ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್!
ಬಳ್ಳಾರಿ, ಅಕ್ಟೋಬರ್ 21 : ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಕಣ ಅಂತಿಮಗೊಂಡಿದೆ. ಎಸ್.ತಿಪ್ಪೇಸ್ವಾಮಿ ಅವರು ಕೊನೆ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ನವೆಂಬರ್ 3ರಂದು ಉಪ ಚುನಾಣೆ ನಡೆಯಲಿದೆ.
ಬಳ್ಳಾರಿ ಉಪ ಚುನಾವಣೆಗೆ ನಾಮಪತ್ರವನ್ನು ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿತ್ತು. ಒಟ್ಟು 7 ಅಭ್ಯರ್ಥಿಗಳು ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಮೂವರು ನಾಮಪತ್ರವನ್ನು ವಾಪಸ್ ಪಡೆದಿದ್ದು ನಾಲ್ವರು ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿಯಿಂದ ಜೆ.ಶಾಂತ ಅಭ್ಯರ್ಥಿಯಾಗಿದ್ದಾರೆ. ಉಪ ಚುನಾವಣೆ ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷದ ವೈದ್ಯಕೀಯ ಪಕೋಷ್ಠದ ಸಹ ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡಿದ್ದ ಡಾ.ಟಿ.ಆರ್.ಶ್ರೀನಿವಾಸ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯ ಜೆ.ಶಾಂತ ಮತ್ತು ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ....

ಕಣದಲ್ಲಿ ಉಳಿದ ನಾಲ್ವರು
ಬಳ್ಳಾರಿ ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಶನಿವಾರ ಕಡೆಯ ದಿನವಾಗಿತ್ತು. ಎಸ್.ತಿಪ್ಪೇಸ್ವಾಮಿ, ಗುಜ್ಜಾಲ್ ನಾಗರಾಜ್ ಅವರು ತಮ್ಮ ನಾಮಪತ್ರ ವಾಪಸ್ ಪಡೆದರು. ಬಿಜೆಪಿಯ ನವೀನ್ ಸಲ್ಲಿಸಿದ್ದ ನಾಮಪತ್ರವನ್ನು ಬಿ-ಫಾರಂ ಇಲ್ಲದ ಕಾರಣ ಚುನಾವಣಾಧಿಕಾರಿಗಳು ತಿರಸ್ಕರಿಸಿದರು. ಆದ್ದರಿಂದ, ಕಣದಲ್ಲಿ 4 ಜನರು ಉಳಿದಿದ್ದಾರೆ.

ಎಸ್.ತಿಪ್ಪೇಸ್ವಾಮಿ ನಾಮಪತ್ರ ವಾಪಸ್
2018ರ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ತಿಪ್ಪೇಸ್ವಾಮಿ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಅವರು ತಮ್ಮ ನಾಮಪತ್ರ ವಾಪಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ/ಕಾಂಗ್ರೆಸ್ ಹೋರಾಟ
ಬಳ್ಳಾರಿ ಉಪ ಚುನಾವಣೆ ಬಿಜೆಪಿಯ ಜೆ.ಶಾಂತ ಮತ್ತು ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ ಅವರ ನಡುವಿನ ಹೋರಾಟವಾಗಲಿದೆ. ಬಿ.ಶ್ರೀರಾಮುಲು ಮತ್ತು ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆ ಚುನಾವಣೆಯಲ್ಲಿ ಅಡಗಿದೆ. ಯಾರಿಗೆ ಗೆಲುವು? ಎಂದು ಕಾದು ನೋಡಬೇಕು.

ಅಂತಿಮವಾಗಿ ಕಣದಲ್ಲಿರುವವರು
* ವಿ.ಎಸ್.ಉಗ್ರಪ್ಪ - ಕಾಂಗ್ರೆಸ್
* ಜೆ.ಶಾಂತ - ಬಿಜೆಪಿ
* ಟಿ.ಆರ್.ಶ್ರೀನಿವಾಸ್ - ಪಕ್ಷೇತರ
* ವೈ.ಪಂಪಾಪತಿ - ಪಕ್ಷೇತರ (ಚಿತ್ರ :ಟಿ.ಆರ್.ಶ್ರೀನಿವಾಸ್)












Click it and Unblock the Notifications