Get Updates
Get notified of breaking news, exclusive insights, and must-see stories!

ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನರಿಗೆ ರಾಜ್ಯೋತ್ಸವ ಪ್ರಶಸ್ತಿ; ಅವರ ಕೃಷಿ ಲೋಕದಲ್ಲೊಂದು ಸುತ್ತು

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂದು ಸೋತು ಪಟ್ಟಣ ಸೇರಿಕೊಳ್ಳುತ್ತಿರುವವರ ಪೈಕಿ ಬರದ ಊರಲ್ಲಿ ಸಮೃದ್ಧ ಬೆಳೆ ಬೆಳೆಯುತ್ತಿರುವ ವಿಶ್ವೇಶ್ವರ ಸಜ್ಜನ್ ಅವರು ವಿಶೇಷವಾಗಿ ಕಾಣುತ್ತಾರೆ. ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮತ್ತೊಬ್ಬರಿಗೂ ಮಾದರಿಯಾಗಿರುವ ಇವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಹುಲಿಕೆರೆ ಗ್ರಾಮದಲ್ಲೇ ಸಜ್ಜನ್ ಅವರ ಜಮೀನಿದೆ. ಹಸಿರಿನಿಂದ ನಳನಳಿಸುತ್ತಿರುವ ಅವರ ಜಮೀನು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ರಾಜ್ಯೋತ್ಸವ ಪ್ರಶಸ್ತಿಯ ನೆಪದಲ್ಲಿ ವಿಶ್ವೇಶ್ವರ ಸಜ್ಜನ್, ಅವರ ಕೃಷಿ ಹಾದಿಯ ಕಡೆಗಿನ ಹೊರಳು ನೋಟ ಇಲ್ಲಿದೆ...

 ಬರಗಾಲದ ನಡುವಿನ ಪ್ರಾಯೋಗಿಕ ಕೃಷಿ

ಬರಗಾಲದ ನಡುವಿನ ಪ್ರಾಯೋಗಿಕ ಕೃಷಿ

ಹೊಸ ಪ್ರಯೋಗಗಳಿಗೆ ಸದಾ ತೆರೆದುಕೊಳ್ಳುವುದು ವಿಶ್ವೇಶ್ವರ ಸಜ್ಜನ್ ಅವರ ರೂಢಿ. ಎಂ.ಎ. ಕನ್ನಡದಲ್ಲಿ ಫೇಲಾದರೂ, ಸಾವಯವ ಕೃಷಿಯಲ್ಲಿ ಗೆಲುವು ಸಾಧಿಸಿದರು. ಹೊಸ ಪ್ರಯೋಗಗಳಿಂದಲೇ ಹಲವು ವಿಷಯಗಳನ್ನು ತಿಳಿದುಕೊಂಡರು, ಮತ್ತೊಬ್ಬರಿಗೂ ತಿಳಿಸಿದರು. ಅಕಾಲಿಕ ಮಳೆ ಮತ್ತು ಬರಗಾಲದ ನಡುವೆ ಕೃಷಿಕ ಹೇಗೆ ಬದುಕಬಹುದು ಎಂಬುದರ ಬಗ್ಗೆ ಪ್ರಾಯೋಗಿಕವಾಗಿಯೇ ತಿಳಿಸಿಕೊಟ್ಟಿದ್ದಾರೆ. ಹಲವು ಸಾವಯವ ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರ ಕೃಷಿ ಕಾಯಕಕ್ಕೆ ‌ಇವರ ಪತ್ನಿ ಮತ್ತು ಮೂವರು ಮಕ್ಕಳು ಸಾಥ್ ನೀಡಿದ್ದಾರೆ.

