ಸಿದ್ದರಾಮಯ್ಯ v/s ಶ್ರೀರಾಮುಲು ಕದನ : ಲಾಭ, ನಷ್ಟದ ಲೆಕ್ಕಾಚಾರ!
ಬಾಗಲಕೋಟೆ, ಏಪ್ರಿಲ್ 25 : ರಾಜ್ಯದಲ್ಲಿ ಚಾಮುಂಡೇಶ್ವರಿ ಬಳಿಕ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಬಾದಾಮಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಳ್ಳಾರಿ ಬಿಜೆಪಿ ಸಂಸದ ಬಿ.ಶ್ರೀರಾಮುಲು ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ನಾಮಪತ್ರವನ್ನು ಸಲ್ಲಿಸಿದ್ದಾರೆ. ಉಭಯ ನಾಯಕರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ.
ಯುದ್ಧಕ್ಕೆ ಮೊದಲೇ ಸೋಲೊಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಬಿಜೆಪಿ
ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ, ಬಿ.ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಮತ್ತು ಬಾದಾಮಿಯಿಂದ 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ : ಮೋದಿ ಜೊತೆ ಸಿದ್ದು ಹೋಲಿಕೆ ಸರಿಯೆ?
ಬಾದಾಮಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸಹಾಯಕವಾಗುವ ಅಂಶಗಳಿವೆ. ಹಾಗೆಯೇ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ಅಂಶಗಳು ಇವೆ. ಉಭಯ ನಾಯಕರ ಹೋರಾಟದಲ್ಲಿ ಯಾರಿಗೆ ಗೆಲುವು ಎಂಬುದನ್ನು ತಿಳಿಯಲು ಮೇ 15ರ ತನಕ ಕಾಯುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಪಿಯ ಪ್ಲಸ್ ಮತ್ತು ಮೈನಸ್ ಪಾಯಿಂಟ್ಗಳು ಇಲ್ಲಿವೆ...
ಸಿದ್ದರಾಮಯ್ಯ, ಶ್ರೀರಾಮುಲು ಹೇಳಿದ್ದೇನು?
ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಶ್ರೀರಾಮುಲು ಅವರು, 'ಬಾದಾಮಿ ಮಹಾಭಾರತದಲ್ಲಿ ಗೆಲ್ಲೋದು ನಾವೇ' ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದ ಬಳಿಕ ಬಾದಾಮಿಯಲ್ಲಿ ರೋಡ್ ಶೋ ನಡೆಸಿದರು, 'ಉತ್ತರ ಕರ್ನಾಟಕ ಭಾಗದ ಜನರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ. ಚಾಮುಂಡೇಶ್ವರಿ, ಬನಶಂಕರಿ ಆಶೀರ್ವಾದ ಅವರಿಗೆ ಸಿಗುವುದಿಲ್ಲ' ಎಂದು ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್
ಬಾದಾಮಿ ಕ್ಷೇತ್ರದಲ್ಲಿ 48, 000 ಕುರುಬ ಮತಗಳಿವೆ. ಪರಿಶಿಷ್ಟ ಜಾತಿ 22,000, ಮುಸ್ಲಿಂ ಸಮುದಾಯದ 11,000 ಮತಗಳಿವೆ. ಬಾದಾಮಿ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲಾ ಅಂಶಗಳು ಸಿದ್ದರಾಮಯ್ಯ ಅವರಿಗೆ ಸಹಾಯಕವಾಗಿವೆ.
ಆದರೆ, ಕೊನೆ ಕ್ಷಣದ ತನಕ ಬಾದಾಮಿ ಸ್ಪರ್ಧೆ ಬಗ್ಗೆ ಇದ್ದ ಗೊಂದಲ. ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ನಡೆದ ಹಗ್ಗಜಗ್ಗಾಟಗಳು ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
ಶ್ರೀರಾಮುಲು ಅವರಿಗೆ ಸಹಾಯಕ
ಬಾದಾಮಿ ಕ್ಷೇತ್ರದಲ್ಲಿ 13 ಸಾವಿರ ವಾಲ್ಮೀಕಿ ಸಮುದಾಯದ ಮತಗಳಿವೆ. ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದ ನಾಯಕ. ಬಾದಾಮಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಅಂಶಗಳು ಶ್ರೀರಾಮುಲು ಅವರಿಗೆ ಸಹಾಯಕವಾಗಬಹುದಾಗಿದೆ.
ಬಿಜೆಪಿ ಅಭ್ಯರ್ಥಿ ಬಗ್ಗೆ ಕೊನೆ ಕ್ಷಣದ ತನಕ ಉಂಟಾಗಿದ್ದ ಗೊಂದಲ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಗಬಹುದಾಗಿದೆ. ಶ್ರೀರಾಮುಲು ಅವರು ಎರಡು ಕಡೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ, ಅವರು ಗೆದ್ದರೂ ಉಪ ಚುನಾವಣೆ ನಡೆಯಬೇಕಾಗಿದೆ. ಈ ಅಂಶವನ್ನು ಜನರು ಪರಿಗಣಿಸಬಹುದು.
ಜನಾರ್ದನ ರೆಡ್ಡಿ v/s ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದಲ್ಲಿ ಗೆಲ್ಲಿಸಲು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಶ್ರೀರಾಮುಲು ಅವರನ್ನು ಗೆಲ್ಲಿಸಲು ಜನಾರ್ದನ ರೆಡ್ಡಿ ಪ್ರಚಾರ ನಡೆಸಲಿದ್ದಾರೆ.
ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ, ಬಿ.ಶ್ರೀರಾಮುಲು ಮೊಳಕಾಲ್ಮೂರು ಮತ್ತು ಬಾದಾಮಿಯಿಂದ 2018ರ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ, ಇಬ್ಬರು ನಾಯಕರ ನಡುವಿನ ಕದನ ಕುತೂಹಲಕ್ಕೆ ಕಾರಣವಾಗಿದೆ.