ಬಿ.ರಾಮುಲುಗೆ ಸಾಥ್ ನೀಡುವರೆ ಇವರಿಬ್ಬರು
ಬಳ್ಳಾರಿ, ಮಾ. 13: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸದ್ದು ತಣ್ಣಗಾಗಿದೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀ ರಾಮುಲು ಅವರು ಬಿಜೆಪಿಗೆ ಮರಳಲು ಬಿಜೆಪಿ ವರಿಷ್ಠ ನಾಯಕರು ಒಪ್ಪಿಗೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯೊಡನೆ ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಬಿಜೆಪಿ ಸೇರದೇ ಇದ್ದಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು? ಪ್ರಶ್ನೆ ಅರ್ಥ ಕಳೆದುಕೊಂಡಿದೆ.
ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ತನ್ನ ಪ್ರಭುತ್ವ ಸಾಬೀತು ಪಡಿಸಲು ಶ್ರೀರಾಮುಲು ಅವರ ಜತೆಗೆ ಸಾಥ್ ನೀಡಬಲ್ಲ ಇಬ್ಬರು ಧುರೀಣರು ನಡೆಸಿದ ಯತ್ನದ ಬಗ್ಗೆ ಹಿನ್ನೋಟ ಇಲ್ಲಿದೆ:
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯ ಕಾರಣಕ್ಕಾಗಿ ವಿಮ್ಸ್ ಆಸ್ಪತ್ರೆಯ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿ, ಬಿಜೆಪಿ ಸೇರಿರುವ ಡಾ. ಟಿ. ಶ್ರೀನಿವಾಸ್ ಮತ್ತು ಬಿ. ಶ್ರೀರಾಮುಲು ವಿರುದ್ಧ ಸ್ಪರ್ಧಿಸಿದ್ದ ಬಿ. ಗಾದಿಲಿಂಗಪ್ಪ ಅವರ ಹೆಸರು ಪಕ್ಷದ ವರಿಷ್ಠರ ಮುಂದೆ ಬಂದಿತ್ತು.

