ನಮ್ಮ ಮನೆ ನಾಯಿ-ಬೆಕ್ಕುಗಳ ಕಾಲು ಹಿಡಿದಿದ್ದಾನೆ ಯತ್ನಾಳ್: ಸಂಗಮೇಶ ನಿರಾಣಿ
ಬಾಗಲಕೋಟೆ, ಜನವರಿ 16: ಶಾಸಕ ಮುರಗೇಶ ನಿರಾಣಿ ಬಗ್ಗೆ ಲಘುವಾಗಿ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುರಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಏಕವನಚದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮುರಗೇಶ ನಿರಾಣಿ ಅವರಿಂದಲೇ ಹರಿಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಅವರು ಯಡಿಯೂರಪ್ಪ ಗೆ ಎಲ್ಲರೆದುರು 'ರಾಜಕೀಯ ಎಚ್ಚರಿಕೆ' ನೀಡಿದರು ಎಂಬರ್ಥದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮುರಗೇಶ ನಿರಾಣಿ ಗೆ ರಾಜಕೀಯ ಪುನರುಜ್ಜೀವನ ಕೊಟ್ಟಿದ್ದು ತಾವೇ ಎಂದು ಹೇಳಿದ್ದರು.
ಈ ಹೇಳಿಕೆ ಬಗ್ಗೆ ಸಿಟ್ಟಾಗಿರುವ ಮುರಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ, 'ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲಾ ಪಕ್ಷ ಸುತ್ತಿಕೊಂಡು ಕೊನೆಗೆ ಬಿಜೆಪಿ ಪಾದಕ್ಕೆ ಬಂದವರು, ಆತನಿಗಿಂತಲೂ ಮೊದಲೇ ನಿರಾಣಿ ರಾಜಕೀಯದಲ್ಲಿದ್ದಾರೆ' ಎಂದಿದ್ದಾರೆ.
'ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಎಲ್ಲರಿಗೂ ಸಾಕ್ಷಾಂಗ ನಮಸ್ಕಾರ ಯತ್ನಾಳ್ ಹಾಕಿದ್ದಾನೆ. ನಿರಾಣಿ ಮನೆಯ ನಾಯಿ-ಬೆಕ್ಕುಗಳನ್ನೂ ಬಿಟ್ಟಿಲ್ಲ ಅವುಗಳ ಕಾಲನ್ನೂ ಆತ ಹಿಡಿದಿದ್ದಾನೆ. ಅವನಿಗೆ ರಾಜಕೀಯ ಪುನರುಜ್ಜೀವನ ಕೊಟ್ಟಿದ್ದು ನಿರಾಣಿ ಎಂಬುದು ರಾಜ್ಯಕ್ಕೇ ಗೊತ್ತಿದೆ' ಎಂದು ಸಂಗಮೇಶ ನಿರಾಣಿ ಯತ್ನಾಳ್ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದಾರೆ.
'ಇದೇ ಯತ್ನಾಳ್ ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದರು. ದೇವೇಗೌಡರಿಗೆ ಜೀ ಹುಜೂರ್ ಎನ್ನುತ್ತಿದ್ದರು. ವಿಜಯಾನಂದ ಸಂಕೇಶ್ವರ್ ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದ್ದು ಇದೇ ಯತ್ನಾಳ್, ಈತನಿಗೆ ನೈತಿಕತೆ, ಪಕ್ಷ ಬದ್ಧತೆ ಇಲ್ಲ' ಎಂದು ಯತ್ನಾಳ್ ಆಕ್ರೋಶ ಹೊರಹಾಕಿದರು.
'ಮುರಗೇಶ ನಿರಾಣಿ ಅವರು ಕೈಗಾರಿಕೋದ್ಯಮಿ ಆಗಿದ್ದವರು, ಸ್ವಂತ ಪರಿಶ್ರಮದಿಂದ ರಾಜಕೀಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಅವರ ಬಗ್ಗೆ ಅವರ ಸಂಸ್ಥೆ ಬಗ್ಗೆ ಮಾತನಾಡುವ ಮುನ್ನಾ ಯತ್ನಾಳ್ ನಾಲಿಗೆ ಬಿಗಿ ಹಿಡಿಯಬೇಕು. ಆತ ರೌಡಿ ಭಾಷೆಯಲ್ಲಿ ಮಾತನಾಡಿದರೆ, ನಾವೂ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.
ಮೊನ್ನೆ ದಾವಣಗೆರೆಯಲ್ಲಿ ನಡೆದ ಜಾತ್ರೆಯಲ್ಲಿ ಮುರಗೇಶ ನಿರಾಣಿ ಪರವಾಗಿ ವೇದಿಕೆ ಮೇಲೆಯೇ ವಚನಾನಂದ ಸ್ವಾಮೀಜಿ ಅವರು ಸಚಿವ ಸ್ಥಾನ ಕೇಳಿದರು. 'ಪಂಚಮಸಾಲಿ ಸಮುದಾಯಕ್ಕೆ ಮೂರು ಸ್ಥಾನ ಕೊಡಲಿಲ್ಲವೆಂದರೆ ನಾವು ರಾಜಕೀಯವಾಗಿ ನಿಮ್ಮ ಕೈಬಿಡುತ್ತೇವೆ' ಎಂದು ಬೆದರಿಕೆ ಹಾಕಿದರು. ಈ ಬೆದರಿಕೆಯ ಹಿಂದೆ ಮುರಗೇಶ ನಿರಾಣಿ ಪಾತ್ರ ಇದೆ ಎಂದು ಹೇಳಲಾಗುತ್ತಿದೆ.