ಬಳ್ಳಾರಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಸಚಿವ ಶ್ರೀರಾಮುಲುಗೆ 25 ಸಾವಿರ ಮತಗಳ ಅಂತರದಲ್ಲಿ ಸೋಲು
ಬಳ್ಳಾರಿ: ಬಳ್ಳಾರಿ ಗ್ರಾಮೀಣ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರಗಳ ಪೈಕಿ ಇದೂ ಒಂದು. ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ನಿಂದ ಹಾಲಿ ಶಾಸಕ ಬಿ.ನಾಗೇಂದ್ರಗೆ ಟಿಕೆಟ್ ನೀಡಲಾಗಿತ್ತು. ಆದರೆ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಶ್ರೀರಾಮುಲು ಸೋಲು ಕಂಡಿದ್ದಾರೆ.
ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 20 ಸಾವಿರ ಮತಗಳ ಅಂತರದಿಂದ ಶ್ರೀರಾಮುಲು ಸೋಲು ಕಂಡಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಬಿ.ನಾಗೇಂದ್ರ ಇದೀಗ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತ ಎಣಿಕೆ ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕಾಂಗ್ರೆಸ್ ಗೆದ್ದಿದೆ.

ಶ್ರೀರಾಮುಲು ಸೋಲಿಗೆ ಕಾರಣ ಏನು?
ಮೇ 10ರಂದು ನಡೆದಿದ್ದ ಮತದಾನದಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಶೇ.76.09 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 1,16,096 ಪುರುಷ ಮತದಾರರು & 1,22,181 ಮಹಿಳಾ ಮತದಾರರು ಇದ್ದು, ಒಟ್ಟು 2,38,326 ಮತದಾರರನ್ನ ಕ್ಷೇತ್ರ ಹೊಂದಿದೆ. ಕ್ಷೇತ್ರದ 242 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,81,354 ಜನ ಮತ ಚಲಾಯಿಸಿದ್ದರು. ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ಬಹುಸಂಖ್ಯಾತರು. ಹೀಗಾಗಿಯೇ ಬಿ.ಶ್ರೀರಾಮುಲು ಅವರಿಗೆ ಗೆಲ್ಲುವ ವಿಶ್ವಾಸ ಇತ್ತು, ಆದರೆ ಬಿ.ನಾಗೇಂದ್ರ ಸ್ಟ್ರಾಟಜಿ ವರ್ಕೌಟ್ ಆಗಿದೆ.
ನಾಗೇಂದ್ರ ಕೂಡ ವಾಲ್ಮೀಕಿ ಸಮುದಾಯದವರು
ಅಂದಹಾಗೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಆದರೆ ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೋತಿದ್ದರು. ಈಗ ತವರು ಕ್ಷೇತ್ರಕ್ಕೆ ಮರಳಿದ್ದು, ಪೈಪೋಟಿ ಏರ್ಪಟ್ಟಿದೆ. ಬಳ್ಳಾರಿ ಮೂಲದವರೇ ಆದ ನಾಗೇಂದ್ರ 2018ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹಾಗೇ ಕೂಡ್ಲಿಗಿ ಕ್ಷೇತ್ರದಿಂದ 2 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ನಾಗೇಂದ್ರ ಕೂಡ ವಾಲ್ಮೀಕಿ ಸಮುದಾಯದವೇ ಆಗಿರುವ ಕಾರಣ ಭಾರಿ ಅಂತರದಲ್ಲಿ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಘಟಾನುಘಟಿ ನಾಯಕರಿಂದ ಭರ್ಜರಿ ಪ್ರಚಾರ
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಲು ಕೇಸರಿ ಪಡೆ ಪಣತೊಟ್ಟು ಕ್ಷೇತ್ರದಲ್ಲಿ ತಂತ್ರ ಹೂಡಿತ್ತು. ಆ ಪ್ರಕಾರ ಘಟಾನುಘಟಿ ನಾಯಕರು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಹೀಗೆ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ನಾಯಕರು ಕೂಡ ಬಿ.ನಾಗೇಂದ್ರ ಪರವಾಗಿ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡಿ ಸದ್ದು ಮಾಡಿದ್ದರು. ಹೀಗಾಗಿ ಗೆಲುವಿನ ಮಾಲೆ ಶ್ರೀರಾಮುಲು ಕೊರಳಿಗೋ ಅಥವಾ ಬಿ.ನಾಗೇಂದ್ರ ಕೊರಳಿಗೋ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸ್ಥಳೀಯರನ್ನ ಕಾಡುತ್ತಿತ್ತು. ಈಗ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ.












Click it and Unblock the Notifications