 ಒಣಭೂಮಿಯಲ್ಲಿ ಬಂಗಾರದ ಬೆಳೆ

ಒಣಭೂಮಿಯಲ್ಲಿ ಬಂಗಾರದ ಬೆಳೆ

ಉತ್ತರ ಕರ್ನಾಟಕ ಇನ್ನು ಹತ್ತು ವರ್ಷದಲ್ಲಿ ಸಂಪೂರ್ಣವಾಗಿ ಮರುಭೂಮಿಯಾಗುತ್ತದೆ ಎನ್ನುವುದು ಪರಿಸರವಾದಿಗಳ ಅನಿಸಿಕೆ. ಆದರೆ "ನಾನು ಇದನ್ನು ಅರಿತೇ ಈ ಕೃಷಿಯಲ್ಲಿ ತೊಡಗಿದ್ದೇನೆ. ಎಂತಹ ಬರಗಾಲದಲ್ಲೂ, ಮರುಭೂಮಿಯಲ್ಲೂ ನನ್ನ ಕೃಷಿಗೆ ಅಳಿವಿಲ್ಲ, ನಷ್ಟವಿಲ್ಲ... ನಾನು ಉಳಿದೇ ಉಳಿಯುತ್ತೇನೆ" ಎಂದು ಧೈರ್ಯವಾಗಿ ಹೇಳುತ್ತಾರೆ ವಿಶ್ವೇಶ್ವರ ಸಜ್ಜನ್. ಹೀಗೆ ಹೇಳಲು ಅವರ ಸಹಜ ಕೃಷಿ ಕೊಟ್ಟಿರುವ ಆತ್ಮವಿಶ್ವಾಸವೇ ಕಾರಣವಾಗಿದೆ.

 ಲಾಭ ತಂದುಕೊಟ್ಟ ಮೌಲ್ಯವರ್ಧನೆ

ಲಾಭ ತಂದುಕೊಟ್ಟ ಮೌಲ್ಯವರ್ಧನೆ

ಹಸಿರಿನಿಂದ ನಳನಳಿಸುವ ಇವರ ಐದು ಎಕರೆ ಜಮೀನಿನಲ್ಲಿ ಮೊದಲು ಇವರ ತಂದೆ ಹಾಕಿದ್ದ ತೆಂಗಿನ ಮರಗಳು ಇದ್ದವು. ಒಣಗಿದ ಹಂತದಲ್ಲಿದ್ದ ಅವುಗಳ ನಷ್ಟ ತುಂಬಿದ್ದು ಪಕ್ಕದಲ್ಲಿದ್ದ ಬೇಲದ ಮರಗಳು. ಬೇಲ, ನೇರಳೆ ಮತ್ತು ತೆಂಗಿನ ಮರದ ಸಾಲುಗಳು ಇವರ ಜಮೀನಿನಲ್ಲಿದೆ. ಒಂದು ಎಕರೆಯಲ್ಲಿ ಬೇಲದ ಹಣ್ಣಿನ ಮರ, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿ (ಕಾಡು ನೆಲ್ಲಿ), ಇನ್ನೂ ಒಂದು ಎಕರೆ ಪ್ರದೇಶದಲ್ಲಿ ಜಂಬೂ ನೇರಳೆ ಬೆಳೆದಿದ್ದಾರೆ. ಜಮೀನಿನಲ್ಲಿನ ಬೇಲದ ಹಣ್ಣಿನ ತಿರುಳನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿರುವುದರಿಂದ ಲಾಭ ದುಪ್ಪಟ್ಟಾಗಿದೆ. ಬೇಲದ ಜ್ಯೂಸ್, ಬೇಲದ ಪೇಡ, ಬೇಲದ ರಸಂ ಹಾಗೂ ಬೇಲದ ಟೀ ಪೌಡರ್ ಹೀಗೆ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

 ನೀರಿಲ್ಲದ ಜಮೀನು ನಳನಳಿಸಿದ್ದು ಹೇಗೆ?

ನೀರಿಲ್ಲದ ಜಮೀನು ನಳನಳಿಸಿದ್ದು ಹೇಗೆ?

ನೀರಿನ ಸುಳಿವಿಲ್ಲದಿದ್ದ ಒಣಭೂಮಿಯಲ್ಲಿ ಚಿನ್ನದಂಥ ಬೆಳೆ ತೆಗೆದವರು ವಿಶ್ವೇಶ್ವರ ಸಜ್ಜನ್. ಜೊತೆಗೆ ಒಣ ಜಮೀನಿನಲ್ಲಿ ತೆರೆದ ಕೊಳವೆ ಬಾವಿ ಬತ್ತದಂತೆ ನಿಗಾ ವಹಿಸಿದ್ದಾರೆ. ನರ್ಸರಿಯಲ್ಲಿ ಅನೇಕ ಇಂಗು ಗುಂಡಿಗಳನ್ನು ಇದೇ ಕಾರಣಕ್ಕೆ ತೆರೆದಿದ್ದಾರೆ. ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆಯಿಂದ ಇರುವ ಸಂಪನ್ಮೂಲದಿಂದಲೇ ಕೃಷಿಯನ್ನು ಯಶಸ್ವಿಯಾಗಿ ಸಾಗಿಸಲು ಇವರಿಂದ ಸಾಧ್ತವಾಗಿದೆ.

 ಕೃಷಿಯೊಂದಿಗೆ ಜೊತೆಯಾದ ಹೈನುಗಾರಿಕೆ

ಕೃಷಿಯೊಂದಿಗೆ ಜೊತೆಯಾದ ಹೈನುಗಾರಿಕೆ

ಕೃಷಿಯೊಂದಿಗೆ ಹೈನುಗಾರಿಕೆಯೂ ಇವರಿಗೆ ಲಾಭ ತಂದುಕೊಟ್ಟಿದೆ. ಹತ್ತು ದೇಸಿ ಗಿರ್‌ ತಳಿಯ ಹಸುಗಳನ್ನು ಸಾಕಿರುವ ಇವರು ಅವುಗಳ ಗೋಮೂತ್ರದಿಂದ ಅರ್ಕ ಔಷಧಿ ತಯಾರಿಸುತ್ತಾರೆ. ಅದಕ್ಕೆ ತಯಾರಿಕಾ ಘಟಕ ಆರಂಭಿಸಿದ್ದಾರೆ. ಈ ಹಸುಗಳ ಹಾಲಿನಿಂದ ಪೇಡ ಹಾಗೂ ತುಪ್ಪ ಮಾಡಿ ಮಾರಾಟ ಮಾಡುತ್ತಾರೆ. ವಾರ್ಷಿಕ ಎರಡು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದು, ನಾಲ್ಕಾರು ಜನಕ್ಕೆ ಉದ್ಯೋಗ ಕೊಟ್ಟಿದ್ದಾರೆ.

"ಬೆಳೆಗಳೊಂದಿಗೆ ಸಂಸ್ಕರಣೆಯೂ ಮುಖ್ಯ"

"ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬಹಳಷ್ಟು ಬೇಡಿಕೆ ಇದೆ. ನಮ್ಮ ರೈತರು ತಾವು ಬೆಳೆದ ಪ್ರತಿಯೊಂದು ಬೆಳೆಗಳನ್ನು ಸಂಸ್ಕರಣೆ ಮಾಡಿ ಮಾರಿದರೆ ಲಾಭವೂ ಹೆಚ್ಚು. ಈ ಎಲ್ಲಾ ಕಲೆಗಾರಿಕೆಯನ್ನು ನಮ್ಮ ಅನ್ನದಾತ ಕಲಿಯಬೇಕಿದೆ" ಎಂದು ಕಿವಿ ಮಾತು ಹೇಳುತ್ತಾರೆ ಸಜ್ಜನ್. ಇವರ ಈ ಕೃಷಿ ಸಾಧನೆಗೆ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಕೃಷಿ ಋಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ಕೊಟ್ಟು ಗೌರವಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+