ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಅಸಮಾಧಾನ, ಬೆಳಗಾವಿಯಲ್ಲಿ ಮತ್ತೆ ಬೆಂಕಿ?
ಬಾಗಲಕೋಟೆ, ಅಕ್ಟೋಬರ್ 22: ಕೆಲ ದಿನಗಳ ಹಿಂದಷ್ಟೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಬೆಳಗಾವಿ ರಾಜಕೀಯ ಬೆಂಕಿ ಇನ್ನೂ ಆರಿದಂತೆ ಕಾಣುತ್ತಿಲ್ಲ. ಎಲ್ಲ ಸರಿಹೋಯಿತು ಎನ್ನುವಷ್ಟರಲ್ಲಿ ನಾಯಕರ ನಡುವೆ ಮತ್ತೆ ಅಸಮಾಧಾನದ ಮಾತುಗಳು ಹರಿದಾಡುತ್ತಿವೆ.
ಅನವಶ್ಯಕವಾಗಿ ತಮ್ಮ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಎಚ್ಚರಿಕೆಯನ್ನೂ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, ಅವರು ಈ ಮುಂಚೆಯೇ ಏಕೆ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಲಿಲ್ಲ, ಅವರ ಬೆಂಬಲಿಗರಾದ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಪ್ರತ್ಯೇಕ ಧರ್ಮದ ಪರ ಹೇಳಿಕೆ ಕೊಟ್ಟಿದ್ದರು ಅವರನ್ನಾದರೂ ಏಕೆ ತಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ರಮೇಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ
ಅನವಶ್ಯಕವಾಗಿ ತಮ್ಮ ಹೆಸರನ್ನು ಮಧ್ಯೆ ತೂರಿಸಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ-ಪದೇ ಅವರ ಹೆಸರನ್ನು ಡಿಕೆ ಶಿವಕುಮಾರ್ ಅವರೊಂದಿಗೆ ತಳುಕು ಹಾಕಿ, ಡಿ.ಕೆ.ಶಿವಕುಮಾರ್ ಬೆಂಬಲಿಗಳು ಎಂದು ಕರೆಯುವ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

ನನ್ನನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾನು ಮಾತ್ರವೇ ಅವರ ಬೆಂಬಲಿಗಳಲ್ಲ ಸಾಕಷ್ಟು ಮಂದಿ ಬೆಂಬಲಿಗರು ಅವರಿಗಿದ್ದಾರೆ ಆದರೆ ನನ್ನ ಉಲ್ಲೇಖ ಆದಾಗ ಮಾತ್ರ ಡಿ.ಕೆ.ಶಿವಕುಮಾರ್ ಬೆಂಬಲಿಗರು ಎಂಬ ವಿಶೇಷಣ ಬಳಸಲಾಗುತ್ತದೆ, ರಮೇಶ್ ಅವರು ಯಾವ ರಾಜಕೀಯ ಉದ್ದೇಶ ಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ನನ್ನನ್ನು ನಿಂದಿಸಿದ್ದರು
ರಮೇಶ್ ಜಾರಕಿಹೊಳಿ ಅವರು ಒಳ್ಳೆಯ ರಾಜ್ಯ ಮಟ್ಟದ ನಾಯಕರು ಅವರಿಗೆ ಒಳ್ಳೆಯದಾಗಲಿ ಎಂದ ಅವರು, ರಮೇಶ್ ಜಾರಕಿಹೊಳಿ ಅವರು ನನ್ನನ್ನು ಸ್ಲಂನಿಂದ ಬಂದವಳು, ಕಾಲ ಕಸ, ಶೋ ಪೀಸ್ ಎಂದೆಲ್ಲಾ ಏನೇನೋ ಆರೋಪ ಮಾಡಿದ್ದರು ಆದರೆ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೂ ಅವರು ಮಾತನಾಡುತ್ತಲೇ ಇದ್ದಾರೆ ಅದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಕುತ್ತು ತಂದಿದ್ದ ಬೆಳಗಾವಿ ರಾಜಕೀಯ
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಪಟ್ಟಂತೆ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಭಾರಿ ಮುನಿಸು ಎದ್ದಿತ್ತು. ಆ ಮುನಿಸು ರಾಜ್ಯದಲ್ಲಿ ಸರ್ಕಾರವೇ ಅಲುಗಾಡುವಂತೆ ಮಾಡಿತ್ತು. ಇವರಿಬ್ಬರ ನಡುವಿನ ಜಗಳ ಹೈಕಮಾಂಡ್ ವರೆಗೆ ಹೋಗಿ ರಾಜಿ ಸಂಧಾನ ಮಾಡಲಾಗಿತ್ತು. ಆದರೂ ಸಹ ಇಬ್ಬರ ನಡುವಿನ ಮುನಿಸು ಪೂರ್ತಿಯಾಗಿ ಮುಗಿದಂತೆ ಕಾಣುತ್ತಿಲ್ಲ.

ಡಿಕೆಶಿ ವಿರುದ್ಧ ತೊಡೆತಟ್ಟಿರುವ ಜಾರಕಿಹೊಳಿ ಸಹೋದರರು
ಬೆಳಗಾವಿ ಉಸ್ತುವಾರಿ ಸಚಿವರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಾಡ್ ಫಾದರ್ ಆಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಫುಲ್ ಗರಂ ಆಗಿದ್ದಾರೆ. ಬೆಳಗಾವಿ ರಾಜಕೀಯಕ್ಕೆ ಡಿ.ಕೆ.ಶಿವಕುಮಾರ್ ತಲೆ ಹಾಕಬಾರದು ಎಂದು ಜಾರಕಿಹೊಳಿ ಸಹೋದರರು ಕಟ್ಟೆಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇದೀಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಡಿ.ಕೆ.ಶಿ ನೀಡಿರುವ ಹೇಳಿಕೆಯನ್ನು ಮುಂದು ಮಾಡಿಕೊಂಡು ಅವರನ್ನು ಕಠುವಾಗಿ ಟೀಕಿಸುತ್ತಿದ್ದಾರೆ.












Click it and Unblock the Notifications