ಹಲಗೆ ಬಾರಿಸಿ ಮೈಗೂರನ್ನು ಬಯಲು ಶೌಚಮುಕ್ತ ಮಾಡಿದ ಗ್ರಾಮಸ್ಥರು
ಜಮಖಂಡಿ, ಅಕ್ಟೋಬರ್ 09 : ತಾಲೂಕಿನ ಮೈಗೂರ ಗ್ರಾಮದಲ್ಲಿ ಬಯಲು ಶೌಚ ಮಾಡುತಿದ್ದ ಜಾಗವನ್ನು ಗ್ರಾಮಸ್ಥರು ನೀರಿನಿಂದ ಸ್ವಚ್ಛಗೊಳಿಸಿ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಗ್ರಾಮದಲ್ಲಿ ಕಳೆದ 8 ದಿನಗಳಿಂದ ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಬೇಕು, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಗ್ರಾಮಸ್ಥರು ಒಗ್ಗಟ್ಟಾಗಿ 12ನೇ ಶತಮಾನದ ವಚನಕಾರರ, ಸಮಾಜ ಸುಧಾರಕರ ಹೆಸರಿನಲ್ಲಿ 9 ತಂಡಗಳನ್ನು ರಚನೆ ಮಾಡಿಕೊಂಡು ಗಸ್ತು ತಿರುಗುತ್ತಾ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಹಿರ್ದೆಸೆಗೆ ಹೋದಾಗ ಕಾಲು ಜಾರಿ ಕಬಿನಿ ನಾಲೆಗೆ ಬಿದ್ದು ಯುವಕ ಸಾವು
ಬೆಳಿಗ್ಗೆ 4ರಿಂದ 9 ಗಂಟೆಯವರೆಗೆ, ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಹಲಗೆ ಬಾರಿಸುತ್ತಾ, ಸಿಟಿ ಉದುತ್ತಾ ಗ್ರಾಮದಲ್ಲಿ ಬಯಲು ಶೌಚ ಮಾಡುತಿದ್ದ ಜಾಗವನ್ನು ಕಾಯುತ್ತಿದ್ದಾರೆ.
ಗ್ರಾಮದ ಹೊರವಲಯದ ನದಿ ರಸ್ತೆ, ಮುತ್ತೂರ ರಸ್ತೆಗಳ ಬದಿಯಿದ್ದ ಕಸಕಡ್ಡಿಯನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛಗೊಳಿಸಿ, ಗ್ರಾಮದ ಸಕ್ಕರೆ ಕಾರ್ಖಾನೆಯ ನೀರಿನ ವಾಹನ ಬಳಸಿಕೊಂಡು ರಸ್ತೆಗಳನ್ನು ಗ್ರಾಮಸ್ಥರೆ ಸ್ವಚ್ಛಗೊಳಿಸುವದರ ಮೂಲಕ ಬಯಲು ಶೌಚಮುಕ್ತಕ್ಕೆ ಮುಂದಾಗಿದ್ದಾರೆ.
ಗ್ರಾಮದಲ್ಲಿ ಸುಮಾರು 700 ಕುಟುಂಬಗಳಿವೆ. ಪ್ರತಿಯೊಂದು ಕುಟುಂಬಕ್ಕೆ ಶೌಚಗೃಹಗಳನ್ನು ಗ್ರಾಪಂನಿಂದ ನಿರ್ಮಿಸಲಾಗಿದೆ. ಆದರೂ ಗ್ರಾಮಸ್ಥರೂ ಶೌಚಗೃಹ ಬಳಸದೆ ಬಯಲಿಗೆ ಶೌಚಕ್ಕೆ ಬರುತಿದ್ದರು. ಪ್ರತಿಯೊಬ್ಬರಿಗೂ ಶೌಚಗೃಹ ಇದ್ದರೂ ಯಾಕೆ ಬಯಲು ಬಹಿರ್ದೆಶೆಗೆ ಬರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು.
ಕೀನ್ಯಾದಲ್ಲಿ ಕೊಪ್ಪಳದ ಶೌಚಾಲಯ ಕ್ರಾಂತಿಗೆ ಶ್ಲಾಘನೆ
ಇದನ್ನು ತಡೆಯಬೇಕು, ಉತ್ತಮ ಆರೋಗ್ಯ, ಸ್ವಚ್ಛ ಗ್ರಾಮಕ್ಕಾಗಿ ಗ್ರಾಮದ ಹಿರಿಯರು, ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಎಲ್ಲ ಸಮಾಜದ ಮುಖಂಡರು, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ವಚನಕಾರರ ಹೆಸರಿನಲ್ಲಿ ತಂಡಗಳನ್ನು ರಚಿಸಿಕೊಂಡು ಗ್ರಾಮ ಸ್ವಚ್ಛತೆಗೆ ಮುಂದಾಗಿದ್ದಾರೆ.
ಪ್ರತಿ ಕುಟುಂಬಕ್ಕೆ ಮನವಿ : ಗ್ರಾಮದ ಎಲ್ಲ ಮುಖಂಡರು, ಯುವಕರು ಗ್ರಾಮದ ಪ್ರತಿಯೊಂದು ಕುಟುಂಬದ ನಿವಾಸಕ್ಕೆ ತೆರಳಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ, ಬಯಲುಶೌಚ ಮುಕ್ತಕ್ಕೆ ತಾವು ಕೈಜೋಡಿಸಿ, ಶೌಚಗೃಹಗಳನ್ನೇ ಬಳಸಿ ಎಂದು ಮನವಿ ಮಾಡಿದ್ದರಿಂದ ಗ್ರಾಮದಲ್ಲಿ ಸುಮಾರು 8 ದಿನಗಳಿಂದ ಗ್ರಾಮದ ಹೊರವಲಯದ ರಸ್ತೆಗಳು ವಾಕಿಂಗ್ ತಾಣಗಳಾಗಿ ಮಾರ್ಪಾಟಾಗಿವೆ.
ಗ್ರಾಮದಲ್ಲಿ 30 ಕುಟುಂಬಗಳಿಗೆ ಶೌಚಗೃಹಗಳ ಅವಶ್ಯಕತೆ ಇತ್ತು. ಅವರಿಗೆ ಸ್ವಂತ ಜಾಗೆಯ ಕೊರತೆ ಉಂಟಾಗಿತ್ತು. ಗ್ರಾಮದ ಪ್ರಮುಖರು ನಮ್ಮೂರು ಬಯಲು ಶೌಚಮುಕ್ತವಾಗುತ್ತದೆ ಎಂದರೆ ನಮ್ಮ ಖಾಲಿಯಿರುವ ಜಾಗೆಯಲ್ಲೆ ಶೌಚಗೃಹ ನಿರ್ಮಿಸಲು ಉಚಿತವಾಗಿ ಜಾಗೆಗಳನ್ನು ನೀಡಿ ಸ್ವಚ್ಛತಾ ಆಂದೋಲನಕ್ಕೆ ಸಹಾಯ ಮಾಡಿದ್ದು ಗ್ರಾಮಸ್ಥರಲ್ಲಿ ಸಂತೋಷ ಮೂಡಿಸಿದೆ.
ನೌಕರರ ಸಾಥ್ : ಗ್ರಾಮದಲ್ಲಿನ ಸರಕಾರಿ ಪ್ರೌಢ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಾನಂದ ಕಾನ್ವೆಂಟ್ ಶಾಲೆ, ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಶನಿವಾರ ಬೆಳಗ್ಗೆ ಗ್ರಾಮಸ್ಥರ ಕಾರ್ಯುಕ್ಕೆ ಬೆಂಬಲ ನೀಡಿ ಹಲಗೆ ಬಾರಿಸಿ, ಬಯಲು ಶೌಚಕ್ಕೆ ಯಾರು ಬರಬೇಡಿ, ಶೌಚಗೃಹಗಳನ್ನೆ ಬಳಸಿ ಎಂದು ಜಾಗೃತಿ ಮೂಡಿಸಿದರು.