ಬಳ್ಳಾರಿ ಜಿಲ್ಲೆಗೆ 245 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ: ಶೋಭಾ ಕರಂದ್ಲಾಜೆ
ಬಳ್ಳಾರಿ, ನವೆಂಬರ್ 15: ನಮ್ಮ ಆರೋಗ್ಯ ಉತ್ತಮವಾಗಿರಲು ಸಿರಿ ಧಾನ್ಯಗಳನ್ನು ಬಳಸುವಂತೆ ನಮ್ಮ ಪೂರ್ವಜರೇ ಹೇಳಿದ್ದರು. ಆದರೆ, ನಾವು ಪಾಶ್ಚಿಮಾತ್ಯ ಕಡೆ ಸಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಾವು ಸಿರಿಧಾನ್ಯ ಕಾಳುಗಳನ್ನು ಬಳಸಿ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ವಸತಿ ನಿಲಯ ನಿರ್ಮಾಣದ ಅಡಿಗಲ್ಲಿಗೆ ಭೂಮಿ ಪೂಜೆಯನ್ನು ಶೋಭಾ ಕರಂದ್ಲಾಜೆ ನೆರವೇರಿಸಿದರು.
ಪ್ರಾಣವನ್ನಾದರೂ ಬಿಡುತ್ತೇವೆ, ಆದರೆ ಮೀಸಲಾತಿ ಬಿಡುವುದಿಲ್ಲ; ಸರ್ಕಾರಕ್ಕೆ ವಚನಾನಂದ ಶ್ರೀ ಎಚ್ಚರಿಕೆ
ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರಗಳು ಕೃಷಿಯ ಜೊತೆಗೆ ಕಾರ್ಖಾನೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಯಿತು. ಆದರೆ ಇಂದು ಸಾವಿರಾರು ಕಾರ್ಖಾನೆಗಳು ಈಗ ಮುಚ್ಚಿಹೋಗಿವೆ. ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಕೃಷಿ ಮಾಡುವ ರೈತರು ಆರೋಗ್ಯದ ಬಗ್ಗೆ ಪಾಠ ಕಲಿಸಿದರು ಎಂದರು.
105 ಕೋಟಿ ವೆಚ್ಚದಲ್ಲಿ ಕೃಷಿ ಕಾಲೇಜಿನ ಹಾಸ್ಟೆಲ್ ನಿರ್ಮಾಣ
ಇನ್ನು ಐಸಿಎಆರ್ ಹಗರಿಯ ಕೃಷಿ ಕಾಲೇಜಿನಲ್ಲಿ ಸುಮಾರು 105 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಲಿದ್ದು, ಇದು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ರೈತರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ರೈತರ ನೆರವಿಗಾಗಿ ಕೃಷಿ ಸಮ್ಮಾನ್ ನಿಧಿ ಯೋಜನೆ, ಬೆಳೆ ವಿಮೆಯಂತಹ ಯೋಜನೆಗಳನ್ನು ಜಾರಿ ತಂದಿದೆ. ಕೇಂದ್ರ ಸರ್ಕಾರ ಬಳ್ಳಾರಿ ಜಿಲ್ಲೆಗೆ 245 ಕೋಟಿ ರೂಪಾಯಿ ಬೆಳೆ ವಿಮಾ ಪರಿಹಾರ ಮೊತ್ತವನ್ನು ನೀಡಿದೆ ಎಂದರು.
ರೈತರಿಗೆ ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇದಕ್ಕಾಗಿ ಹೋಬಳಿಗೊಂದರಂತೆ ಸರ್ಕಾರದಿಂದ ಬಾಡಿಗೆ ಕೃಷಿ ಯಂತ್ರಗಳನ್ನು ಕೊಡಲಾಗುತ್ತಿದೆ. ಇದರಿಂದ ಮಾನವ ಸಂಪನ್ಮೂಲದ ಕೊರತೆ ಹಾಗೂ ಕಾರ್ಮಿಕರ ಸಮಸ್ಯೆಯ ನಿವಾರಣೆಯಾಗಲಿದ್ದು ರೈತರಿಗೆ ಉಪಯೋಗವಾಗುತ್ತಿದೆ ಎಂದು ತಿಳಿಸಿದರು.
100 ಸ್ವಾತಂತ್ರ್ಯ ಆಚರಣೆ ವೇಳೆ ಭಾರತ ಅಭಿವೃದ್ಧಿಯಲ್ಲಿ 1ನೇ ಸ್ಥಾನ
2013-14ರಲ್ಲಿ ದೇಶದ ಕೃಷಿ ಬಜೆಟ್ 23 ಸಾವಿರ ಕೋಟಿ ರೂಪಾಯಿ ಇತ್ತು. ಆದರೆ ಈಗ 1.32 ಲಕ್ಷ ಕೋಟಿ ಇದೆ. ಈಗ ಕಳೆದ ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಹೆಚ್ಚಳವಾಗಿದೆ. ಇನ್ನು ರೈತರಿಗೆ ಅನುಕೂಲವಾಗಲಿ ಎಂದು ಕೋಲ್ಡ್ ಸ್ಟೋರೆಜ್ಗಳನ್ನು ಸಹ ಮಾಡಲಾಗಿದೆ.
ವಿವಿಗಳಿಂದ ನಡೆಯುವ ಸಂಶೋಧನೆ ರೈತರಿಗೆ ತಲುಪಬೇಕು, ಅಂತಹ ಕೆಲಸ ವಿಜ್ಞಾನಿಗಳಿಂದಾಗಬೇಕು. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವಿವಿ ಒಂದೇ ಸ್ಥಳದಲ್ಲಿ ಇರಬೇಕು. ನೂರನೇ ಸ್ವಾತಂತ್ರ್ಯ ಆಚರಣೆ ಮಾಡುವ ವೇಳೆಗೆ ಭಾರತವು ಅಭಿವೃದ್ಧಿಯಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿ ಇರಬೇಕು ಎಂಬುದೇ ಪ್ರಧಾನಿ ಮಂತ್ರಿಗಳ ಅಶಯವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಈಗ ವೈದ್ಯರೇ ಸಜ್ಜೆ, ನವಣೆ ತಿನ್ನಲು ಹೇಳುತ್ತಾರೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಕ್ಕೆ ಹಲವು ವರ್ಷಗಳಿಂದ ಕೃಷಿ ಕಾಲೇಜು ಬೇಡಿಕೆ ಇತ್ತು. ಇತ್ತೀಚೆಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ನಲ್ಲಿ ಘೋಷಣೆ ಮಾಡಿ. ಈ ಭಾಗದ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಜನರು ಆರೋಗ್ಯವಾಗಿರಲು ಸಿರಿಧಾನ್ಯಗಳ ಆಹಾರ ಪದ್ಧತಿಯನ್ನು ಬಳಸಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರದಿಂದ ಆರು ಸಾವಿರ ನೀಡಲಾಗುತ್ತಿದೆ. ಆಗ ಸಜ್ಜೆ, ನವಣೆ ಊಟ ಮಾಡಿದರೆ ಬಡವರು ಎನ್ನುತ್ತಿದ್ದರು. ಈಗ ವೈದ್ಯರೇ ಸಜ್ಜೆ, ನವಣೆ, ರಾಗಿ ಹಾಗೂ ಇತರೆ ಸಿರಿಧಾನ್ಯ ಊಟ ಮಾಡಿ ಎಂದು ಹೇಳುತ್ತಿದ್ದಾರೆ. ಪೂರ್ವಜರಿಗೆ ಸಿರಿಧಾನ್ಯ ಬಗ್ಗೆ ಮೊದಲೇ ತಿಳಿದಿತ್ತು ಎಂದರು.
ಹಗರಿ ಕೃಷಿ ವಿದ್ಯಾಲಯಕ್ಕೆ ಕೆಕೆಆರ್ಡಿಬಿ ಅನುದಾನದಲ್ಲಿ 20 ಕೋಟಿ ರೂ
ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರ ಮಾತನಾಡಿ, ನಮ್ಮ ಕೃಷಿ ಪದ್ಧತಿಯು ಪ್ರಪಂಚವು ಭಾರತದತ್ತ ನೋಡುವಂತೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಇನ್ನು ಬಳ್ಳಾರಿ ಮತ್ತು ಆಂಧ್ರ ಗಡಿ ಭಾಗದಲ್ಲಿರುವ ಈ ಕೃಷಿ ವಿಜ್ಞಾನ ಕೇಂದ್ರವು 550 ಎಕರೆ ಜಮೀನು ವ್ಯಾಪ್ತಿಯಲ್ಲಿದೆ. ಸಂಶೋಧನೆ ಮಾಡಲು ಅತಿ ಹೆಚ್ಚು ವಿಶಾಲವಾದ ಜಾಗ ಹೊಂದಿದ್ದು, ಈ ಭಾಗದ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಉಪಯುಕ್ತವಾಗಿದೆ ಎಂದರು. ಹಗರಿ ಕೃಷಿ ವಿದ್ಯಾಲಯಕ್ಕೆ ಕೆಕೆಆರ್ಡಿಬಿ ಅನುದಾನದಲ್ಲಿ 20ಕೋಟಿ ರೂಪಾಯಿ ಮಂಜೂರಾಗಲಿದೆ. ಅದರಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಕೇಂದ್ರದ ಕಟ್ಟಡ, 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಲ್ಯಾಬ್ ಹಾಗೂ ಸುಮಾರು 1.25ಲಕ್ಷ ವೆಚ್ಚದಲ್ಲಿ ಕೃಷಿಕರ ವಿಕಾಸ ಕೇಂದ್ರ ನಿರ್ಮಾಣವಾಗಲಿವೆ ಎಂದು ತಿಳಿಸಿದರು.