ಕೊರೊನಾ ರೋಗಿಯ ಅಂತ್ಯ ಸಂಸ್ಕಾರ ಮಾಡಿದರೆ 10 ಸಾವಿರ ಇನ್ಸೆಂಟಿವ್!
ಬಾಗಲಕೋಟೆ, ಮೇ 05 : ಕೊರೊನಾ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ನಡೆಸಲು ಮಾರ್ಗಸೂಚಿಗಳಿವೆ. ಸೋಂಕು ತಮಗೂ ಹರಡುವ ಭಯದಿಂದ ಅಂತ್ಯ ಸಂಸ್ಕಾರ ನಡೆಸಲು ಹಲವರು ಮುಂದೆ ಬರುವುದಿಲ್ಲ. ಕುಟುಂಬದವರು ಶವ ಪಡೆಯಲು ನಿರಾಕರಿಸಿದ ಘಟನೆ ನಮ್ಮ ಮುಂದಿದೆ.
Recommended Video
ಈ ಸಮಸ್ಯೆಯನ್ನು ಪರಿಹರಿಸಲು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಮುಂದಾಗಿದೆ. ಕೊರೊನಾದಿಂದ ಮೃತಪಟ್ಟ ರೋಗಿಯ ಅಂತ್ಯ ಸಂಸ್ಕಾರ ನಡೆಸಿದರೆ ಅವರಿಗೆ 10 ಸಾವಿರ ರೂ. ಇನ್ಸೆಂಟಿವ್ ನೀಡಲಾಗುತ್ತದೆ. ಇದರ ಜೊತೆಗೆ ಅಂತ್ಯ ಸಂಸ್ಕಾರದ ಖರ್ಚು ಎಂದು 5 ಸಾವಿರ ರೂ. ಸಿಗಲಿದೆ.
ಮಾರ್ಚ್ 31ರಂದು ಕೋವಿಡ್ -19 ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾ ಆಸ್ಪತ್ರೆ ಪರದಾಟ ನಡೆಸಿತ್ತು. ಆದ್ದರಿಂದ, ಅಂತ್ಯ ಸಂಸ್ಕಾರ ನಡೆಸಿದರೆ ಇನ್ಸೆಂಟಿವ್ ನೀಡುವ ತೀರ್ಮಾನ ಮಾಡಲಾಗಿದೆ.

ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಾಗ ಶವವನ್ನು ಪಡೆಯಲು ಕುಟುಂಬ ಸದಸ್ಯರು ನಿರಾಕರಿಸಿದರು. ಆಗ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳೇ ಸೇರಿ ಅಂತ್ಯ ಸಂಸ್ಕಾರ ಮಾಡಬೇಕಾಯಿತು. ಇಳಕಲ್ ಮೂಲದ 66 ವರ್ಷದ ವ್ಯಕ್ತಿ ಕಳೆದ ವಾರ ಮೃತಪಟ್ಟಾಗಲೂ ಇದೇ ಪರಿಸ್ಥಿತಿ ಎದುರಾಗಿತ್ತು.
ಆದರೆ, ಅಂತ್ಯ ಸಂಸ್ಕಾರವಾದ ಬಳಿಕ 66 ವರ್ಷದ ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆ ವರದಿ ಬಂದಿತ್ತು. ಕೊರೊನಾ ಸೋಂಕು ಇಲ್ಲ ಎಂಬುದು ಖಚಿತವಾಗಿತ್ತು. ಈ ಬೆಳವಣಿಗೆಗಳ ಬಳಿಕ ಅಂತ್ಯ ಸಂಸ್ಕಾರ ನಡೆಸುವವರಿಗೆ 10 ಸಾವಿರ ರೂ. ನೀಡುವ ಘೋಷಣೆಯನ್ನು ಮಾಡಲಾಯಿತು.
ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ್ ಬಿರಾದಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಅಂತ್ಯ ಸಂಸ್ಕಾರ ಮಾಡುವಾಗ ಆದ ತೊಂದರೆ ಗಮನದಲ್ಲಿಟ್ಟುಕೊಂಡು ಇನ್ಸಿಂಟಿವ್ ಘೋಷಣೆ ಮಾಡಲಾಯಿತು. ಆರೋಗ್ಯ ರಕ್ಷಾ ಸಮಿತಿ ಅನುದಾನದ ಮೂಲಕ ಇನ್ಸೆಂಟಿವ್ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.
ಅಂತ್ಯ ಸಂಸ್ಕಾರ ನಡೆಸುವ ವ್ಯಕ್ತಿ ಶವವನ್ನು ಸಾಗಿಸಲು ಸ್ವಂತ ವಾಹನ ತರಬೇಕಿದೆ. ಆಸ್ಪತ್ರೆ ವತಿಯಿಂದ ಅವರಿಗೆ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಸೇರಿದಂತೆ ಇತರ ಸುರಕ್ಷಾ ಸಾಧನಗಳನ್ನು ನೀಡಲಾಗುತ್ತದೆ. ಆಸ್ಪತ್ರೆ ಇನ್ಸೆಂಟಿವ್ ಘೋಷಣೆ ಮಾಡಿದ ಬಳಿಕ ಖಾಸಗಿ ಆಂಬ್ಯುಲೆನ್ಸ್ ಮಾಲೀಕರೊಬ್ಬರು ಅಂತ್ಯ ಸಂಸ್ಕಾರ ನಡೆಸಲು ಒಪ್ಪಿಕೊಂಡಿದ್ದಾರೆ.












Click it and Unblock the Notifications