ಬಳ್ಳಾರಿ; 1000 ಬೆಡ್ ಆಸ್ಪತ್ರೆ ನಾಲ್ಕು ದಿನದಲ್ಲಿ ಆರಂಭ
ಬಳ್ಳಾರಿ, ಮೇ 12; "ಜಿಂದಾಲ್ ಎದುರು ನಿರ್ಮಾಣವಾಗುತ್ತಿರುವ 1 ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ನಾಲ್ಕು ದಿನದಲ್ಲಿ ಪೂರ್ಣಗೊಂಡು 300 ಬೆಡ್ ಲಭ್ಯವಾಗಲಿದೆ" ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಈಗ ತಾನೆ ಆಸ್ಪತ್ರೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿ ಬಂದಿದ್ದೇನೆ. ಎಲೆಕ್ಟ್ರಿಕಲ್ ಕಾರ್ಯ ನಡೆಯುತ್ತಿದೆ. ಇನ್ನೂ 4 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಂಡು 300 ಆಕ್ಸಿಜನ್ ಬೆಡ್ ಲಭ್ಯವಾಗಲಿದೆ. ಈಗಾಗಲೇ ತಜ್ಞ ವೈದ್ಯರು, ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭವಾಗಿದೆ" ಎಂದರು.
"ಜಿಲ್ಲೆಯಲ್ಲಿ ಹೋಂ ಐಸೋಲೇಶನ್ನಲ್ಲಿರುವ ಸೋಂಕಿತರು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವ ಕಾರಣ ಅವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ" ಎಂದು ಸಚಿವರು ತಿಳಿಸಿದರು.

"ಹೋಂ ಐಸೋಲೇಶನ್ನಲ್ಲಿರುವ ಸೋಂಕಿತರು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಜಿಲ್ಲಾಡಳಿತ ನೇಮಿಸಿದ ತಂಡಗಳು ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿರುತ್ತಿದ್ದಾರೆ. ನಂತರ ಹೊರಗಡೆ ಅನಗತ್ಯ ತಿರುಗಾಟ ನಡೆಸುತ್ತಾರೆ. ಈ ಮೂಲಕ ಇತರರಿಗೆ ಸೋಂಕು ಹರಡಿಸುವ ಕೆಲಸ ಮಾಡುತ್ತಿದ್ದಾರೆ" ಎಂದರು.
"ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುವುದರ ಬದಲಿಗೆ ಹೆಚ್ಚಿನ ಪ್ರಕರಣಗಳು ದೃಢಪಡುವಂತಾಗಿದೆ. ಜಿಲ್ಲಾಡಳಿತ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡರೂ ಸಹ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.
"ಜಿಲ್ಲೆಯಲ್ಲಿ 14 ಸಾವಿರ ಜನರು ಹೋಂ ಐಸೋಲೇಶನ್ನಲ್ಲಿದ್ದು, ಮೊದಲಿಗೆ ಅತಿಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿನ ಹೋಂ ಐಸೋಲೇಶನ್ ಸೋಂಕಿತರನ್ನು ಆದ್ಯತೆ ಮೇರೆಗೆ ಈಗಾಗಲೇ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ಗಳಿಗೆ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳಾಂತರ ಮಾಡಲಾಗುತ್ತದೆ" ಎಂದು ಆನಂದ್ ಸಿಂಗ್ ಹೇಳಿದರು.












Click it and Unblock the Notifications