ಲಾಕ್ಡೌನ್ ನಿಯಮ ಉಲ್ಲಂಘನೆ: ಶಾಸಕ ಪಿ.ಟಿ.ಪರಮೇಶ್ವರ ವಿರುದ್ಧ ಕೇಸ್
ಬಳ್ಳಾರಿ, ಜೂನ್ 15: ಕೊರೊನಾ ವೈರಸ್ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ಬಳ್ಳಾರಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Recommended Video
''ಶಾಸಕರ ಪುತ್ರನ ಮದುವೆಗೆ ಯಾವುದೇ ರೀತಿಯ ಅನುಮತಿ ಕೇಳಿರಲಿಲ್ಲ. ಕಾರ್ಯಕ್ರಮದಲ್ಲಿ ಕೊವಿಡ್ ಲಾಕ್ಡೌನ್ ನಿಯಮಗಳ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ನಿಯಮಾವಳಿ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ'' ಎಂದು ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಜಿ ಸಚಿವರ ಮಗನ ಮದುವೆಯಲ್ಲಿ ಜನಜಂಗುಳಿ; ನಿಯಮ ಉಲ್ಲಂಘನೆ ಆರೋಪ
ಈ ಕುರಿತು ಲಕ್ಷ್ಮೀಪುರ ಪೊಲೀಸರು ಬಳ್ಳಾರಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಅವರಿಗೆ ನೊಟೀಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಮದುವೆ ಕುರಿತು, ಆಯೋಜನೆ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.
ಪರಮೇಶ್ವರ್ ನಾಯ್ಕ್ ಅವರ ಮಗ ಅವಿನಾಶ್ ಮದುವೆ ಇಂದು ಬಳ್ಳಾರಿ ಜಿಲ್ಲೆ ಲಕ್ಷ್ಮೀಪುರದಲ್ಲಿ ನಡೆದಿದೆ. ಮಾಜಿ ಸಿಎಂ ಸಿದ್ಧರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಸಚಿವರು ಹಾಗೂ ರಾಜಕೀಯ ನಾಯಕರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.
ಈ ಕುರಿತು ಶಾಸಕ ಪರಮೇಶ್ವರ ನಾಯ್ಕ್ ಸಹ ಪ್ರತಿಕ್ರಿಯೆ ನೀಡಿದ್ದು ''ನನ್ನ ಮಗನ ಮದುವೆಗೆ ಕಡಿಮೆ ಜನರು ಬನ್ನಿ ಎಂದು ವಿನಂತಿಸಿಕೊಂಡಿದ್ದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಜನಸಂಖ್ಯೆ ಬಂದ ಕಾರಣ ಸ್ವಲ್ಪ ತೊಂದರೆಯಾಗಿದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಲಾಕ್ಡೌನ್ ನಿಮಯದ ಪ್ರಕಾರ, ಮದುವೆ ಕೇವಲ 50 ಜನರು ಮಾತ್ರ ಭಾಗಿಯಾಗಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಆದರೆ, ಇದ್ಯಾವುದು ಈ ಮದುವೆ ಸಮಾರಂಭದಲ್ಲಿ ಉಲ್ಲಂಘನೆಯಾಗಿದೆ.