ಪಕ್ಷದಲ್ಲಿ ಭಿನ್ನಮತ ಇರುವುದಾಗಿ ಒಪ್ಪಿಕೊಂಡ ಕೆ.ಎಸ್.ಈಶ್ವರಪ್ಪ
ಬಾಗಲಕೋಟೆ, ಡಿಸೆಂಬರ್ 04 : ಬಿಜೆಪಿ ಪಕ್ಷದಲ್ಲಿ ಭಿನ್ನಮತ ಇರುವುದನ್ನು ಅದೇ ಪಕ್ಷದ ಹಿರಿಯ ಮುಖಂಡ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಸಮಯ ಉಂಟಾಗುತ್ತಿರುವ ಭಿನ್ನಮತ, ಜಗಳಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಬೆಳೆಯುತ್ತಿರುವುದರಿಂದ ಅಶಿಸ್ತು, ಗೊಂದಲಗಳು ಉಂಟಾಗಿವೆ ಅದನ್ನೆಲ್ಲಾ ಮೀರಿ ಮುಂದೆ ಹೋಗುತ್ತೇವೆ ಎಂದಿದ್ದಾರೆ.
ಹೋದಲ್ಲೆಲ್ಲಾ ಪರಿವರ್ತನಾ ಯಾತ್ರೆ ವೇಳೆ ಚಿಕ್ಕ ಪುಟ್ಟ ಗಲಾಟೆಗಳಾಗ್ತಿರೋದು ಪಕ್ಷ ಅಧಿಕಾರಕ್ಕೆ ಬರುವುದರ ಮುನ್ಸೂಚನೆ ಎಂದ ಈಶ್ವರಪ್ಪ, ಕಲಹಗಳನ್ನು ಶುಭಸೂಚಕ ಎಂದರು. ಯಡಿಯೂರಪ್ಪ ಅವರನ್ನು ಈ ಬಾರಿ ಮುಖ್ಯಮಂತ್ರಿ ಮಾಡಿಯೇ ತೀರುವುದಾಗಿ ಅವರು ಮತ್ತೊಮ್ಮೆ ಹೇಳಿದರು.
ಸಂಸದ ಪ್ರತಾಪ್ ಸಿಂಹ ಅವರ ವಿವಾದದ ಬಗ್ಗೆಯೂ ಮಾತನಾಡಿದ ಅವರು ಸಂಸದ ಪ್ರತಾಪ ಸಿಂಹ ಬಂಧನ ಸರ್ಕಾರವು ಹಿಂದೂಗಳಿಗೊಂದು, ಮುಸ್ಲಿಂರಿಗೊಂದು ನೀತಿ ಅನುಸರಿಸುತ್ತಿರುವ ದ್ಯೋತಕ. ಮುಸ್ಲಿಮರ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಾರೆ, ಹಿಂದೂಗಳ ಹನುಮ ಮತ್ತು ದತ್ತ ಜಯಂತಿಗೆ ಅಡ್ಡಿ ಮಾಡುತ್ತಿದ್ದಾರೆ. ಇದರಿಂದಲೇ ಈ ಸಮಸ್ಯೆ ಉಂಟಾಗಿದೆ. ಹುಣಸೂರಿನ ಕಾಯ೯ಕ್ರಮಕ್ಕೆ ಅನುಮತಿ ನೀಡಿದ್ದರೆ ತಪ್ಪೇನಿತ್ತು, ಸಿಎಂ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ವೀರಶೈವ- ಲಿಂಗಾಯತರನ್ನ ಬೇಪ೯ಡಿಸಿರುವ ಸಿದ್ದರಾಮಯ್ಯ ನಾಡಿನ ಹಿಂದುಗಳ ಕ್ಷಮೆ ಕೇಳಲಿ ಎಂದ ಅವರು ಜಿ.ಪಂ.ಸದಸ್ಯ ಯೋಗಿಶ ಗೌಡ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಅನುಮಾನವಿದೆ. ಕೊಲೆಗಡುಗರನ್ನ ಸಿಎಂ ರಕ್ಷಣೆ ಮಾಡುತ್ತಿರೋದ್ಯಾಕೆ? ಎಂದು ಪ್ರಶ್ನಿಸಿದರು. ಗೌರಿ ಲಂಕೇಶ ಹತ್ಯೆ ಮಾಡಿದವರ ಬಗ್ಗೆ ಸುಳಿವು ಇದ್ದರೂ ಗೃಹ ಸಚಿವರು ಪ್ರಕಟಿಸುತ್ತಿಲ್ಲ ಇದೆಲ್ಲಾ ಕಾಂಗ್ರೆಸ್ನ ಅಪರಾಧ ಬೆಂಬಲದ ಮನೋಭಾವ ತೋರಿಸುತ್ತದೆ ಎಂದರು.