ಎಂ.ಎಸ್. ಸೋಮಲಿಂಗಪ್ಪ ಸಿರುಗುಪ್ಪ ವಿಧಾನಸಭಾ ಕ್ಷೇತ್ರವನ್ನು ಎರೆಡು ಬಾರಿ ಪ್ರತಿನಿಧಿಸಿದ್ದಾರೆ. ವಿವಾದಾತೀತರು ಎಂದು ಗುರುತಿಸಿಕೊಂಡು, ಪಕ್ಷದ ನಿಷ್ಠಾವಂತರು. ವೈದ್ಯ ಹುದ್ದೆಯನ್ನು ತ್ಯಜಿಸಿ ರಾಜಕೀಯಕ್ಕೆ ಎಂಟ್ರಿ ಕೊಡಲು ಕಾತುರರಾಗಿರುವ ಡಾ. ಟಿ. ಶ್ರೀನಿವಾಸ್ ಕಾಂಗ್ರೆಸ್ ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿ, ಮುಖ್ಯಮಂತ್ರಿ ಬಳಿ ಕೊಪ್ಪಳದ ಮೂಲಕ ತೀವ್ರ ಲಾಬಿ ನಡೆಸಿ ವಿಫಲರಾಗಿದ್ದರು.
ಬಿ. ಶ್ರೀರಾಮುಲು ಬಿಜೆಪಿ ಬಿಟ್ಟು ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿ ಬಳ್ಳಾರಿ ಗ್ರಾಮೀಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ. ಗಾದಿಲಿಂಗಪ್ಪ ಅವರ ಆಪತ್ಕಾಲದ ಆಪತ್ಭಾಂಧವ' ಆಗಿದ್ದರು.
ಆರ್ ಎಸ್ ಎಸ್ ಮುಖಂಡ ಸಂತೋಷ್ ಜೀ ಬಳ್ಳಾರಿಗೆ ಭೇಟಿ ನೀಡಿದಾಗ ಬೈಠಕ್ ನಲ್ಲಿ ಗುರುತಿಸಿಕೊಂಡು, ಖ್ಯಾತ ವೈದ್ಯ ಡಾ. ಬಿ.ಕೆ. ಶ್ರೀನಿವಾಸ್ ಅವರಿಂದ ಪ್ರಶಂಸೆಗೆ ಒಳಗಾಗಿ ಟಿಕೇಟ್ ಪಡೆಯಲು ಶಿಫಾರಸ್ಸು ಪಡೆದವರು. ಆರ್ ಎಸ್ ಎಸ್ ಸಭೆಯಲ್ಲಿ ಪಾಲ್ಗೊಂಡ ಪ್ರಥಮ ಸಭೆಯಲ್ಲಿಯೇ ಟಿಕೇಟ್'ಗೆ ಮನವಿ ಸಲ್ಲಿಸಿದವರು.
ಪಕ್ಷಕ್ಕೆ ನಿಷ್ಠಾವಂತ ಎಂ.ಎಸ್. ಸೋಮಲಿಂಗಪ್ಪ, ಟಿಕೇಟ್ ಗಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಡಾ. ಟಿ. ಶ್ರೀನಿವಾಸ್ ಮತ್ತು ಆಪತ್ಬಾಂಧವ ಬಿ. ಗಾದಿಲಿಂಗಪ್ಪ ಅವರಲ್ಲಿ ಯಾರು ಉತ್ತಮರು, ಸಮರ್ಥರು, ಪೈಪೋಟಿ ನೀಡುವವರು? ಇವರಲ್ಲಿ ಯಾರು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪರನ್ನು ಎದುರಿಸಿ, ಗೆಲ್ಲಲು ಸೂಕ್ತ ಎಂದು ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಹೈಕಮಾಂಡ್ ಗೊಂದಲದಲ್ಲಿತ್ತು.

ಬಿ. ಗಾದಿಲಿಂಗಪ್ಪ ಕುಟುಂಬದವರು ಎನ್.ವೈ. ಹನುಮಂತಪ್ಪ ಅವರ ಕುಟುಂಬದ ಜೊತೆ ವೈವಾಹಿಕ ಸಂಬಂಧ ಬೆಳೆಸಿರುವ ಕಾರಣ ಎನ್.ವೈ. ಹನುಮಂತಪ್ಪ ಅವರ ಗೆಲುವಿಗೆ ಶ್ರಮಿಸುವುದು ಸಹಜ. ಕಾರಣ ಅವರನ್ನು ಸ್ಪರ್ಧೆಗೇ ಪರಿಗಣಿಸಬಾರದು ಎಂದು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ ಎನ್ನಲಾಗಿತ್ತು.
ಈ ಹಿನ್ನಲೆಯಲ್ಲಿ ಎಂ.ಎಸ್. ಸೋಮಲಿಂಗಪ್ಪ ಮತ್ತು ಡಾ. ಟಿ. ಶ್ರೀನಿವಾಸ್ ಹೆಸರು ಮಾತ್ರ ಸ್ಪರ್ಧಾಸಕ್ತರಲ್ಲಿವೆ. ಬಿ. ಶ್ರೀರಾಮುಲು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಈ ಕುರಿತು ಚರ್ಚೆ ವ್ಯರ್ಥ. ಬಿ. ಶ್ರೀರಾಮುಲು ಗೆಲ್ಲುವ ಅಭ್ಯರ್ಥಿಯಾಗಿ ಪಕ್ಷಕ್ಕೆ ಅನಿವಾರ್ಯ - ಅವಶ್ಯಕ ಎಂದು ಬಿಜೆಪಿಯ ಉನ್ನತ ಮೂಲಗಳು ನಿರ್ಧರಿಸಿವೆ.












Click it and Unblock the Notifications