ಉಡುಪಿ ಗೋ ವ್ಯಾಪಾರಿ ಕೊಲೆ ಆರೋಪಿಗಳ ಬಂಧಿಸಿದ ಬಳ್ಳಾರಿ ಪೊಲೀಸರು
ಬಳ್ಳಾರಿ, ಜೂನ್ 01: ಗೋ ವ್ಯಾಪಾರಿ ಹಸೈನ್ ಅಲಿಯಾ ಹಸನಬ್ಬ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರನ್ನು ಬಳ್ಳಾರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ನಂತರ ಉಡುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರನ್ನು ಸೂರಿ, ಪ್ರಸಾದ್ ಮತ್ತು ದೀಪಕ್ ಎಂದು ಗುರುತಿಸಿದ್ದು ಮತ್ತೋರ್ವ ಆರೋಪಿ ಪರಾರಿ ಆಗಿದ್ದಾನೆ ಆರೋಪಿಗಳು ಎಲ್ಲರೂ ಉಡುಪಿ ಜಿಲ್ಲೆಯ ಪೆರ್ಡೂರ್ ಎಂಬಲ್ಲಿ ಮೇ 29 ರಂದು ನಡೆದ ಗೋ ವ್ಯಾಪಾರಿ ಹಸೈನ್ ಅಲಿಯಾ ಹಸನಬ್ಬ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು.

ಬಳ್ಳಾರಿಯ ಹೋಟಲ್ನಲ್ಲಿ ಹಸೈನ್ ಕೊಲೆ ಆರೋಪಿಗಳು ತಂಗಿರುವ ಮಾಹಿತಿಯನ್ನು ಪಡೆದ ಉಡುಪಿ ಪೊಲೀಸರು, ಬಳ್ಳಾರಿ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಕೋರಿದರು.
ಉಡುಪಿ ಪೊಲೀಸರ ಮಾಹಿತಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಬಳ್ಳಾರಿ ಪೊಲೀಸರು ಮೂರು ತಂಡಗಳಲ್ಲಿ ಕಾರ್ಯಾಚರಣೆ ನಡೆಸಿ, ನಗರದ ಹೃದಯಭಾಗದಲ್ಲಿ ಇರುವ ಹೋಟೆಲ್ನಲ್ಲಿ ತಂಗಿರುವ ಮಾಹಿತಿಯನ್ನು ಖಚಿತಪಡಿಸಿಕೊಂಡರು. ಗುರುವಾರ ರಾತ್ರಿ ಹೊಟೆಲ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಓರ್ವ ಪರಾರಿ ಆಗಿದ್ದಾನೆ. ಬಳ್ಳಾರಿ ಪೊಲೀಸರು ವಿಚಾರಣೆ ಮಾಡಿದಾಗ, ಆರೋಪಿಗಳು ಹಸೈನ್ ಅಲಿಯಾ ಹಸನಬ್ಬ ಕೊಲೆ ಪ್ರಕರಣದ ಮಾಹಿತಿ ನೀಡಿದ್ದಾರೆ, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿರುವ ಸ್ಥಳದ ಮಾಹಿತಿಯನ್ನೂ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಡುಪಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ಮುಂದುವರೆಸಿದ್ದಾರೆ. ಮಂಗಳೂರಿನ ಜೋಕಟ್ಟೆ ನಿವಾಸಿ 65 ವರ್ಷದ ಹಸನಬ್ಬ ಅಲಿಯಾ ಹಸೈನ್ ಕಳೆದ 35 ವರ್ಷಗಳಿಂದ ಗೋ ಮಾರಾಟ ಮತ್ತು ಸಾಗಾಣಿಕೆ ವ್ಯವಹಾರ ಮಾಡುತ್ತಿದ್ದು, ಮೇ 29 ರಂದು ಕೊಲೆ ಆಗಿದ್ದರು.











Click it and Unblock the Notifications