ಟಿಪ್ಪು ಜಯಂತಿ ಆಚರಿಸೋಕೆ ಬಿಡೋಲ್ಲ: ಪ್ರಮೋದ್ ಮುತಾಲಿಕ್
ಬಾಗಲಕೋಟೆ, ಅಕ್ಟೋಬರ್ 21: "ನವೆಂಬರ್ 10 ರಂದು ರಾಜ್ಯ ಸರ್ಕಾರ ಆಚರಣೆ ಮಾಡಲಿರುವ ಟಿಪ್ಪು ಜಯಂತಿ ಆಚರಣೆಗೆ ಬಿಡುವುದಿಲ್ಲ" ಎಂದು ಬಾಗಲಕೋಟೆಯಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಮುತಾಲಿಕ್, "ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದ. ಕನ್ನಡ ದ್ರೋಹಿಯಾಗಿದ್ದ ಇಂಥವನ ಜಯಂತಿ ಆಚರಣೆ ಮಾಡುತ್ತಿರುವುದು ಖಂಡನೀಯ. ಒಂದು ವೇಳೆ ಆಚರಣೆ ಮಾಡಿದ್ದೇ ಆದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶ್ರೀರಾಮ ಸೇನೆಯ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಟಿಪ್ಪು ಒಬ್ಬ ಮತಾಂಧನಾಗಿದ್ದ. 11,000 ಹಿಂದೂಗಳನ್ನು ಮತಾಂತರಗೊಳಿಸಿದ್ದ. 300 ದೇವಾಲಯಗಳನ್ನು ದ್ವಂಸಗೊಳಿಸಿದ್ದ ಟಿಪ್ಪು. ಇಂಥವನ ಜಯಂತಿ ಆಚರಣೆಗೆ ಬಿಡುವುದಿಲ್ಲ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮುಂದೊಂದು ದಿನ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಹೆಸರಿನ ನಾಮಫಲಕಗಳನ್ನು ಮತ್ತು ಸರ್ಕಲ್ ಗಳಿಗೆ, ರಸ್ತೆಗಳಿಗೆ ಇಟ್ಟಿರುವ ಎಲ್ಲಾ ಬೋರ್ಡ್ ಗಳನ್ನು ಕಿತ್ತು ಹಾಕಬೇಕು ಅಂತ ಬಿಜೆಪಿಗೆ ಆಗ್ರಹಿಸಿದ್ದಾರೆ.
ಅತ್ಯಾಚಾರಿ ವ್ಯಕ್ತಿಯ ಪೂಜೆಗೆ ನನ್ನನ್ನು ಆಹ್ವಾನಿಸಬೇಡಿ: ಸಚಿವ ಹೆಗಡೆ
ಸರ್ಕಾರ ಟಿಪ್ಪು ಜಯಂತಿಯನ್ನು ರಾಜಕೀಯ ಉದ್ದೇಶಕ್ಕೆ ಮಾತ್ರ ಆಚರಣೆ ಮಾಡುತ್ತಿದೆ. ಮುಸ್ಲಿಮರ ಓಟಿನ ಓಲೈಕೆಗಾಗಿ ಟಿಪ್ಪುವನ್ನ ವೈಭವೀಕರಣಗೊಳಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಇನ್ನು ಬಿಜೆಪಿ ಸೇರುವ ತಮ್ಮ ಇಂಗಿತದ ವಿಚಾರವಾಗಿ ಮಾತನಾಡಿದ ಮುತಾಲಿಕ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೂ ಹಿಂದೆ ಆರ್.ಎಸ್.ಎಸ್.ನಲ್ಲಿದ್ದ ಪ್ರಮೋದ್ ಮುತಾಲಿಕ್ ಕಾರಣವಾಗಿದ್ದ ಅನ್ನೋದು ಮನಗಾಣಬೇಕು. ಈಗ ಬಿಜೆಪಿಯವರಿಗೆ ಮುತಾಲಿಕ್ ನಂಥವರು ಬೇಕಾಗಿಲ್ಲ. ಎಸ್.ಎಂ ಕೃಷ್ಣ ನಂಥವರು, ಸಿಪಿ ಯೋಗೀಶ್ವರ ನಂಥವರು ಬೇಕಾಗಿದ್ದಾರೆ. ಅವರ ನಡುವಳಿಕೆಗಳಲ್ಲಿಯೇ ತೋರಿಸ್ತಿದೆ ಬಿಜೆಪಿಯವರ ಮನಸ್ಥಿತಿ ಎಂತಹದು ಎಂದು ಅಸಮಾಧಾನ ಹೊರಹಾಕಿದರು.