ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಯಾರಿಗೆ ಗದ್ದುಗೆ?
ಬಳ್ಳಾರಿ, ಮಾರ್ಚ್ 19: ರಾಜ್ಯದ ಗಣಿ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಇಂದು (ಶನಿವಾರ) ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಸರತ್ತು ನಡೆಯುತ್ತಿದೆ.
ಇಂದು ಬಳ್ಳಾರಿ ಮಹಾನಗರ ಪಾಲಿಕೆ ಗದ್ದುಗೆ ಏರುವವರು ಯಾರು ಎನ್ನುವ ಪ್ರಶ್ನೆ ಬಳ್ಳಾರಿ ನಗರದ ಜನತೆಯನ್ನು ಕಾಡುತ್ತಿದೆ. ಈಗಾಗಲೇ ಸ್ಪಷ್ಟವಾದ ಬಹುಮತ ಪಡೆದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವ ಹುಮ್ಮಿಸ್ಸಿನಲ್ಲಿ ಇದ್ದರೆ, ಬಿಜೆಪಿ ಪಕ್ಷವು ಸಹ ತನ್ನ ಕೊನೆಯ ಪ್ರಯತ್ನವನ್ನು ನಡೆಸುತ್ತಿದೆ.
ಬಳ್ಳಾರಿ ನಗರದ ಪ್ರಥಮ ಪ್ರಜೆ ಯಾರು ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದ್ದು, ಕಳೆದ ಮೂರು ದಿನಗಳ ಹಿಂದೆ, ಬಳ್ಳಾರಿ ನಗರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಬಿಜೆಪಿ ಆಪರೇಷನ್ ಕಮಲಕ್ಕೆ ಹೆದರಿ ರೆಸಾರ್ಟ್ಗೆ ಶಿಫ್ಟ್ ಆಗಿದ್ದರು.
ರೆಸಾರ್ಟ್ ರಾಜಕಾರಣಕ್ಕೆ ಕಾಂಗ್ರೆಸ್ ನಾಯಕರು ನಾಂದಿ ಹಾಡಿದ್ದು, ಇದಕ್ಕೆ ಪ್ರಮುಖ ಕಾರಣ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಪಾಲಿಕೆ ಸದಸ್ಯರ ಹೈಜಾಕ್ ಮಾಡಲು ಪ್ರಯತ್ನಿಸುತ್ತಿರುವುದು.
ಕಾಂಗ್ರೆಸ್ ಪಕ್ಷವು ತಮ್ಮ ಪಾಲಿಕೆ ಸದಸ್ಯರನ್ನು ಬಿಜೆಪಿ ಆಮಿಷದಿಂದ ದೂರವಿಡಲು ಕಾಂಗ್ರೆಸ್ನ 21 ಹಾಗೂ ಪಕ್ಷೇತರ ಐದು ಜನ ಸದಸ್ಯರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿದ್ದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ನೇತೃತ್ವದಲ್ಲಿ ಇಂದು ಪಾಲಿಕೆ ಸದಸ್ಯರು ಬಳ್ಳಾರಿಯಿಂದ ಹೈಟೆಕ್ ಬಸ್ನಲ್ಲಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದರು.
ಒಟ್ಟು 39 ಸದಸ್ಯರ ಬಲ ಇರುವ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ 21 ಕಾಂಗ್ರೆಸ್, 5 ಪಕ್ಷೇತರರು ಮತ್ತು 13 ಬಿಜೆಪಿ ಸದಸ್ಯರು ಇದ್ದಾರೆ. ಕಾಂಗ್ರೆಸ್ಗೆ ಪಾಲಿಕೆ ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತ ಇದೆ.
ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ಮಾಡಿರುವ ಪಾಲಿಕೆ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ನಿಂದ ಮೇಯರ್ ಯಾರಾಗಬೇಕು ಎಂದು ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಿದ್ದು, ಈ ಎರಡು ಗುಂಪಿನಲ್ಲಿ ಈವರೆಗೂ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಹೀಗಾಗಿ ಇಂದು ಮೇಯರ್ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.
ಈಗಾಗಲೇ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಕೊನೆಯ ಪ್ರಯತ್ನ ಮಾಡಲು ಬಿಜೆಪಿ ಮುಂದಾಗಿದೆ. ಅಲ್ಲದೇ ಇಂದು ನಡೆಯುವ ಪಾಲಿಕೆ ಚುನಾವಣೆಯಲ್ಲಿ ಸಹ ಪಾಲ್ಗೊಳ್ಳಲು ಮುಂದಾಗಿದ್ದು, ಬಿಜೆಪಿ ಕೊನೆ ಗಳಿಗೆಯಲ್ಲಿ ಯಾವ ಯೋಜನೆ ರೂಪಿಸಿದೆ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.