ಮಾನಸಿಕ ಅಸ್ವಸ್ಥ ಗರ್ಭಿಣಿಯ ಸಹಾಯಕ್ಕೆ ನಿಂತ ಬಳ್ಳಾರಿ ಡಿಸಿ
ಬಳ್ಳಾರಿ, ಮೇ 11: ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದ, ಮಾನಸಿಕ ಅಸ್ವಸ್ಥ ಗರ್ಭಿಣಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್.
Recommended Video
ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದ ಚಂದ್ರಮ್ಮ (34) ಎಂಬ ಮಹಿಳೆ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕೇವಲ ಏಳು ತಿಂಗಳ ಸಂಸಾರ ಮಾಡಿದ ಗಂಡ ಅವಳನ್ನು ಮನೆಯಿಂದ ಹೊರಹಾಕಿ, ಬೇರೊಂದು ಮದುವೆ ಮಾಡಿಕೊಂಡಿದ್ದ. ಈ ಘಟನೆಯಿಂದ ಚಂದ್ರಮ್ಮ ಮಾನಸಿಕವಾಗಿ ಅಸ್ವಸ್ಥೆಯಾಗಿ ಕೊಟ್ಟೂರು ಪಟ್ಟಣದಲ್ಲಿ ಅಲೆದಾಡುತ್ತಿದ್ದರು.
ಈಕೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದು, ಗರ್ಭ ಧರಿಸಿದ್ದಳು. ಈಚೆಗೆ ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಕುಲ್ ಅವರ ಕಣ್ಣಿಗೆ ಈ ಮಹಿಳೆ ಬಿದ್ದಿದ್ದಾಳೆ. ಕೂಡಲೇ ಆ ಮಹಿಳೆಯನ್ನು ರಕ್ಷಣೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆರ್ ನಾಗರಾಜ್ ಅವರಿಗೆ ಡಿಸಿ ಸೂಚನೆ ನೀಡಿದ್ದರು. ಆಕೆಯನ್ನು ರಕ್ಷಣೆ ಮಾಡಿ ಬಳ್ಳಾರಿಯ ಶಾಂತಿಧಾಮದಲ್ಲಿರಿಸಲಾಗಿತ್ತು. ಆದರೆ ಹೆರಿಗೆ ಸಮಯದಲ್ಲಿ ರಕ್ತ ಕಡಿಮೆ ಆದ ಕಾರಣ ಬಳ್ಳಾರಿಯಲ್ಲಿ ಹೆರಿಗೆ ಮಾಡಿಸುವುದು ಕಷ್ಟವಾಗಿತ್ತು. ಹೀಗಾಗಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ನಿನ್ನೆ ಈಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಇಡೀ ವಿಶ್ವವೇ ಕೊರೊನಾ ಮಹಾ ಮಾರಿಯಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು ಮನೆಯ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೇ ಈ ಸಮಯದಲ್ಲಿ ಅಸ್ವಸ್ಥೆಯ ನೆರವಿಗೆ ಬಂದ ಜಿಲ್ಲಾಧಿಕಾರಿ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications