14 ವರ್ಷದ ಬಳಿಕ ಬಿಜೆಪಿ ಕಛೇರಿಗೆ ಜನಾರ್ದನ ರೆಡ್ಡಿ ಭೇಟಿ, ಕೊಟ್ಟಿ ಕರೆ ಏನು?
ಬಳ್ಳಾರಿ, ಅಕ್ಟೋಬರ್ 15: ಸುಪ್ರೀಂಕೋರ್ಟ್ ಗಂಗಾವತಿ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಕೋರ್ಟ್ ನಿರ್ಬಂಧ ಸಡಿಲಿಸಿದ್ದು, ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಯಾವುದೇ ನಿರ್ಬಂಧವಿಲ್ಲದೇ ಸಂಚಾರ ನಡೆಸುವಂತಾಗಿದೆ. ಆದ್ದರಿಂದ ಅವರು ತವರು ಜಿಲ್ಲೆಯ ವಿವಿಧ ಕಡೆಗೆ ಭೇಟಿ ನೀಡುತ್ತಿದ್ದಾರೆ.
ಸೆಪ್ಟೆಂಬರ್ 30ರಂದು ಸುಪ್ರೀಂಕೋರ್ಟ್ ಬಳ್ಳಾರಿ ಭೇಟಿಗೆ ಜನಾರ್ದನ ರೆಡ್ಡಿಗೆ ಇದ್ದ ನಿರ್ಬಂಧ ಸಡಿಲಿಸಿತ್ತು. ಅಕ್ಟೋಬರ್ 3ರ ನವರಾತ್ರಿ ಮೊದಲ ದಿನ ಜನಾರ್ದನ ರೆಡ್ಡಿ ಬಳ್ಳಾರಿಗೆ ಮೊದಲು ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತರು, ರೆಡ್ಡಿ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ, ಅದ್ದೂರಿಯಾಗಿ ಸ್ವಾಗತಿಸಿದ್ದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರಕೋಡೆ ಛಿದ್ರಗೊಳಿಸಿ ಬಿಜೆಪಿ ಪಾರುಪತ್ಯ ಸ್ಥಾಪನೆಯಾಗಲು ಜನಾರ್ದನ ರೆಡ್ಡಿ ಸಹೋದರರು, ಬಿ. ಶ್ರೀರಾಮುಲು ಪಾತ್ರ ಬಹುಮುಖ್ಯವಾಗಿದ್ದು. ಇಂತಹ ಬಳ್ಳಾರಿಯಲ್ಲಿನ ಬಿಜೆಪಿ ಕಛೇರಿಗೆ ಜನಾರ್ದನ ರೆಡ್ಡಿ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದಕ್ಕೆ ರಾಜಕೀಯ ಮತ್ತು ಕಾನೂನು ಕಾರಣಗಳಿತ್ತು.
ಆದರೆ ಈಗ ಎಲ್ಲಾ ನಿರ್ಬಂಧ ಸಡಿಲಗೊಂಡಿದ್ದು, ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಬಳ್ಳಾರಿಗೆ ಆಗಮಿಸಿದ ಅವರು ಬಳ್ಳಾರಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ವಿಧಾನ ಪರಿಷತ್ ಸದಸ್ಯ ವೈ. ಎಂ. ಸತೀಶ್ ಮುಂತಾದವರು ಜನಾರ್ದನ ರೆಡ್ಡಿ ಬರಮಾಡಿಕೊಂಡರು.
ಬಿಜೆಪಿ ಕಛೇರಿಗೆ ಭೇಟಿ: ಬಳ್ಳಾರಿ ಬಿಜೆಪಿ ಕಛೇರಿಗೆ ಭೇಟಿ ನೀಡಿದ ಕುರಿತು ಜನಾರ್ದನ ರೆಡ್ಡಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. '14 ವರ್ಷಗಳ ಬಳಿಕ ಮೊದಲ ಬಾರಿಗೆ ಬಳ್ಳಾರಿಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯಕ್ಕೆ ಧರ್ಮಪತ್ನಿ ಲಕ್ಷ್ಮಿ ಅರುಣರವರೊಂದಿಗೆ ತೆರಳಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿದೆನು' ಎಂದು ಹೇಳಿದ್ದಾರೆ.
ಬಿಜೆಪಿ ಕಛೇರಿಯಲ್ಲಿ ನಡೆದ ಸಕ್ರಿಯ ಸದಸ್ಯತ್ವದ ಜಿಲ್ಲಾ ಕಾರ್ಯಾಗಾರ-2024 ಉದ್ದೇಶಿಸಿ ಜನಾರ್ದನ ರೆಡ್ಡಿ ಮಾತನಾಡಿದರು. ಸಭೆಯಲ್ಲಿ ಮಾತನಾಡಿದ ಅವರು, "ಅಖಂಡ ಬಳ್ಳಾರಿ ಜಿಲ್ಲೆಯು ದೇಶದಲ್ಲಿಯೇ ಹೆಚ್ಚಿನ ಸದಸ್ಯತ್ವ ದಾಖಲಿಸಿರುವ ಜಿಲ್ಲೆಯಾಗಬೇಕೆಂದು. ಹಾಗೂ ಮುಂದೆ ನಡೆಯುವ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಬೇಕು" ಎಂದು ಕರೆ ನೀಡಿದರು.
ಸಂಡೂರು ಕ್ಷೇತ್ರದ ಉಪ ಚುನಾವಣೆ ಹತ್ತಿರವಾಗಿರುವಾಗ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಿರುವುದು ಬಿಜೆಪಿಯ ಬಲ ಹೆಚ್ಚಿಸಿದೆ. ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿ ಕರೆದಿದೆ. ಸಂಡೂರು ಉಪ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಸೇರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದ ಸಂಡೂರು ಕ್ಷೇತ್ರವನ್ನು ಮರಳಿ ಬಿಜೆಪಿ ತಂದು ಕೊಡಲಿದ್ದಾರೆಯೇ? ಕಾದು ನೋಡಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸಂಡೂರು ಉಪ ಚುನಾವಣೆಗೆ ಅಭ್ಯರ್ಥಿ ಯಾರು? ಎಂಬುದು ಇನ್ನೂ ಘೋಷಣೆಯಾಗಿಲ್ಲ. ಬಿ. ಶ್ರೀರಾಮುಲು ಅಭ್ಯರ್ಥಿಯಲ್ಲ ಎಂದು ಈಗಾಗಲೇ ಪಕ್ಷ ಸ್ಪಷ್ಟಪಡಿಸಿದೆ.
ಸಂಡೂರು ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಇ. ತುಕಾರಾಂ 85,223 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದ ಬಳಿಕ ಇ. ತುಕಾರಾಂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ಉಪ ಚುನಾವಣೆ ನಡೆಯಬೇಕಿದೆ.
ಸಂಡೂರಿನಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ 49,701 ಮತಗಳನ್ನು ಪಡೆದು ಸೋಲು ಕಂಡಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಯಾರನ್ನು ಅಭ್ಯರ್ಥಿ ಮಾಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications