಎಲ್ಲರ ಜೀವ ಒಂದೇ ಅಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನ ಮೊಮ್ಮಗ ಪಂಚರ್ ಹಾಕಸೋಕೆ ಹೋಗಿದ್ದ. ಅವನೇನು ತಪ್ಪು ಮಾಡಿಲ್ಲ, ನನ್ನ ಮೊಮ್ಮಗನನ್ನು ಸಾಯಿಸಿದ್ದಾರೆ. ನಾವು ಕಷ್ಟಪಟ್ಟು ಮೊಮ್ಮಗನನ್ನು ಓದಿಸುತ್ತಿದ್ದೆವು. ಎಂಜಿನಿಯರ್ ಆಗ್ತೀನಿ ಅಂತಿದ್ದ. ಈಗ ನನ್ನ ಮೊಮ್ಮಗನನ್ನು ತಂದು ಕೊಡ್ತಾರಾ..??" ಎಂದು ಕಣ್ಣೀರಾಗಿದ್ದಾರೆ.