ಬಳ್ಳಾರಿ ಅಪಘಾತ ಪ್ರಕರಣದಲ್ಲಿ ಆರ್ ಅಶೋಕ ಮಗ; ಎಸ್ ಪಿ ಕೊಟ್ಟ ಸ್ಪಷ್ಟನೆ ಹೀಗಿದೆ
ಬಳ್ಳಾರಿ, ಫೆಬ್ರವರಿ 13: ಬಳ್ಳಾರಿ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಸಿ.ಕೆ ಬಾಬಾ ಹೇಳಿಕೆ ನೀಡಿದ್ದಾರೆ. ಅಪಘಾತವಾದ ಕಾರಿನಲ್ಲಿ ಸಚಿವ ಆರ್ ಅಶೋಕ ಅವರ ಮಗ ಶರತ್ ಇದ್ದರು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಾಬಾ ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿ 10ರಂದು ಮಧ್ಯಾಹ್ನ ಹೊಸಪೇಟೆಯ ಮರಿಯಮ್ಮನ ಹಳ್ಳಿ ಬಳಿ ಅಪಘಾತ ಆಗಿದೆ. ಮರ್ಸಿಡೀಜ್ ಬೆಂಜ್ ಕಾರಿನ ಅಪಘಾತವಾಗಿದ್ದು, ಈ ಪ್ರಕರಣದಲ್ಲಿ ರವಿನಾಯ್ಕ್ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಸಚಿನ್ ಎಂಬ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ" ಎಂದಿದ್ದಾರೆ.
ಬಳ್ಳಾರಿಯಲ್ಲಿ ಕಾರು ಅಪಘಾತ; ಕಾರಿನಲ್ಲಿದ್ದುದು ಆರ್ ಅಶೋಕ್ ಮಗ?
"ರಾಹುಲ್ ಎಂಬ ಯುವಕ ಕಾರು ಚಾಲನೆ ಮಾಡುತ್ತಿದ್ದ. ಈ ಕಾರಿನಲ್ಲಿ ಸಚಿವ ಆರ್ ಅಶೋಕ ಅವರ ಪುತ್ರ ಇರಲಿಲ್ಲ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿಲ್ಲ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ, ಕಾರಿನಲ್ಲಿ ಐವರಿದ್ದು, ಅವರ ಪೈಕಿ ಓರ್ವ ಮೃತಪಟ್ಟಿದ್ದಾನೆ" ಎಂದಿದ್ದಾರೆ.
"ಅದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಅತಿಯಾದ ವೇಗ ಅಪಘಾತಕ್ಕೆ ಕಾರಣ ಆಗಿರಬಹುದು, ಸಚಿವರ ಪುತ್ರ ಇದ್ದರು ಎಂಬುದು ವದಂತಿಯಷ್ಟೇ, ಕಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.