ಬಾಗಲಕೋಟೆಯಲ್ಲಿ ಮನೆ ಕುಸಿತದಿಂದ ವೃದ್ದೆ ಸಾವು, 5 ಲಕ್ಷ ಪರಿಹಾರ ವಿತರಣೆ
ಬಾಗಲಕೋಟೆ, ಅಕ್ಟೋಬರ್, 13; ಬಾಗಲಕೋಟೆಯಲ್ಲಿ ಎಡೆಬಿಡದೆ ಮಳೆ ಅಬ್ಬರಿಸಿದೆ. ನಿರಂತರ ಸುರಿದ ಮಳೆಯಿಂದಾಗಿ ಗುರುವಾರ ಇಂದು ಬೆಳಗಿನ ಜಾವ ನಗರದ ಕಿಲ್ಲಾ ಓಣಿ ರಾಘವೇಂದ್ರ ಮಠದ ಹತ್ತಿರವಿರುವ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಸುಧಾಭಾಯಿ ಪ್ರಹ್ಲಾದರಾವ್ ಕಾವೇರಿ (81) ಎಂಬ ಮಹಿಳೆ ಮೃತಪಟ್ಟಿದ್ದು, ಮೃತೆ ವೃದ್ಧೆ ಕುಟುಂಬಕ್ಕೆ ಒಂದು ಗಂಟೆಯಲ್ಲಿ ಪರಿಹಾರ ವಿತರಿಸುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಸೂಚಿಸಿದ್ದರು.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮೃತಪಟ್ಟ ಕುಟುಂಬಕ್ಕೆ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ 5 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ವಿತರಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಮೂಲಕ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ವೃದ್ದೆಯ ಮೃತದೇಹವನ್ನು ಹೊರತೆಗೆದಿದ್ದಾರೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಈ ಅನಾಹುತ ಸಂಭವಿಸಿದ್ದು, ಅಲ್ಲಿನ ಅಕ್ಕಪಕ್ಕದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಮುಂದುವರೆದ ಅನಾಹುತಗಳು
ಬಾಗಲಕೋಟೆ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದ ಕಾರಣ ಅನಾಹುತಗಳು ಹೆಚ್ಚಾಗುತ್ತಲೇ ಇವೆ. ಮಂಗಳಗುಡ್ಡ ಗ್ರಾಮದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಗುಡ್ಡಗಳಿಂದ ಹರಿದುಬಂದ ಮಳೆ ನೀರು ಗ್ರಾಮಕ್ಕೆ ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿದೆ. 40ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಯಾವುದೇ ಪರ್ಯಾಯ ಮಾರ್ಗವಿಲ್ಲದೆ ಮನೆಯಲ್ಲಿನ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಸುರಕ್ಷಿತ ಸ್ಥಳಕ್ಕೆ ಜನರು ತೆರಳಲು ಮುಂದಾಗಿದ್ದಾರೆ. ಗ್ರಾಮದ ದೇವಸ್ಥಾನ, ಶಾಲೆಗಳಲ್ಲಿ ತಮ್ಮ ವಸ್ತುಗಳನ್ನು ಇಟ್ಟು ಸುರಕ್ಷಿತ ಸ್ಥಳಗಳಿಗೆ ಜನರು ಹೊರಟಿದ್ದಾರೆ.

ಹುನಗುಂದ, ಇಳಕಲ್ನಲ್ಲೂ ಮಳೆ ಆರ್ಭಟ
ಇನ್ನು ಹುನಗುಂದ, ಇಳಕಲ್ ತಾಲೂಕುಗಳಲ್ಲೂ ಮಳೆ ಮುಂದುವೆದಿದ್ದು, ಅಲ್ಲಿನ ಜನಜೀವನ ಹೇಳತೀರದಾಗಿದೆ. ಇಳಕಲ್ ತಾಲೂಕಿನ ಹೆರೂರ ಬಳಿ ಹಳ್ಳದ ಕಿರುಸೇತುವೆಯ ಮೇಲೆ ಮಳೆ ನೀರು ಚರಂಡಿಯಂತೆ ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗೂ ಇದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಹಳ್ಳದ ನೀರಿನಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಬಾದಾಮಿಯಲ್ಲೂ ಕೂಡ ನಿನ್ನೆ ಸಂಜೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಹಾಗೂ ನಗರದ ಸವಿತಾ ಪೆಟ್ರೋಲ್ ಬಂಕ್ ಬಳಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವೊಂದನ್ನು ಅಲೆಮಾರಿ ಕುಂಚಿ ಕೊರವರ ಯುವಜನರು ರಕ್ಷಣೆ ಮಾಡಿದ್ದಾರೆ.












Click it and Unblock the Notifications