ಯುಪಿಎಸ್ ಸಿಯಲ್ಲಿ 115ನೇ ರಾಂಕ್ ಪಡೆದ ಕೀರ್ತಿಕುಮಾರ್ ಪೂಜಾರ್ ಸಂದರ್ಶನ
ಬಳ್ಳಾರಿ, ಏಪ್ರಿಲ್. 29 : ಶಿಸ್ತು, ತಾಳ್ಮೆ, ಸತತ ಪ್ರಯತ್ನ, ಸ್ವಶಕ್ತ ಶ್ರಮದ ಮೇಲೆ ವಿಶ್ವಾಸಗಳಿದ್ದಲ್ಲಿ ಗುರಿ ತಲುಪುವುದು ಸಾಧ್ಯ. ಗುರಿ ತಲುಪುವಲ್ಲಿ ಏರಿಳಿತಗಳು, ಕಷ್ಟ-ಸುಖ, ನಿರಾಸೆ - ನಿರುತ್ಸಾಹ ಏನೇ ಎದುರಾದರೂ ಛಲ, ನಂಬಿಕೆ - ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. -ಹೀಗೆಂದವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 115ನೇ ರಾಂಕ್ ಪಡೆದು, ಐಎಎಸ್ ಅಧಿಕಾರಿ ಆಗುತ್ತಿರುವ 29ರ ಹರೆಯದ ಹೊಸಪೇಟೆಯ ಕೀರ್ತಿಕುಮಾರ್ ಪೂಜಾರ್.
ನಾನು ಮೊದಲಬಾರಿ ಯುಪಿಎಸ್ ಸಿ ಪರೀಕ್ಷೆ ಪಾಸು ಮಾಡಿ, ಭಾರತೀಯ ರೆವಿನ್ಯೂ ಸರ್ವೀಸ್ ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ನಾಗ್ಪುರದಲ್ಲಿ ತರಬೇತಿ ಪಡೆಯುತ್ತಿದ್ದೆ. ಎರಡನೇ ಬಾರಿ ಪುನಃ ಯುಪಿಎಸ್ ಸಿ ಪರೀಕ್ಷೆ ಬರೆದೆ. ಫಲಿತಾಂಶ ಸುಧಾರಿಸಲಿಲ್ಲ. ಮೂರನೇ ಬಾರಿ ಪರೀಕ್ಷೆ ಬರೆದು, ನನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದೇನೆ' ಎನ್ನುತ್ತಾರೆ.

ಓದಿದ್ದು ಇಲ್ಲಿಯೇ...
ಪ್ರಾಂಶುಪಾಲ ಹನಮಂತಪ್ಪ ಪೂಜಾರ್ ಮತ್ತು ಗೃಹಿಣಿ ಹೇಮಾವತಿ ದಂಪತಿಗಳ ಪುತ್ರ ಕೀರ್ತಿ ಕುಮಾರ್ ಪೂಜಾರ್. ಹೊಸಪೇಟೆಯ ಟಿಬಿ ಡ್ಯಾಂನಲ್ಲಿ ಹೈಸ್ಕೂಲ್ ಓದಿ, ಸ್ಮೈಯೋರ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಓದಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ನಲ್ಲಿ ಬಿಇ ಪದವೀಧರನಾಗಿ, ಐಐಟಿ - ಮದ್ರಾಸ್ ವಿದ್ಯಾರ್ಥಿಯಾಗಿ ಸಾಧನೆಯ ಮೆಟ್ಟಿಲುಗಳನ್ನೇರುತ್ತಲೇ ಸಾಗಿದ ಈತನಿಗೆ ಬೆಂಬಲವಾಗಿ ನಿಂತವರು ಪೋಷಕರು, ಸ್ನೇಹಿತರು, ಮಾರ್ಗದರ್ಶಕರು ಮತ್ತು ಸಾಧಕರು.

ಕೆಲಸದ ಜೊತೆಯಲ್ಲಿಯೇ ಓದು
ಬೆಂಗಳೂರಿನ ಬಿಎಚ್ಇಎಲ್ ನಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸಿ, ಡಿಅರ್ ಡಿಒದ ವಿಜ್ಞಾನಿಯಾಗಿ ನೇಮಕಗೊಂಡಿದ್ದರು. ಕೆಲಸದ ಜೊತೆ ಜೊತೆಯಲ್ಲಿ ಓದುತ್ತಲೇ ಇದ್ದ, ಕೀರ್ತಿ ಕುಮಾರ್ ಗೆ ಯುಪಿಎಸ್ ಸಿ ಪರೀಕ್ಷೆ ಪಾಸು ಮಾಡುವ ಕನಸು. ಹೆಂಡತಿ ಸೌಮ್ಯಶ್ರೀ ಪೂಜಾರ್, ಎಂಬಿಎ ಪದವೀಧರೆ ಆಗಿದ್ದು, ಇವರ ಸಾಧನೆಗೆ ಬೆಂಬಲ ನೀಡಿದೆ.

ಪತ್ನಿ, ಸಹೋದರನ ಅನಿಸಿಕೆ
ನಾವಿಬ್ಬರು ಪ್ರಸ್ತುತ ವಿಷಯ, ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರ ಚರ್ಚೆ ಮಾಡುತ್ತಿದ್ದೆವು. ಓದಿನಲ್ಲಿ ಇಬ್ಬರಲ್ಲೂ ನಿರಂತರತೆ ಇರುತ್ತಿತ್ತು. ಸಂದರ್ಶನ ಎದುರಿಸುವ ಕೌಶಲ್ಯಗಳ ಕುರಿತು ಚರ್ಚೆ ಮಾಡುತ್ತಿದ್ದೆವು. ಬರಹದಲ್ಲಿ ವಿಷಯ ಮಂಡನೆ ಮಾಡುವ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿದೆವು. ಒಟ್ಟಿನಲ್ಲಿ ಪಾಸು ಮಾಡಿದ ಖುಷಿಯಿದೆ ಎನ್ನುತ್ತಾರೆ ಪತ್ನಿ ಸೌಮ್ಯಶ್ರೀ ಪೂಜಾರ್.
ಸಹೋದರನ ಸಾಧನೆಗೆ ಹೆಮ್ಮೆ ಆಗುತ್ತಿದೆ. ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಪ್ರಶಂಸಿಸುತ್ತಾರೆ ಬಳ್ಳಾರಿ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ವಿದ್ಯಾರ್ಥಿಯಾದ ಸುನಿಲ್ ಪೂಜಾರ್.

ಅಪ್ಪನ ಕನಸೂ ಹೌದು ...
ನಾನು ಮೇ 31, 2018ಕ್ಕೆ ಪ್ರಾಂಶುಪಾಲ ಹುದ್ದೆಯಿಂದ ಸೇವಾ ನಿವೃತ್ತಿ ಆಗುತ್ತಿರುವೆ. ನಿವೃತ್ತಿ ಅಂಚಿನಲ್ಲಿ ಇರುವ ನನಗೆ ಮಗ ಸಮಾಧಾನದ, ಸಾರ್ಥಕತೆಯ ಕೊಡುಗೆ ನೀಡಿದ್ದಾನೆ. ನೆಮ್ಮದಿ ಇದೆ. ಖುಷಿ ಇದೆ. ಸಂತೋಷಕ್ಕೆ ಕೊನೆಯೇ ಇಲ್ಲವಾಗಿದೆ. ಪತ್ನಿ ಹೇಮಾವತಿ ಅಂತೂ ಸಾಕಷ್ಟು ಸಂತೋಷ ಪಟ್ಟಿದ್ದಾಳೆ ಎನ್ನುತ್ತಾರೆ ತಂದೆ ಹನುಮಂತಪ್ಪ ಪೂಜಾರ್.











Click it and Unblock the Notifications