ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಅಪ್ಡೇಟ್ ಕೊಟ್ಟ ನೈಋತ್ಯ ರೈಲ್ವೆ
ಬಾಗಲಕೋಟೆ, ಅಕ್ಟೋಬರ್ 30: ಉತ್ತರ ಕರ್ನಾಟಕ ಮತ್ತು ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವದ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಬಗ್ಗೆ ನೈಋತ್ಯ ರೈಲ್ವೆ ಅಪ್ಡೇಟ್ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಳೆದು ತೂಗಿ ಈ ಯೋಜನೆಯನ್ನು ಪ್ರಾರಂಭ ಮಾಡಿದರೂ ಸಹ ಇನ್ನೂ ಪೂರ್ಣಗೊಂಡಿಲ್ಲ.
ಬಾಗಲಕೋಟೆ-ಕುಡಚಿ ನಡುವಿನ 142 ಕಿ. ಮೀ. ನೂತನ ರೈಲು ಮಾರ್ಗದ ಬೇಡಿಕೆ ತುಂಬಾ ಹಿಂದಿನದು. 2025ರಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಎರಡು ಬಾರಿ ಈ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಯಿತು. 2010ರಲ್ಲಿ ರೈಲು ಮಾರ್ಗಕ್ಕಾಗಿ ಹೋರಾಟ ಆರಂಭಗೊಂಡಿತು.

ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದಾಗ ಈ ನೂತನ ರೈಲು ಮಾರ್ಗ ಘೋಷಣೆ ಮಾಡಲಾಯಿತು. 816 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಐದು ವರ್ಷಗಳ ಗಡುವು ನೀಡಲಾಗಿತ್ತು. ಆದರೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ಈಗ ಪೂರ್ಣಗೊಳ್ಳುತ್ತಾ ಬಂದಿದೆ. ಕಾಮಗಾರಿ ವಿಳಂಬವಾಗುತ್ತಾ ಸಾಗಿದ್ದು, ಯೋಜನಾ ವೆಚ್ಚವೂ ಅಧಿಕವಾಗುತ್ತಿದೆ.
ನೈಋತ್ಯ ರೈಲ್ವೆ ಅಪ್ಡೇಟ್; ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಭಾಗವಾಗಿ ಬಾಗಲಕೋಟೆ-ಖಜ್ಜಿದೋಣಿ ನಡುವಿನ 30 ಕಿ. ಮೀ. ನೂತನ ರೈಲು ಮಾರ್ಗ ನಿರ್ಮಾಣವಾಗಿದೆ. ಈ ಮಾರ್ಗದ ಕುರಿತು ನೈಋತ್ಯ ರೈಲ್ವೆ ಅಪ್ಡೇಟ್ ನೀಡಿದೆ. ರೈಲು ಹಳಿ ಹಾಕಲು ಮಣ್ಣನ್ನು ಹಾಕಿ ಸಮತಟ್ಟು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಖಜ್ಜಿದೋಣಿ-ಲೋಕಾಪುರ ನಡುವಿನ ಕಾಮಗಾರಿಯ ಚಿತ್ರವನ್ನು ನೈಋತ್ಯ ರೈಲ್ವೆ ಹಂಚಿಕೊಂಡಿದೆ.
2012ರಲ್ಲಿ ಆರಂಭಗೊಂಡ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮನ್ವಯದ ಕಾರಣ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಇಷ್ಟು ಹೊತ್ತಿಗೆ ಮಾರ್ಗದಲ್ಲಿ ರೈಲುಗಳು ಸಂಚಾರ ನಡೆಸಬೇಕಿತ್ತು. ಬಾಗಲಕೋಟೆ ಖಜ್ಜಿದೋಣಿ ನಡುವಿನ ಮಾರ್ಗ ಪೂರ್ಣಗೊಂಡಿದೆ.
ಕರ್ನಾಟಕ ಸರ್ಕಾರ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು 2025ಕ್ಕೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ. 142 ಕಿ. ಮೀ. ಉದ್ದದ ಈ ಯೋಜನೆಯ ವೆಚ್ಚ 1,530 ಕೋಟಿ. ಯೋಜನೆಗೆ 2,496 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. 2,476 ಎಕರೆ ಭೂಸ್ವಾಧೀನಗೊಂಡಿದೆ.
ಮೂಲ ಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ್ ಕೆಲವು ದಿನಗಳ ಹಿಂದೆ ಈ ರೈಲು ಯೋಜನೆ ಪ್ರಗತಿ ಪರಿಶೀಲನೆ ನಡೆಸಿದರು. ಬಾಗಲಕೋಟೆ-ಖಜ್ಜಿದೋಣಿ-ಲೋಕಾಪುರ ನಡುವಿನ 60 ಕಿ. ಮೀ. ಕಾಮಗಾರಿ 2024ರ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಕುಡಚಿ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ. ಕುಡಚಿ ಮತ್ತು ಜಗದಾಳ್ ನಡುವಿನ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಯೋಜನೆಗಾಗಿ ಬಾಗಲಕೋಟೆ ಉಪ ವಿಭಾಗದಲ್ಲಿ 580, ಜಮಖಂಡಿ ಉಪ ವಿಭಾಗದಲ್ಲಿ 1800 ಮತ್ತು ಚಿಕ್ಕೋಡಿ ಉಪ ವಿಭಾಗದಡಿ 380 ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗದಿಂದ ಲೋಕಾಪುರ, ಮುಧೋಳ, ಜಮಖಂಡಿ, ಕಲಾದಗಿ ಭಾಗದಲ್ಲಿ ಬೆಳೆಯುವ ದ್ರಾಕ್ಷಿ, ಸಪೋಟ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಮುಂಬೈ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಅನುಕೂಲವಾಗಲಿದೆ.
ಜಮಖಂಡಿ ಭಾಗದಲ್ಲಿ ಸಕ್ಕರೆ ಮತ್ತು ಸಿಮೆಂಟ್ ಕಾರ್ಖನೆಗಳಿವೆ. ಇದರಿಂದಾಗಿ ಸಕ್ಕರೆ, ಸಿಮೆಂಟ್, ಸುಣ್ಣ ಸಾಗಣೆಗೆ ಸಹ ಅನುಕೂಲವಾಗಲಿದೆ. ಒಟ್ಟಾರೆ ರೈಲು ಮಾರ್ಗ ಪ್ರಯಾಣಿಕರ ಸಂಚಾರದ ಜೊತೆಗೆ ವಾಣಿಜ್ಯೋದ್ಯಮಕ್ಕೂ ಸಹ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.












Click it and Unblock the Notifications