ಬೆಕ್ಕಿನ ಸಮಯಪ್ರಜ್ಞೆಯಿಂದ ಬದುಕುಳಿದ ತಂದೆ-ಮಗ: ಈ ಮೂಕಪ್ರಾಣಿಗೆ ಸಲಾಂ ಎಂದ ಜನ
ಬಾಗಲಕೋಟೆ, ಜೂನ್ 8: ಸಂಕಷ್ಟದ ಸಂದರ್ಭಗಳಲ್ಲಿ ಮೂಕಪ್ರಾಣಿಗಳು ಮನುಷ್ಯರ ಜೀವ ಉಳಿಸಿದ ಬಗ್ಗೆ ನಾವು ಕೇಳಿರುತ್ತೇವೆ. ಅಂತಹದ್ದೇ ಒಂದು ಅಚ್ಚರಿಯ ಘಟನೆ ಬಾಗಲಕೋಟೆಯ ವಲ್ಲಭಬಾಯಿ ವೃತ್ತದ ಸಮೀಪ ನಡೆದಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾದ ಪರಿಣಾಮ ಹಳೆಯ ಮನೆಯೊಂದರ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದಿತ್ತು. ಆದರೆ ಮನೆಯಲ್ಲಿದ್ದ ತಂದೆ-ಮಗ ಸಾಕು ಬೆಕ್ಕಿನ ಸಮಯಪ್ರಜ್ಞೆ ಮತ್ತು ಅದೃಷ್ಟದ ಬಲದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ನಿವಾಸಿಯಾಗಿರುವ ಶಬ್ಬೀರ್ ಬಾಗವಾನ್ ಅವರು ವೃತ್ತಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರಿಯಾಗಿದ್ದು, ತಮ್ಮ ಮಗ ಅರ್ಬಾಜ್ ಬಾಗವಾನ್ ಜೊತೆಗೆ ಹಳೆಯ ಮಣ್ಣಿನ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಹಲವೆಡೆ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಇವರ ಮನೆಯ ಗೋಡೆಗಳು ಮತ್ತು ಮೇಲ್ಚಾವಣಿ ಸಂಪೂರ್ಣವಾಗಿ ತೇವಗೊಂಡು ಕುಸಿಯುವ ಹಂತದಲ್ಲಿದ್ದವು. ಘಟನೆ ನಡೆದ ದಿನ ತಂದೆ ಮತ್ತು ಮಗ ಇಬ್ಬರೂ ಮನೆಯ ಒಳಗಡೆಯೇ ಇದ್ದರು.

ಬೆಕ್ಕಿನ ಸಮಯಪ್ರಜ್ಞೆಯಿಂದ ಉಳಿದ ತಂದೆ-ಮಗ
ಭಾರೀ ಮಳೆಯಿಂದಾಗಿ ದಿಢೀರ್ ಈ ಮನೆಯ ಮೇಲ್ಚಾವಣಿಯ ಮೇಲಿನಿಂದ ಸಣ್ಣದೊಂದು ಕಟ್ಟಿಗೆಯ ತುಂಡು ಕೆಳಗೆ ಬಿದ್ದಿದೆ. ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ಇಂತಹ ಅಪಾಯಗಳ ಮುನ್ಸೂಚನೆ ಬೇಗನೆ ಸಿಗುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ, ಮನೆಯಲ್ಲಿದ್ದ ಅವರ ಸಾಕು ಬೆಕ್ಕು ಈ ಸಣ್ಣ ಶಬ್ದಕ್ಕೆ ತಕ್ಷಣವೇ ಹೆದರಿ ಹೊರಗೆ ಓಡಿ ಬಂದಿದೆ. ಅದೇ ಸಮಯದಲ್ಲಿ ಬೆಕ್ಕಿಗೆ ಹಸಿವು ಕೂಡ ಆಗಿದ್ದರಿಂದ, ಅದು ಜೋರಾಗಿ ಕೂಗತೊಡಗಿತ್ತು.
ಬಳಿಕ ಬೆಕ್ಕು ಹಸಿದಿರುವುದನ್ನು ಗಮನಿಸಿದ ಶಬ್ಬೀರ್ ಅದಕ್ಕೆ ಆಹಾರ ನೀಡುವ ಸಲುವಾಗಿ ಅದನ್ನು ಹಿಡಿಯಲು ತಕ್ಷಣವೇ ಮನೆಯಿಂದ ಹೊರಗೆ ಬಂದಿದ್ದಾರೆ. ತಂದೆಯ ಹಿಂದೆಯೇ ಮಗ ಅರ್ಬಾಜ್ ಕೂಡ ಹೊರ ನಡೆದಿದ್ದಾನೆ. ಅವರಿಬ್ಬರೂ ಮನೆಯ ಹೊಸ್ತಿಲು ದಾಟಿ ಹೊರಗೆ ಕಾಲಿಡುತ್ತಿದ್ದಂತೆ ಇಡೀ ಮನೆಯ ಮೇಲ್ಚಾವಣಿ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದೆ. ಕಣ್ಣೆದುರೇ ನಡೆದ ಈ ಘಟನೆ ಕಂಡು ತಂದೆ-ಮಗ ಇಬ್ಬರೂ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ.
ಪ್ರಾಣ ಉಳಿಸಿದ ಬೆಕ್ಕಿಗೆ ಮೆಚ್ಚುಗೆಗಳ ಸುರಿಮಳೆ
ಒಂದು ವೇಳೆ ಆ ಸಾಕು ಬೆಕ್ಕು ಮಣ್ಣು ಬೀಳುತ್ತಿದ್ದಂತೆ ಹೊರಗೆ ಓಡದೇ ಇದ್ದಿದ್ದರೆ ಅಥವಾ ಅದನ್ನು ಹಿಡಿಯಲು ಅವರಿಬ್ಬರೂ ಮನೆಯಿಂದ ಹೊರಬರದೇ ಇದ್ದಿದ್ದರೆ ಇಬ್ಬರೂ ಅವಶೇಷಗಳ ಅಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಇನ್ನು ತಮಗೆ ಪುನರ್ಜನ್ಮ ನೀಡಿದ ಸಾಕು ಬೆಕ್ಕನ್ನು ಶಬ್ಬೀರ್ ಮತ್ತು ಅರ್ಬಾಜ್ ಅಪ್ಪಿ ಮುದ್ದಾಡಿದ್ದಾರೆ. ಸ್ಥಳೀಯರು ಸೇರಿದಂತೆ ಇಡೀ ರಾಜ್ಯದ ಜನತೆ ಸಹ ಬೆಕ್ಕಿನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications