ಬರ ಪರಿಶೀಲನೆ ವೇಳೆ ಬಿಸಿಯೂಟದ ರುಚಿ ನೋಡಿದ ಸಿಎಂ
ಬೆಂಗಳೂರು, ಮೇ 02 : ಬರಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಇಂದು ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಸೋಮವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಬಳ್ಳಾರಿಯ ತೋರಣಗಲ್ನಲ್ಲಿರುವ ಜಿಂದಾಲ್ ಹೆಲಿಪ್ಯಾಡ್ಗೆ ಆಗಮಿಸಿದ ಸಿದ್ದರಾಮಯ್ಯ ಅವರು, ಬಳ್ಳಾರಿ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಬರ ಮತ್ತು ಪರಿಹಾರ ಕಾಮಗಾರಿ ಪರಿಶೀಲನೆ ನಡೆಸಿದರು. [ಕುಡಿಯುವ ನೀರಿಗೂ ಸಂಕಷ್ಟ : ಬರಗಾಲಕ್ಕೆ ಕಾರಣ ಯಾರು?]

ಕುರುಗೋಡು ಪುರಸಭೆಯ ಕುಡಿಯುವ ನೀರಿನ ಕೆರೆಯಲ್ಲಿ ನೀರು ತುಂಬುವುದನ್ನು ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಅವರು, ನಂತರ ಜಿಲ್ಲಾ ಬರ ಪರಿಶೀಲನಾ ಸಭೆ ನಡೆಸಿದರು. ತಮ್ಮ ಪ್ರವಾಸದ ನಡುವೆ ಬಳ್ಳಾರಿಯ ಬೈಲೂರಿನ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟರು. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಬಿಸಿಯೂಟ ಸೇವಿಸಿದ ಸಿದ್ದರಾಮಯ್ಯ : ಬರಗಾಲದ ಪರಿಣಾಮ ಶಾಲಾ ಮಕ್ಕಳ ಮೇಲೆ ಬೀರಬಾರದು ಎಂಬ ಉದ್ದೇಶದಿಂದ ಸರ್ಕಾರ ರಜಾ ದಿನಗಳಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ಆದೇಶ ಹೊರಡಿಸಿದೆ. ಬೈಲೂರಿನ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟವನ್ನು ಬಡಿಸಿದ ಸಿದ್ದರಾಮಯ್ಯ ಅವರು ಬಿಸಿಯೂಟದ ರುಚಿ ನೋಡಿ ಗುಣಮಟ್ಟವನ್ನು ಪರಿಶೀಲಿಸಿದರು.
ಇಂದು ಸಂಜೆ 7.45ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಸಿದ್ದರಾಮಯ್ಯ ಅವರು ವಾಪಸ್ ಆಗಲಿದ್ದಾರೆ. ಮಂಗಳವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅವಲೋಕಿಸಲಿದ್ದಾರೆ. [ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು]
ಅಂದಹಾಗೆ ಸಿದ್ದರಾಮಯ್ಯ ಅವರು ಈಗಾಗಲೇ ಮೊದಲ ಹಂತದ ಬರ ಅಧ್ಯಯನ ಪ್ರವಾಸವನ್ನು ಏ.15ರಿಂದ ಏ.17ರವರೆಗೆ ಹಮ್ಮಿಕೊಂಡಿದ್ದರು. ಏ.15ರಂದು ಬೀದರ್, ಕಲಬುರಗಿ, ಏ.16ರಂದು ರಾಯಚೂರು, ಯಾದಗಿರಿ, ಏ.17ರಂದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ['ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ']
ಎರಡನೇ ಹಂತದ ಪ್ರವಾಸ ಏ. 25ರಿಂದ ಏ.27ರವರೆಗೆ ನಡೆದಿತ್ತು. ಏ.25ರಂದು ಬೆಳಗಾವಿ, ಏ.26ರಂದು ಧಾರವಾಡ ಮತ್ತು ಹಾವೇರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಏ.27ರಂದು ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದರು.












Click it and Unblock the Notifications