ಬಳ್ಳಾರಿಯಲ್ಲಿ ವಿಶೇಷ : ಬಿಜೆಪಿ ಅಭ್ಯರ್ಥಿ ಪರ ಕಾಂಗ್ರೆಸ್ ಸದಸ್ಯೆ ಪಾದಯಾತ್ರೆ
ಬಳ್ಳಾರಿ, ಏಪ್ರಿಲ್ 01: ಬಳ್ಳಾರಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಹರಪನಹಳ್ಳಿ ಅರಸಿಕೆರೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾದಯಾತ್ರೆ ನಡೆಸಿ, ಶುಭ ಕೋರಿದ್ದಾರೆ. ಬಿರು ಬಿಸಿಲಿನ, ಗಡಿನಾಡು ಬಳ್ಳಾರಿಯಲ್ಲಿ ಪತಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಪತ್ನಿ ಕಾಂಗ್ರೆಸ್ನಿಂದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಅಭ್ಯರ್ಥಿ. ಬಿಜೆಪಿಯಿಂದ ಬಿ.ಶ್ರೀರಾಮುಲು ಅವರ ಆಪ್ತರಾದ ದೇವೇಂದ್ರಪ್ಪ ಕಣದಲ್ಲಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಸಮಗ್ರ ಚಿತ್ರಣ
ಹರಪನಹಳ್ಳಿಯ ಅರಸಿಕೆರೆಯಿಂದ ಸುಶೀಲಮ್ಮ ಅವರು ದಾವಣಗೆರೆ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನದ ಅವಧಿ ಪೂರ್ಣಗೊಳ್ಳುವ ತನಕ ಸುಶೀಲಮ್ಮ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು: ಶ್ರೀರಾಮುಲು
ಹೀಗಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಸುಶೀಲಮ್ಮ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ಪತಿ ದೇವೇಂದ್ರಪ್ಪ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಬಿಜೆಪಿಯ ಲೋಕಸಭಾ ಅಭ್ಯರ್ಥಿ ವೈ ದೇವೇಂದ್ರಪ್ಪ ಮಾತನಾಡಿ
ಬಳ್ಳಾರಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ವೈ ದೇವೇಂದ್ರಪ್ಪ ಮಾತನಾಡಿ, ನಾನು ಗೆಲ್ಲಬೇಕೆಂದು ನನ್ನ ಪತ್ನಿ ಸುಶೀಲಮ್ಮ ಅವರು ಪಾದಯಾತ್ರೆಯ ಮೂಲಕ ಮತ ಯಾಚಿಸುತ್ತಿದ್ದಾರೆ. ಹಡಗಲಿಯ ಮದಲಗಟ್ಟೆ ಆಂಜನೇಯ ದೇವಸ್ಥಾನದಿಂದ ನೂರಕ್ಕೂ ಹೆಚ್ಚು ಮಹಿಳೆಯರೊಂದಿಗೆ ಪಾದಯಾತ್ರೆ ಮಾಡ್ತಿದ್ದಾರೆ. ಹೀಗಾಗಿ ನನ್ನ ಪತ್ನಿ ಕಾಂಗ್ರೆಸ್ ನಲ್ಲಿ ಉಳಿಯಲಿಕ್ಕೆ ಇನ್ನೇನು ಉಳಿದಿದೆ. ಎಲ್ಲಾ ವಿಚಾರಗಳನ್ನು ನನ್ನ ಬಾಯಿಯಿಂದ ಹೊರಡಿಸುವ ಪ್ರಯತ್ನ ಬೇಡ ನನ್ನ ಪತ್ನಿಯನ್ನೇ ಪ್ರಶ್ನಿಸಿ. ಅವರು ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದರು.
''ಪತ್ನಿ ನನ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ?"
''ಪತ್ನಿ ನನ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ?" ಎಂದು ಅವರನ್ನೇ ಕೇಳಬೇಕು. ಇದು ಪ್ರಜಾಪ್ರಭುತ್ವ ಅವರಿಗೂ ಅವರದ್ದೇ ಆದ ಹಕ್ಕು ಇದೆ' ಎಂದು ದೇವೇಂದ್ರಪ್ಪ ಅವರು ತಮ್ಮ ಹೆಸರು ಘೋಷಣೆಯಾದಾಗ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಪತಿ-ಪತ್ನಿ ಮೈತ್ರಿಯಿಂದ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ. ಈ ಬಗ್ಗೆ ಇನ್ನೂ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ದೇವೇಂದ್ರಪ್ಪ ಪ್ರಚಾರ
ಕಂಪ್ಲಿ ವಿಧಾನಸಭಾ ಕ್ಷೇತ್ರದ ಹೆಚ್ ವೀರಾಪುರ, ಗುತ್ತಿಗನೂರು, ಎಮ್ಮಿಗನೂರು, ಸಾಣಾಪುರ, ಮುದ್ದಾಪುರ, ಮೇಟ್ರಿ, ದೇವಲಾಪುರ ಹಾಗೂ ಕಂಪ್ಲಿಯಲ್ಲಿ ಇಂದು ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಚುನಾವಣಾ ಪ್ರಚಾರದಲ್ಲಿ ಕಂಪ್ಲಿ ಮಾಜಿ ಶಾಸಕ ಟಿ ಹೆಚ್ ಸುರೇಶ್ ಬಾಬು ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರುಗಳು ಭಾಗವಹಿಸಿದ್ದರು.
ನಾನು ಬಳ್ಳಾರಿಯ ಮನೆ ಮಗ
'ನಾನು ಬಳ್ಳಾರಿಯ ಮನೆ ಮಗ. ಇಲ್ಲಿನ ಜನರೊಂದಿಗೆ ಹಳೆಯ ನಂಟಿದೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ',ಜನಸಾಮಾನ್ಯರ ನೋವುಗಳನ್ನ ಬಹಳ ಹತ್ತಿರದಿಂದ ನೋಡಿದ್ದೇನೆ. ನನ್ನ ರಾಜಕೀಯ ಅನುಭವದಲ್ಲಿ ನಾನು ನೋಡಿರುವಂತಹ ಹಾಗೂ ಸ್ಪಂದಿಸಿರುವಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆ ಎಂದು ದೇವೇಂದ್ರಪ್ಪ ಹೇಳಿದರು.