ನಿದ್ದೆ ಮಾಡೋರಿಗೆ ವೋಟ್ ಹಾಕಬೇಡಿ ಎಂದಿದ್ದೆ, ತಪ್ಪೇನು?: ಸಿದ್ದರಾಮಯ್ಯ
Recommended Video
ಬಾದಾಮಿ, ಜೂನ್ 28: 'ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ, ಕೆಲಸ ಮಾಡುವವರಿಗೆ ವೋಟ್ ಹಾಕಿ ಅಂದಿದ್ದೆ. ಅದರಲ್ಲಿ ಅಂತಹ ತಪ್ಪೇನಿದೆ? ನೀವೇಕೆ ನನ್ನ ಹೇಳಿಕೆಯನ್ನು ಕುಮಾರಸ್ವಾಮಿ ಅವರ ಹೇಳಿಕೆಯೊಂದಿಗೆ ಲಿಂಕ್ ಮಾಡಿ ತಿರುಚುತ್ತಿದ್ದೀರಿ?' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟೊಂದು ಯೋಜನೆಗಳನ್ನು ನೀಡಿರುವುದು, ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ನಾವು. ಆದರೆ, ಯಾವ ಕೆಲಸ ಮಾಡಿದ್ದಾರೆಂದು ಬಿಜೆಪಿಗೆ ವೋಟ್ ಹಾಕುತ್ತೀರಿ ಎಂದು ಗುರುವಾರ ಬಾದಾಮಿಯಲ್ಲಿ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಕೆಲಸ ಮಾಡುವವರಿಗೆ ವೋಟ್ ಹಾಕಿ, ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ ಎಂದಿದ್ದೆ. ಕೆಲಸ ಮಾಡುವವರಿಗೆ ಜನ ಮತ ಹಾಕಬೇಕೋ ಬೇಡವೋ? ವಾಟ್ ಈಸ್ ರಾಂಗ್ ಇನ್ ದಟ್? ಎಂದರು.
ನಾವು ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದೇವೆ. ಅನೇಕ ಯೋಜನೆ, ಅನುದಾನಗಳನ್ನು ನೀಡಿದ್ದೇವೆ. ಆದರೆ, ಅಭಿವೃದ್ಧಿ ಮಾಡಿದವರಿಗೆ ನೀವು ವೋಟ್ ಹಾಕೊಲ್ಲ. ಏನೂ ಮಾಡದ ಬಿಜೆಪಿಯವರಿಗೆ ವೋಟ್ ಹಾಕ್ತೀರಿ. ನೀವೇಕೆ ಹೀಗೆ ಮಾಡ್ತೀರಿ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಗುರುವಾರ ಹೇಳಿದ್ದರು.

ಮಧ್ಯಂತರ ಚುನಾವಣೆ ಸಭೆಯಲ್ಲ
ಲೋಕಸಭೆ ಸೋಲಿನ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ. ಮಧ್ಯಂತರ ಚುನಾವಣೆಯನ್ನು ಚರ್ಚಿಸುವ ಸಲುವಾಗಿ ಅಲ್ಲ. ಸೋಲಿನ ಬಗ್ಗೆ ಆತ್ಮಾವಲೋಕನಕ್ಕಾಗಿ ಸಭೆ ಮಾಡಿದ್ದೆವು. ಚುನಾವಣೆಯಲ್ಲಿ ಏತಕ್ಕೆ ಸೋತೆವು ಎಂಬ ಗ್ರೌಂಡ್ ರಿಯಾಲಿಟಿ ತಿಳಿಯಲು ಈ ಸಭೆ ನಡೆಸಲಾಗುತ್ತಿದೆ. ಅದಕ್ಕೂ ಮಧ್ಯಂತರ ಚುನಾವಣೆಗೂ ಸಂಬಂಧವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೆಲಸಗಳು ನಡೆಯುತ್ತಿರಬೇಕು. ಜತೆಗೆ ರಾಜಕಾರಣಿಗಳು ಚುನಾವಣೆಗೂ ತಯಾರಿ ನಡೆಸುತ್ತಿರಬೇಕು ಎಂದು ಹೇಳಿದರು.

ಕಾಂಗ್ರೆಸ್ ಮೂಲಕವೇ ಅಹಿಂದ ಸಂಘಟನೆ
ಅಹಿಂದ ಮಾಡಿದ್ದಕ್ಕೆ ಜೆಡಿಎಸ್ನಿಂದ ಹೊರಹಾಕಿದರು ಎಂದು ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ. ಅದು ಸತ್ಯ. ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಅವರು ಸತ್ಯ ಹೇಳಿದ್ದಾರೆ. ಈಗ ಸಮ್ಮಿಶ್ರ ಸರ್ಕಾರ ಇದೆ ಎಂದು ಸತ್ಯ ತಿರುಚಬೇಕಾ? ಆಗ ಪಕ್ಷದಿಂದ ಹೊರಹಾಕಿದ್ದರಿಂದ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಅಹಿಂದ ಎಂಬ ಪ್ರತ್ಯೇಕ ಸಂಘಟನೆಯಿಲ್ಲ. ಈಗ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಎಸ್ಎಲ್ಪಿ ಮುಖಂಡನಾಗಿದ್ದೇನೆ. ಈಗ ಕಾಂಗ್ರೆಸ್ ಮೂಲಕವೇ ಅಹಿಂದ ಸಂಘಟನೆ ಮಾಡುತ್ತೇನೆ ಎಂದರು.

ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ
ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟಿಗೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಚುನಾವಣೆಯಲ್ಲಿ ಗೆಲ್ಲಲು ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲ್ಲುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಅವರನ್ನು ಮಮತಾ ಬ್ಯಾನರ್ಜಿ ನೋಡಿಕೊಳ್ಳುತ್ತಾರೆ. ಸದ್ಯ ವಿಧಾನಸಭೆ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜ್ಯಲ್ಲಿ ಬಿಜೆಪಿಯ ಯಾವ ಅಪರೇಷನ್ ನಡೆಯುವುದಿಲ್ಲ. ಆಪರೇಷನ್ ಮಾಡೋರಿಗೇ ಆಪರೇಷನ್ ಆಗಬೇಕಷ್ಟೇ ಎಂದು ಲೇವಡಿ ಮಾಡಿದರು.

ಎಚ್ಡಿಕೆ ಭೇಟಿ ಅಪರೂಪ
ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ನನ್ನ ಜತೆ ಮಾತನಾಡಿಲ್ಲ. ಎಲ್ಲವನ್ನೂ ನನ್ನ ಜತೆ ಸಿಎಂ ಚರ್ಚಿಸುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ ಅಷ್ಟೇ. ಉಳಿದ ಸಮಯದಲ್ಲಿ ಭೇಟಿಯಾಗುವುದು ಅಪರೂಪ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ವಾರ ಕಾಲ ಅಮೆರಿಕಕ್ಕೆ ತೆರಳುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಶ್ರೀರಾಮುಲು ಯಾರು?
ತಮ್ಮ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಹೇಳಿಕೆಗೆ ಕಿಡಿಕಾರಿದ ಅವರು, ಹೀಗೆ ಹೇಳೋಕೆ ಶ್ರೀರಾಮುಲು ಯಾರು? ಜನ ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ. ನನ್ನ ವರ್ಚಸ್ಸು ಕಡಿಮೆ ಆಗಿದೆಯೋ ಇಲ್ಲವೋ ಎಂದು ಹೇಳಲು ಅವರು ಯಾರು? ಶ್ರೀರಾಮುಲು ಹೇಳಿದರೆ ಕಿಮ್ಮತ್ತು ಕೊಡಬೇಕಾ? ಎಂದರು.

ಶ್ರೀರಾಮುಲು ಹೇಳಿದ್ದೇನು?
ಸಿದ್ದರಾಮಯ್ಯ ಹಿಂದುಳಿದ ನಾಯಕರನ್ನು ತುಳಿಯುತ್ತಿದ್ದಾರೆ. ಅವರ ನಾಟಕ ಬಹಳ ದಿನ ನಡೆಯುವುದಿಲ್ಲ. ಅವರ ವರ್ಚಸ್ಸು ಕಡಿಮೆಯಾಗಿದೆ. ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿಯೂ ಅವರು ವರ್ಚಸ್ಸು ಕಳೆದುಕೊಂಡಿದ್ದಾರೆ. ಅವರ ಆಟ ಬಹು ದಿನ ನಡೆಯುವುದಿಲ್ಲ ಎಂದು ಶ್ರೀರಾಮುಲು ವಿಜಯಪುರದಲ್ಲಿ ಗುರುವಾರ ಟೀಕಿಸಿದ್ದರು.












Click it and Unblock the Notifications