SCST ಮೀಸಲಾತಿ ಹೆಚ್ಚಳ, ಹಲವು ದಶಕಗಳ ಬೇಡಿಕೆ ಇಡೇರಿಸಿದ್ದೇವೆ: ಬಸವರಾಜ ಬೊಮ್ಮಾಯಿ
ವಿಜಯನಗರ, ಅಕ್ಟೋಬರ್ 13: ಮೀಸಲಾತಿ ಸಂಬಂಧಿತ ಜನರ ಹಲವು ದಶಕಗಳ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ. ಶಿಕ್ಷಣ ವಂಚಿತರು ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶದ ಅವಕಾಶ ನೀಡಿ ಸ್ವಾವಲಂಬನೆಯ- ಸ್ವಾಭಿಮಾನಿ ಬದುಕಿಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಇಂದು 'ಜನಸಂಕಲ್ಪ' ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಲವಾರು ದಶಕಗಳ ಕಾಲ ಅಧಿಕಾರದಲ್ಲಿತ್ತು. ಯಾಕೆ ಮೀಸಲಾತಿ ವಿಚಾರದಲ್ಲಿ ಇಂಥ ದಿಟ್ಟ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್ ಪಕ್ಷದವರು ದೀನ ದಲಿತರು ಮತ್ತು ಎಸ್ಸಿ, ಎಸ್ಟಿ ಸಮುದಾಯದವರ ವಿರೋಧಿಗಳು ಎಂದು ಆಕ್ಷೇಪಿಸಿದ ಸಿಎಂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯವು ಕೇವಲ ಭಾಷಣದ ಸರಕಾಗಿತ್ತು ಹಾಗೂ ಮತಬ್ಯಾಂಕ್ ಮಾಡಲು ಇದನ್ನು ಬಳಸಲಾಗುತ್ತಿತ್ತು ಎಂದರು.
ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಮೊದಲ ಬಾರಿಗೆ ಕೊಡಲಾಗಿದೆ. ರೈತ ಕೃಷಿ ಕೂಲಿಕಾರರು ಸೇರಿ ಅನೇಕ ಸಮುದಾಯಗಳಿಗೆ ಇದನ್ನು ವಿಸ್ತರಿಸಲಾಗಿದೆ. ಉದ್ಯೋಗ ಹೆಚ್ಚಳಕ್ಕೆ ನಾವು ಆದ್ಯತೆ ಕೊಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ, 5 ಲಕ್ಷ ಯುವಕರಿಗೆ ಕೆಲಸ ಸಿಗುವಂತೆ ಮಾಡುತ್ತಿದ್ದೇವೆ ಎಂದು ವಿವರಿಸಿದ ಅವರು, ಎಲ್ಲಾ ವರ್ಗದವರಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಬಳ್ಳಾರಿ ಜನತೆಗೆ ಕೊಟ್ಟ ಭರವಸೆ ಈಡೇರಿಸದ ಕಾಂಗ್ರೆಸ್
ಸೋನಿಯಾ ಗಾಂಧಿಗೆ ಬಳ್ಳಾರಿ ಕ್ಷೇತ್ರವು ರಾಜಕೀಯವಾಗಿ ಮರುಜನ್ಮ ಕೊಟ್ಟಿತ್ತು. ಆಗ ಕಾಂಗ್ರೆಸ್ ಸರಕಾರವು ಈ ಭಾಗಕ್ಕೆ ಸಾವಿರಾರು ಕೋಟಿ ಅನುದಾನದ ಭರವಸೆ ಕೊಟ್ಟಿತ್ತು. ಆದರೆ, ಅದನ್ನು ಈಡೇರಿಸಲಿಲ್ಲ. ಈಗ ಮತ್ಯಾಕೆ ಬಂದಿದ್ದೀರಿ? ಏನು ಸುಳ್ಳು ಹೇಳಲು ಬಂದಿದ್ದೀರಿ? ಎಂದು ಪ್ರಶ್ನಿಸಿದರು. ನಾವೆಲ್ಲರೂ ಜಾಗೃತರಾಗಿದ್ದೇವೆ. ನಿಮ್ಮ ಸುಳ್ಳನ್ನು ಇಲ್ಲಿನ ಜನ ನಂಬುವುದಿಲ್ಲ ಎಂದು ಹೇಳಿದರು.

ಕರ್ನಾಟಕವನ್ನು ಪೇಟಿಎಂ ಮಾಡಿಕೊಂಡಿದ್ದ ಕಾಂಗ್ರೆಸ್
ಕಾಂಗ್ರೆಸ್ನ ಪೇಟಿಎಂ ಅಭಿಯಾನದ ವಿರುದ್ಧ ಕಿಡಿ ಕಾರಿದ ಬೊಮ್ಮಾಯಿ, ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡಿತ್ತು. ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಪೇಟಿಎಂ ಮಾಡಿಕೊಂಡಿದ್ದರು. ಅದೇ ಸಂಬಂಧ ಕಾಂಗ್ರೆಸ್ ಪಕ್ಷದ ರಾಜ್ಯದ ಅಧ್ಯಕ್ಷರು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಅವರನ್ನು ನೋಡಿದರೆ ಕನಿಕರ ಎನಿಸುತ್ತದೆ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ರಾಜ್ಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ಹಳೆಯ ನಾಟಕಗಳನ್ನು ಕರ್ನಾಟಕದ ಜನರು ನಂಬುವುದಿಲ್ಲ. ನುಡಿದಂತೆ ನಡೆದವರಿಗೆ ಮಾತ್ರ ಅವಕಾಶ ಸಿಗಲಿದೆ. ಈ ಭಾಗ್ಯ, ಆ ಭಾಗ್ಯ ಎಂದು ತಿಳಿಸಿದರೂ ನಿಮ್ಮನ್ನು ಜನರು ಯಾಕೆ ಮನೆಗೆ ಕಳಿಸಿದರು ಎಂದು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಹಾಕಿದರು.

ವಿಜಯನಗರದಲ್ಲಿ ಕಮಲ ಅರಳುವುದು ಖಚಿತ
ಅನ್ನ ಭಾಗ್ಯದಲ್ಲಿ ಕನ್ನ ಭಾಗ್ಯ ಇತ್ತು. ಎಸ್ಸಿ ಎಸ್ಟಿ, ಜನಾಂಗದವರಿಗೆ ಬೋರ್ವೆಲ್ ವಿಚಾರದಲ್ಲೂ ಹಗರಣ ಮಾಡಿದ್ದೀರಿ. ಕಾಂಗ್ರೆಸ್ ತಪ್ಪು ಲೆಕ್ಕಾಚಾರ- ಭ್ರಷ್ಟಾಚಾರದಿಂದ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆಯುಂಟಾಗಿತ್ತು. ಇಲ್ಲಿನ ಜನಸ್ತೋಮ ನೋಡಿದಾಗ ಇಲ್ಲಿ ಕಮಲದ ಹೂವು ಅರಳುವುದು ಖಚಿತ ಎಂದು ವಿಶ್ವಾಸವಾಗಿದೆ ಎಂದು ನುಡಿದರು. ಒಗ್ಗಟ್ಟಿನಿಂದ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ 28 ಸಾವಿರ ಕೋಟಿ ಅನುದಾನ
ನಮ್ಮ ನಾಯಕರಾದ ಯಡಿಯೂರಪ್ಪ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದರು. 100 ಕೋಟಿ ರೂಪಾಯಿ ಅನುದಾನ ಕೊಟ್ಟರು. ನಾನು ಈ ನಿಗಮಕ್ಕೆ ಈ ಬಾರಿ 100 ಕೋಟಿ ನೀಡಲಿದ್ದೇನೆ. ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ 28 ಸಾವಿರ ಕೋಟಿ ಅನುದಾನವನ್ನು ಕೊಡಲಾಗಿದೆ . ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ಕೊಡಲಾಗಿದೆ ಎಂದರು.
ಹೂವಿನಹಡಗಲಿಯ ಜನರು ಹೂವಿನಂಥವರು ಎಂದು ಮೆಚ್ಚುಗೆ ಸೂಚಿಸಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಇಲ್ಲಿನ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಅವಕಾಶ ಲಭಿಸಿದೆ. ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ಬಿಜೆಪಿ ನೀಡಿದೆ ಎಂದು ವಿವರಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಸಹ ಉಸ್ತುವಾರಿ ಡಿ.ಕೆ.ಅರುಣಾ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications