ಬಾಗಲಕೋಟೆ: ನಾಳೆ ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ?
ಬಾಗಲಕೋಟೆ, ಮೇ 14 : ದೇಶದಲ್ಲಿ ಎಲ್ಲರ ಚಿತ್ತ ಈಗ ಕರ್ನಾಟಕ ರಾಜ್ಯ ವಿಧಾನಸಭೆಯ ಚುನಾವಣೆಯ ಫಲಿತಾಂಶದ ಮೇಲೆ ನೆಟ್ಟಿದೆ. ಮಂಗಳವಾರದ ಮತ ಎಣಿಕೆಯ ಫಲಿತಾಂಶ ಯಾರಿಗೆ ಶುಭ? ಯಾರ ಪಾಲಿಗೆ ಅಶುಭ ಆಗಲಿದೆ ಎಂಬುದು ನಾಳೆ ಗೊತ್ತಾಗಲಿದೆ.
ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕ್ಷಣ ಗಣನೆ ಆರಂಭವಾಗಿದ್ದು, ಈಗ ಸ್ಪರ್ಧೆ ಮಾಡಿರುವ ಎಲ್ಲ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಾದಾಮಿ ಮತಕ್ಷೇತ್ರದಲ್ಲಿ ಘಟಾನುಗಟಿ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಸ್ಪರ್ಧೆ ಮಾಡಿದ್ದು, ಇವರಿಗೆ ಟಾಂಗ್ ಕೊಡಲು ಜೆಡಿಎಸ್ ನ ಹನುಮಂತ ಮಾವಿನಮರದ ಸ್ಪರ್ಧೆ ಕೂಡ ವಿಶೇಷತೆ ಪಡೆದುಕೊಳ್ಳಲಿದೆ.
ಮೊದಲ ಬಾರಿಗೆ ಮತ ಎಣಿಕೆಗೆ ಸಿದ್ಧಗೊಂಡ ಬಾಗಲಕೋಟೆ ತೋಟಗಾರಿಕೆ ವಿವಿ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಮಾವಿನಮರದ ಯಾರ ಗೆಲುವಿಗೆ ಅಡ್ಡಗಾಲು ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದ್ದು, ಬಾದಾಮಿ ಬನಶಂಕರಿ ದೇವಿ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲ ತೀವ್ರವಾಗಿದೆ.
ಗೆಲುವು ಸುಲಭವಿಲ್ಲ
ಇನ್ನು ಬಾಗಲಕೋಟೆ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಳೆದ ಬಾರಿ 2,900 ಮತಗಳ ಅಂತರದಿಂದ ಗೆದ್ದಿದ್ದ ಮೇಟಿಗೆ ಈ ಬಾರಿ ಕೆಲವು ನಾಯಕರು ಪಕ್ಷ ಬಿಟ್ಟು ಹೋಗಿದ್ದು ಕಾಂಗ್ರೆಸ್ ಗೆಲುವು ಅಷ್ಟು ಸುಲಭವಿಲ್ಲ.
ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿಶಾಸಕ ಕಾಶಪ್ಪನವರ, ಬಿಜೆಪಿ ದೊಡ್ಡನ ಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿ ನವಲಿಹಿರೇಮಠ ನಡುವೆ ಪೈಪೋಟಿ ಏರ್ಪಟ್ಟಿದೆ.
ಇಬ್ಬರ ನಡುವೆ ಫೈಟ್
ಬೀಳಗಿ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಉದ್ಯಮಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಹಾಗೂ ಹಾಲಿ ಶಾಸಕ ಜೆ.ಟಿ.ಪಾಟೀಲ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದು, ಇಲ್ಲಿಯೂ ದೊಡ್ಡ ಫೈಟ್ ಇದೆ ಎಂದರೆ ತಪ್ಪಾಗಲಾರದು.
ಕೊಣ್ಣೂರ ಟಕ್ಕರ್ ಕೊಡ್ತಾರ?
ತೇರದಾಳ ಮತಕ್ಷೇತ್ರದಲ್ಲಿ ಇನ್ನೊಮ್ಮೆ ಗೆಲ್ಲುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ನ ಉಮಾಶ್ರೀ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಸಿದ್ದು ಸವದಿಯನ್ನು ಸೋಲಿಸಲು ಅಷ್ಟು ಸುಲಭವಿಲ್ಲ.ಇನ್ನು ಇಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿರುವ ಸ್ಥಳೀಯ ಅಭ್ಯರ್ಥಿ ಬಸವರಾಜ ಕೊಣ್ಣೂರ ಇಬ್ಬರಿಗೂ ಟಕ್ಕರ್ ನೀಡುವುದು ಗ್ಯಾರಂಟಿ.
ಪಕ್ಷೇತರ ಅಭ್ಯರ್ಥಿ ಅಡ್ಡಗಾಲು!
ಜಮಖಂಡಿಯಲ್ಲಿ ಕಾಂಗ್ರೆಸ್ ನ ಸಿದ್ದು ನ್ಯಾಮಗೌಡ, ಬಿಜೆಪಿ ಶ್ರೀಕಾಂತ ಕುಲಕರ್ಣಿ ನಡುವೆ ತೀವ್ರ ಪೈಪೋಟಿ ಇದ್ದರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಉದ್ಯಮಿ ಸಂಗಮೇಶ ನಿರಾಣಿ, ಕಾಂಗ್ರೆಸ್ ಪಕ್ಷ ಬಿಟ್ಟು ಪಕ್ಷೇತರ ಅಭ್ಯರ್ಥಿಯಾಗಿರುವ ದಳವಾಯಿ ಸಹ ಯಾರಿಗೆ ಅಡ್ಡಗಾಲಗುತ್ತಾರೆ ಎಂಬುದು ನಾಳೆಯ ಫಲಿತಾಂಶದಿಂದ ಗೊತ್ತಾಗಲಿದೆ.