ತಾವು ಸಿಎಂ ಆಗಲು ಕಾರಣಕರ್ತರನ್ನು ನೆನೆದ ಸಿದ್ದರಾಮಯ್ಯ
ಬಾಗಲಕೋಟೆ, ಸೆಪ್ಟೆಂಬರ್ 05: ಐದು ವರ್ಷ ಆಡಳಿತ ಪೂರೈಸಿದ ರಾಜ್ಯದ ಯಶಸ್ವಿ ಸಿಎಂ ಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯ ಅವರು ತಾವು ಸಿಎಂ ಆಗಲು ಮೂಲ ಪ್ರೇರಣೆ ಯಾರು ಎಂಬುದನ್ನು ಬಹಿರಂಗಗೊಳಿಸಿದರು.
ಬಾಗಲಕೋಟೆಯಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ತಾವು ಸಿಎಂ ಆಗಲು ಪ್ರೇರೇಪಿಸಿದ್ದು ಒಬ್ಬರು ಶಿಕ್ಷಕರು ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಅವರು, 'ನಾನು ಮುಖ್ಯಮಂತ್ರಿ ಮಟ್ಟಕ್ಕೆ ಏರಲು ಕಾರಣ ನನ್ನ ಮೇಷ್ಟ್ರು ರಾಜಪ್ಪ, ಅವರು ಇಲ್ಲದೇ ಇದ್ದರೆ ನಾನು ಈವರೆಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ' ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.
'ರಾಜಪ್ಪ ಮೇಷ್ಟ್ರು ನನ್ನ ಮನೆಗೆ ಬಂದು ನನ್ನ ತಂದೆಯ ಬಳಿ ಮಾತನಾಡಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು. ನನ್ನನ್ನೂ ಸೇರಿ ಒಟ್ಟು ಮೂವರನ್ನು ಅನುಮತಿ ಪಡೆದು ಒಂದೇ ಬಾರಿಗೆ ಐದನೇ ತರಗತಿಗೆ ಸೇರಿಸಿದರು' ಎಂದು ತಮ್ಮ ಶಿಕ್ಷಣದ ಪ್ರಯಾಣ ಪ್ರಾರಂಭವಾದ ಬಗೆಯನ್ನು ಅವರು ವಿವರಿಸಿದರು.

ನೇರವಾಗಿ ಐದನೇ ತರಗತಿಗೆ ಸೇರಿಸಿದರು: ಸಿದ್ದರಾಮಯ್ಯ
'ಶಾಲೆಯಿಂದ ದೂರ ಉಳಿದಿದ್ದ ನನ್ನನ್ನು ಶಾಲೆ ಸೇರುವಂತೆ ಮಾಡಿದ್ದು ರಾಜಪ್ಪ ಮೇಷ್ಟ್ರು ಅವರು ಇಲ್ಲದೇ ಹೋಗಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಯಾರು ಶಾಲೆಗೆ ಸೇರಿಲ್ಲವೊ ಅವರ ಮನೆಗೆ ಹೋಗಿ ಪೋಷಕರನ್ನು ಒಪ್ಪಿಸಿ ಶಾಲೆಗೆ ಸೇರಿಸುತ್ತಿದ್ದರು' ಎಂದು ಸಿದ್ದರಾಮಯ್ಯ ಅವರು ಭಾವಪೂರ್ಣವಾಗಿ ಶಿಕ್ಷಕರನ್ನು ನೆನಪಿಸಿಕೊಂಡರು.

ಕನ್ನಡ ವ್ಯಾಕರಣ ಕಲಿಸಿಕೊಟ್ಟ ಶಿಕ್ಷಕರ ನೆನೆದ ಸಿದ್ದರಾಮಯ್ಯ
ತಮ್ಮ ಬಾಲ್ಯದಲ್ಲಿ ಪ್ರಭಾವ ಬೀರಿದ ಮತ್ತೊಬ್ಬ ಶಿಕ್ಷಕ ಈಶ್ವರಾಚಾರ್ಯ ಮೇಷ್ಟ್ರನ್ನು ನೆನೆದ ಸಿದ್ದರಾಮಯ್ಯ, ಈಶ್ವರಾಚಾರ್ಯ ಮೇಷ್ಟ್ರು ನನಗೆ ಕನ್ನಡ ವ್ಯಾಕರಣ ಹೇಳಿಕೊಟ್ಟರು, ಶಾಲೆ ಬಳಿಕ ಅವರ ಮನೆಗೆ ಪಾಠಕ್ಕೆ ಹೋಗುತ್ತಿದ್ದೆ, ಅವರು ಹೇಳಿಕೊಟ್ಟ ಪಾಠವನ್ನು ಯಥಾವತ್ತು ಹೇಳುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಧಿವೇಷನದಲ್ಲಿ ನಡೆದ ತಮಾಷೆ ಪ್ರಸಂಗ ನೆನಪಿಸಿಕೊಂಡ ಸಿದ್ದರಾಮಯ್ಯ
ಅಧಿವೇಶನದಲ್ಲಿ ನಡೆದ ತಮಾಷೆ ಪ್ರಸಂಗವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, 'ಸದನದಲ್ಲಿ, ಸಂಧಿ ಎಂದರೆ ಏನು ಎಂದು ಕೇಳಿದೆ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆದವರಿಗೂ ಸಹ ಅದು ಗೊತ್ತಿರಲಿಲ್ಲ, ಎಂಎಲ್ಸಿ ಪುಟ್ಟಸ್ವಾಮಿಯನ್ನು ಸಂಧಿ ಎಂದರೇನು ಎಂದು ಕೇಳಿದರೆ, ನಮ್ಮ ಮನೆಗೂ ಪಕ್ಕದ ಮನೆಗೂ ನಡುವೆ ಇರುವ ಜಾಗ ಎಂದು ಬಿಟ್ಟರು ಎಂದು ಹೇಳಿದರು. ಸಿದ್ದರಾಮಯ್ಯ ಮಾತಿಗೆ ಸಭೆ ನಗೆಗಡಲಲ್ಲಿ ತೇಲಿತು.

ನಾನೂ ಸ್ವಲ್ಪ ದಿನ ಶಿಕ್ಷಕನಾಗಿದ್ದೆ: ಸಿದ್ದರಾಮಯ್ಯ
ನಾನೂ ಸ್ವಲ್ಪ ದಿನ ಶಿಕ್ಷಕನಾಗಿದ್ದೆ ಎಂದು ನೆನಪಿಸಿಕೊಂಡ ಸಿದ್ದರಾಮಯ್ಯ, ಕಾನೂನು ಕಾಲೇಜಿನಲ್ಲಿ ನಾನೂ ಸ್ವಲ್ಪದಿನ ಪಾಠ ಮಾಡಿದ್ದೆ. ಅಲ್ಲಿ ಅರೆಕಾಲಿಕ ಶಿಕ್ಷಕನಾಗಿದ್ದೆ. ವಕೀಲಿ ವೃತ್ತಿಗಿಂತಲೂ ಶಿಕ್ಷಕ ವೃತ್ತಿಯೇ ಹೆಚ್ಚು ಖುಷಿ ಕೊಡುತ್ತಿತ್ತು, ನಾನೂ ನಿಮ್ಮ ವರ್ಗ ಸೇರಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಚಪ್ಪಲಿ ಸಹ ಹಾಕದೆ ಶಾಲೆಗೆ ಹೋಗುತ್ತಿದ್ದೆ: ಸಿದ್ದರಾಮಯ್ಯ
ಬಡವರ ಮಕ್ಕಳು ಶೂ ಹಾಕಿಕೊಳ್ಳಬೇಕು ಎಂಬ ಉದ್ದೇಶದಿಂದ ಶೂ ಭಾಗ್ಯ ಯೋಜನೆ ತಂದೆ. ನಾನು ಹತ್ತನೇ ತರಗತಿ ಮುಗಿಯುವವರೆಗೆ ಚಪ್ಪಲಿ ಇಲ್ಲದೆ ಶಾಲೆಗೆ ಹೋಗಿದ್ದೆ ಎಂದು ಬಾಲ್ಯದ ಕಷ್ಟದ ದಿನ ನೆನೆದ ಸಿದ್ದರಾಯ್ಯ, ತಾವು ಸಿಎಂ ಆಗಿದ್ದಾಗ ಶಾಲಾ ಮಕ್ಕಳಿಗೆ ಹಾಲು ನೀಡುವ ಯೋಜನೆ ತಂದದ್ದನ್ನೂ ನೆನಪಿಸಿಕೊಂಡರು.

'ಶಿಕ್ಷಕರ ವೇತನ ಹೆಚ್ಚಳವಾಗಲು ಆರನೇ ವೇತನ ಆಯೋಗ ತಂದೆ'
'ನಾನು ಸಿಎಂ ಆಗಿದ್ದಾಗ ಶಿಕ್ಷಕರ ವೇತನ ಹೆಚ್ಚಿಸಲು ಆರನೇ ವೇತನ ಯೋಜನೆ ಜಾರಿಗೆ ತಂದೆ, ನಮ್ಮಪ್ಪನ ಮನೆಯಿಂದ ತಂದ ದುಡ್ಡನ್ನೇನು ನಾನು ಕೊಡಲಿಲ್ಲ, ಅದು ನಿಮ್ಮದೇ ಹಣ ಎಂದ ಸಿದ್ದರಾಮಯ್ಯ, ಶಿಕ್ಷಕರಿಗೆ ಸಂಬಳ ಬಿಟ್ಟು ಬೇರೆ ಏನೂ ಇಲ್ಲ, ಆದರೆ ಅವರ ಸಂಬಳವನ್ನೂ ಕಿತ್ತುಕೊಳ್ಳುವವರು ಇದ್ದಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಶಿಕ್ಷಕರ ಮಹತ್ವದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ
ಶಿಕ್ಷಕರ ಮಹತ್ವದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಸಮಾಜದಲ್ಲಿ ರೈತರು, ಶಿಕ್ಷಕರು, ಸೈನಿಕರು ಮೂವರ ಪಾತ್ರ ಅತೀ ಮುಖ್ಯವಾಗುತ್ತದೆ. ಈ ಮೂರು ವರ್ಗದ ಜನರು ತಮ್ಮ ಸೇವೆ ಮೂಲಕ ಸಮಾಜಕ್ಕೆ ಬಹಳ ಮಹತ್ತರ ಕೊಡುಗೆ ಕೊಟ್ಟಿದ್ದಾರೆ. ಶಿಕ್ಷಕರು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಶಿಕ್ಷಕರನ್ನು ದೇವರ ಸ್ಥಾನದಲ್ಲಿಡ್ತಾರೆ. ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications