ಲಿಂಗಾಯತ-ದಲಿತ ಕಾಂಬಿನೇಷನ್, ಬಿಜೆಪಿಯಿಂದ ಶ್ರೀರಾಮುಲು ಡಿಸಿಎಂ!
Recommended Video

ಕರ್ನಾಟಕ ಬಿಜೆಪಿಗೆ ದಲಿತರ ಮತಗಳನ್ನು ಸೆಳೆಯುವ ಅನಿವಾರ್ಯ ಅರ್ಥವಾಗಿದ್ದು, ಆ ಕಾರಣಕ್ಕೆ ಪರಿಶಿಷ್ಟ ಪಂಗಡದ ನಾಯಕ- ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಆಗಿ ಬಿಂಬಿಸಲು ಹೊರಟಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ವಿಜಯಿಯಾದರೆ ಶ್ರೀರಾಮುಲು ಡೆಪ್ಯೂಟಿ ಸಿಎಂ ಎಂದು ಸುದ್ದಿ ಹರಿದಾಡುತ್ತಿದೆ.
ಕಾಂಗ್ರೆಸ್ ಗೆ ಪ್ರಬಲ ವೋಟ್ ಬ್ಯಾಂಕ್ ಆಗಿರುವ ದಲಿತರನ್ನು ಬಿಜೆಪಿಯತ್ತ ಸೆಳೆಯುವುದು ಈ ಆಲೋಚನೆ ಹಿಂದಿರುವ ಲೆಕ್ಕಾಚಾರ. ರಾಜ್ಯದ ಒಟ್ಟು ಜನಸಂಖ್ಯೆ 6.5 ಕೋಟಿಯಾದರೆ, ಅದರಲ್ಲಿ ದಲಿತ ಮತಗಳ ಪ್ರಮಾಣ ಅಂದಾಜು ಶೇ 25ರಷ್ಟಿದೆ. ಕಳೆದ ಒಂದು ದಶಕದಿಂದ ಆ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಆ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪ್ರಮುಖ ಪಕ್ಷಗಳು ದಲಿತರ ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಯತ್ನದಲ್ಲಿವೆ. "ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ, ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸುವ ಮೂಲಕ ಗೆಲ್ಲುವ ಸೂತ್ರವೊಂದನ್ನು ಹೆಣೆಯಲಾಗಿದೆ" ಎನ್ನುತ್ತಾರೆ ಪಕ್ಷದ ಮುಖಂಡರು.

ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್
ಮಾಜಿ ಸಚಿವ- ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ಆಪ್ತ ಶ್ರೀರಾಮುಲು ಅವರು ವಾಲ್ಮೀಕಿ ನಾಯಕ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದಾದ್ಯಂತ ಹರಡಿರುವ ಈ ಸಮುದಾಯದ ಜನಸಂಖ್ಯೆ ಇಪ್ಪತ್ತೈದು ಲಕ್ಷದಷ್ಟಿದೆ. ಇದೀಗ ವಿಧಾನಸಭೆ ಚುನಾವಣೆಗಾಗಿ ಶ್ರೀರಾಮುಲು ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮೀಸಲಾತಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಮೂವತ್ತೊಂದು ಕ್ಷೇತ್ರದಲ್ಲಿ ಗೆಲುವಿಗೆ ಪ್ರಯತ್ನ
"ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೂವತ್ತೊಂದು ಕ್ಷೇತ್ರದಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ಆ ಮೂಲಕ ನಮ್ಮ ನಾಯಕರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಉದ್ದೇಶ. ಇದಕ್ಕೆ ಪ್ರತಿಯಾಗಿ ಏನನ್ನೂ ಅಪೇಕ್ಷೆ ಪಟ್ಟಿಲ್ಲ. ಪಕ್ಷ ನನ್ನಿಂದ ಏನು ಬಯಸುತ್ತದೋ ಅದನ್ನು ಮಾಡಲು ಸಿದ್ಧನಿದ್ದೇನೆ" ಎಂದು ಬಿ.ಶ್ರೀರಾಮುಲು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಇಮೇಜ್ ಬದಲಿಸಿಕೊಳ್ಳುವ ಪ್ರಯತ್ನ
ಬಿಜೆಪಿಯು ಮೇಲ್ಜಾತಿ ಪರ ಎಂಬ ಇಮೇಜ್ ಇದ್ದು, ಅದನ್ನು ತೊಳೆದುಕೊಳ್ಳುವ ಉದ್ದೇಶದಿಂದಲೇ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಇರಾದೆ ಪಕ್ಷಕ್ಕೆ ಇದೆ. ಒಬ್ಬ ದಲಿತರನ್ನು ಉಪ ಮುಖ್ಯಮಂತ್ರಿ ಆಗಿ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ಅನುಕೂಲ ಆಗಲಿದೆ. ಅದಕ್ಕೆ ಕಾಲ ಕೂಡಿ ಬರಲಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುವ ಲೆಕ್ಕಾಚಾರ
ಇನ್ನೊಂದು ಕಡೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಧ್ವನಿಗೆ ಸ್ವಲ್ಪ ಮಟ್ಟಿಗೆ ಬೆಲೆ ಕೊಟ್ಟಿದ್ದೀವಿ ಎಂದು ಬಿಂಬಿಸಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ಏಕೆಂದರೆ, ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಪರಮೇಶ್ವರ್ ರನ್ನು ಉಪಮುಖ್ಯಮಂತ್ರಿ ಮಾಡುವ ಅವಕಾಶ ಇದ್ದರೂ ಸಿದ್ದರಾಮಯ್ಯ ಮನಸ್ಸು ಮಾಡಲಿಲ್ಲ ಎಂಬ ಧ್ವನಿ ಎತ್ತಬಹುದು ಎಂಬ ಲೆಕ್ಕಾಚಾರವೂ ಇದೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳುವಂತೆ ಮಾಡಿದ್ದು, ಸಂಪುಟದಿಂದ ಶ್ರೀನಿವಾಸ್ ಪ್ರಸಾದ್ ರನ್ನು ಕೈ ಬಿಟ್ಟಿದ್ದು ಹೀಗೆ ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಬಿಂಬಿಸಲು ಏನೆಲ್ಲ ಆರೋಪ ಮಾಡಬಹುದು ಎಂಬುದರ ಪಟ್ಟಿ ಮಾಡಿಟ್ಟುಕೊಂಡಿದೆ ಬಿಜೆಪಿ.

ಬಿಜೆಪಿಯ ಪರ ದಲಿತರ ಒಲವಿಲ್ಲ
ಇನ್ನು ಶ್ರೀರಾಮುಲು ಹಾದಿಯೇನೂ ಸರಳವಾಗಿಲ್ಲ. ಪಕ್ಷದೊಳಗೆ ಮತ್ತೊಬ್ಬ ದಲಿತ ಹಾಗೂ ಹಿರಿಯ ನಾಯಕರಾದ ಗೋವಿಂದ ಕಾರಜೋಳ ಇದ್ದಾರೆ. ಶ್ರೀರಾಮುಲುಗೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಒಳ್ಳೆ ಹಿಡಿತವಿದೆ. ಆದರೆ ಕಾಂಗ್ರೆಸ್ ನ ಪ್ರಮುಖ ನಾಯಕರೊಬ್ಬರ ಪ್ರಕಾರ, ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಹಾದಿ ಸಲೀಸಿಲ್ಲ. ಸಿದ್ದರಾಮಯ್ಯ ಅವರು ದಲಿತರ ಪರವಾಗಿ ಮಾಡಿರುವ ಕೆಲಸಗಳಿಂದಾಗಿ ಕಾಂಗ್ರೆಸ್ ಪರವಾದ ಅಲೆಯಿದೆ. ಶ್ರೀರಾಮುಲು ಅವರು ತೆಗೆದುಹಾಕುವಂಥ ಅಭ್ಯರ್ಥಿ ಅಲ್ಲ. ಆದರೆ ಬಿಜೆಪಿ ಪರವಾಗಿ ದಲಿತರ ಒಲವಿಲ್ಲ ಎನ್ನುತ್ತಾರೆ.












Click it and Unblock the Notifications