ಬಳ್ಳಾರಿ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ ವಿ.ಎಸ್.ಉಗ್ರಪ್ಪ!
ಬಳ್ಳಾರಿ, ಅಕ್ಟೋಬರ್ 17 : ಬಳ್ಳಾರಿ ಉಪ ಚುನಾವಣೆ ಕಣ ರಂಗೇರುತ್ತಿದ್ದು, ನಾಯಕರ ವಾಗ್ವಾದಗಳು ಸುದ್ದು ಮಾಡುತ್ತಿವೆ. 'ವಿ.ಎಸ್.ಉಗ್ರಪ್ಪಗೂ ಬಳ್ಳಾರಿಗೂ ಏನು ಸಂಬಂಧ?' ಎಂದು ಹೇಳಿದ್ದ ಬಿಜೆಪಿ ನಾಯಕರಿಗೆ ವಿ.ಎಸ್.ಉಗ್ರಪ್ಪ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ನವೆಂಬರ್ 3ರಂದು ನಡೆಯಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಂಗಳವಾರ ವಿ.ಎಸ್.ಉಗ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಜೆ.ಶಾಂತ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದರೆ, ವಿ.ಎಸ್.ಉಗ್ರಪ್ಪ ಸ್ಥಳೀಯ ನಾಯಕರಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.
ಬಿಜೆಪಿ ನಾಯಕರಿಗೆ ಪ್ರಶ್ನೆ ಹಾಕಿರುವ ಉಗ್ರಪ್ಪ ಅವರು, 'ಶ್ರೀರಾಮುಲುಗೆ ಬಾದಾಮಿಗೆ ಏನು ಸಂಬಂಧ?, ಮೊಳಕಾಲ್ಮೂರಿಗೆ ಶ್ರೀರಾಮುಗೆ ಏನು ಸಂಬಂಧ?. ಸ್ಥಳೀಯತೆ ಬಗ್ಗೆ ಬಿಜೆಪಿ ನಾಯಕರು ಪ್ರಶ್ನೆ ಮಾಡುವ ಮುನ್ನ ಇದನ್ನು ಗಮನಿಸಲಿ' ಎಂದು ತಿರುಗೇಟು ನೀಡಿದ್ದಾರೆ.
ಬಳ್ಳಾರಿ ಲೋಕಸಭಾ ಉಪ ಚುನಾವಣೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿ.ಶ್ರೀರಾಮುಲು ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಳ್ಳಾರಿಯಲ್ಲಿ ಗೆಲ್ಲಲೇಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ....

ಬಿಜೆಪಿಯವರು ಮರೆಯಬಾರದು
'ಶ್ರೀರಾಮುಲುಗೆ ಬಾದಾಮಿಗೂ ಏನು ಸಂಬಂಧ, ಮೊಳಕಾಲ್ಮೂರಿಗೂ ಶ್ರೀರಾಮುಲುಗು ಏನು ಸಂಬಂಧ?. ಸಣ್ಣ ಫಕ್ಕೀರಪ್ಪ ಅವರು ರಾಯಚೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿರಲಿಲ್ಲವೇ?, ಇತ್ತೀಚೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ನನ್ನ ಸ್ಥಳೀಯತೆ ಪ್ರಶ್ನಿಸುವ ಬಿಜೆಪಿ ನಾಯಕರು ಇವುಗಳನ್ನು ಮರೆಯಬಾರದು' ಎಂದು ವಿ.ಎಸ್.ಉಗ್ರಪ್ಪ ತಿರುಗೇಟು ಕೊಟ್ಟರು.

ನಾನು ಈ ಮಣ್ಣಿನ ಮಗ
'ನಾನು ಈ ಮಣ್ಣಿನ ಮಗ, ಪಕ್ಕದ ಪಾವಗಡದವನು. ಅಲ್ಲ ವೀರಭದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಾನು ಕಾರ್ಯದರ್ಶಿಯಾಗಿದ್ದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿಯಾಗಿ 10 ವರ್ಷ ಕೆಲಸ ಮಾಡಿದ್ದೇನೆ. ಎಲ್ಲಾ ಕಾಂಗ್ರೆಸ್ ನಾಯಕರು ನನ್ನ ಜೊತೆಯೇ ಇದ್ದಾರೆ' ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

ಪರಿಪೂರ್ಣ ಜ್ಞಾನ ಇರಬೇಕು
'ಕೆಲವರು ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ. ನಾನು ಸ್ಥಳೀಯವಾಗಿ ಇದ್ದು ಕೆಲಸ ಮಾಡುವೆ, ಇಲ್ಲೇ ಉಳಿಯುವೆ. ಪಕ್ಷದ ನಿರ್ಣಯ ಪಾಲನೆ ಮಾಡುವೆ. ಉತ್ತಮ ಕೆಲಸ ಮಾಡಿ ಲೋಕಸಭೆಯಲ್ಲಿ ಒಳ್ಳೆಯ ಹೆಸರು ತರುವೆ. ಲೋಕಸಭೆಗೆ ಆಯ್ಕೆಯಾಗುವವರಿಗೆ ಪರಿಪೂರ್ಣ ಜ್ಞಾನ ಇರಬೇಕು' ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

ಗೊಂದಲಕ್ಕೆ ಅವಕಾಶವಿಲ್ಲ
'ನಮ್ಮ ಪಕ್ಷದಲ್ಲಿ ಗೊಂದಲಕ್ಕೆ ಅವಕಾಶವಿಲ್ಲ. ಪಕ್ಷಕ್ಕೆ 130 ವರ್ಷಗಳ ಇತಿಹಾಸವಿದೆ. ಪಕ್ಷ ಸೂಕ್ತ ನಿರ್ಣಯ ಮಾಡಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎರಡೂ ಪಕ್ಷಗಳ ಸಿದ್ಧಾಂತಗಳ ನಡುವಿನ ಹೋರಾಟ ಈ ಉಪ ಚುನಾವಣೆಯಾಗಿದೆ' ಎಂದರು.












Click it and Unblock the Notifications