ರಾಹುಲ್ ಗಾಂಧಿಗೆ 60 ಲಕ್ಷದ ಬಂಗಾರಲೇಪಿತ ವಾಲ್ಮೀಕಿ ವಿಗ್ರಹ
ಬಳ್ಳಾರಿ, ಫೆಬ್ರವರಿ 10 : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಉಡುಗೊರೆ ನೀಡಲು ಕೂಡ್ಲಿಗಿ ಶಾಸಕ ನಾಗೇಂದ್ರ ತೀರ್ಮಾನಿಸಿದ್ದಾರೆ. ಅದೇನು ಅಂಥ ಭರ್ಜರಿ ಉಡುಗೊರೆ ಅಂತ ಕೇಳಿದರೆ, ಬಂಗಾರ ಲೇಪಿತ ಬೆಳ್ಳಿಯ ವಾಲ್ಮೀಕಿ ವಿಗ್ರಹವೊಂದನ್ನು ಉಡುಗೊರೆ ನೀಡಲು ಸಿದ್ಧರಾಗಿದ್ದಾರೆ. ಅದನ್ನು ರಾಹುಲ್ ಸ್ವೀಕರಿಸುತ್ತಾರಾ ಎಂಬುದು ಸದ್ಯಕ್ಕೆ ಪ್ರಶ್ನೆಯೇ.
ಏಕೆಂದರೆ, ಈ ವಿಗ್ರಹದ ಬೆಲೆ ಅರವತ್ತು ಲಕ್ಷ ರುಪಾಯಿ. ಹೌದು ನೀವು ಸರಿಯಾಗಿಯೇ ಓದುತ್ತಿದ್ದೀರಿ. ಬೆಳ್ಳಿಯ ಬಂಗಾರ ಲೇಪಿತ ಈ ವಾಲ್ಮೀಕಿ ವಿಗ್ರಹದ ಬೆಲೆ 60 ಲಕ್ಷ ರುಪಾಯಿ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು ಈ ರೀತಿಯ ದುಬಾರಿ ಉಡುಗೊರೆ ಪಡೆದು ವಿಪಕ್ಷಗಳ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಬ್ಲೋ ವಾಚ್ ಪಡೆದು, ಪಟ್ಟ ಕಷ್ಟವೇ ಸಾಕಷ್ಟಿದೆ. ಅದು ಯಾವ ಪರಿ ಪರಿಣಾಮ ಬೀರಿದೆ ಅಂದರೆ, ಸಚಿವ ಎ.ಮಂಜು ಮುಖ್ಯಮಂತ್ರಿಗೆ ರೇಷ್ಮೆ ಪಂಚೆಯನ್ನು ಉಡುಗೊರೆ ನೀಡಲು ಮುಂದಾದರೂ ಬೇಡ ಎಂದು ನಿರಾಕರಿಸಿದ್ದರು ಸಿದ್ದರಾಮಯ್ಯ. ಆಮೇಲೆ ಯಾವುದೇ ಉಡುಗೊರೆಯನ್ನು ಅವರು ತೆಗೆದುಕೊಳ್ಳುತ್ತಿಲ್ಲ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೂಡ್ಲಿಗಿ ಶಾಸಕ ನಾಗೇಂದ್ರ ಅರವತ್ತು ಲಕ್ಷ ಮೌಲ್ಯದ ಒಂದೂವರೆ ಕೇಜಿ ಬಂಗಾರ ಲೇಪಿತ ಬೆಳ್ಳಿಯ ವಾಲ್ಮೀಕಿ ವಿಗ್ರಹವನ್ನು ಉಡುಗೊರೆ ನೀಡಿ, ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತಿದೆ. ವಾಲ್ಮೀಕಿ ಸಮುದಾಯದ ನಾಯಕ ನಾಗೇಂದ್ರ ಅವರ ಈ ಉಡುಗೊರೆ ಸದ್ಯಕ್ಕಂತೂ ಸುದ್ದಿಯಲ್ಲಿದೆ.