ಮನುಷ್ಯತ್ವ ಗೆಲ್ಲುತ್ತಲೇ ಇರುತ್ತದೆ, ಆದರೆ ಪತ್ರಕರ್ತ ಮಂಜುನಾಥ್ ಅಂಥವರು ಬೇಕಷ್ಟೆ
ಇಂಥ ಸಂದರ್ಭಗಳು ಅಪರೂಪ. ಆದರೆ ಪತ್ರಕರ್ತರಿಗೆ ಇಂಥದೊಂದು ಸಾರ್ಥಕ್ಯ ಸಿಕ್ಕರೆ ಕೆಲಸ ಮಾಡುವುದಕ್ಕೆ ಇನ್ನಷ್ಟು ಸ್ಫೂರ್ತಿ. ಅಂಥದ್ದೊಂದು ಪವಾಡ ನಡೆದಿದೆ. ಅದಕ್ಕೆ ಕಾರಣರಾಗಿರುವ ಬಾಗಲಕೋಟೆ ಜಿಲ್ಲೆಯ ಗಜೇಂದ್ರಗಡದ ವಿಜಯವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ಮಂಜುನಾಥ ರಾಥೋಡ ಅವರ ಬಗ್ಗೆಯೇ ಈ ವರದಿ.
ಗ್ರಾಮಗಳ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲುವ ಸರಣಿ ಲೇಖನಕ್ಕಾಗಿ ಅವರು ಹುಡುಕಾಟ ನಡೆಸುತ್ತಿದ್ದಾಗ ಒಂದು ಕುಟುಂಬದ ಮಾಹಿತಿ ಸಿಕ್ಕಿದೆ. ತಂದೆ-ತಾಯಿ ಕಳೆದುಕೊಂಡ ಆ ಕುಟುಂಬಕ್ಕೆ ಹದಿನೈದು ವರ್ಷದ ಅಕ್ಕನೇ ತಾಯಿ. ತನ್ನ ತಮ್ಮ ಹಾಗೂ ತಂಗಿಯರ ಸಲುವಾಗಿ ಆ ಹೆಣ್ಣುಮಗಳು ಕೂಲಿ ಮಾಡುತ್ತಾ, ಅವರನ್ನು ಶಾಲೆಗೆ ಕಳಿಸುತ್ತಿದ್ದಳು. ಈ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಗೊತ್ತಾಗಿದೆ.
ಹೀಗೊಂದು ಕುಟುಂಬ ಇದ್ದದ್ದು ನಾಗರಸಕೊಪ್ಪ ತಾಂಡದಲ್ಲಿ. ಸ್ವತಃ ಆ ಕುಟುಂಬವನ್ನು ಕಂಡು ಮಂಜುನಾಥ್ ಕಣ್ಣೀರಾಗಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ವರದಿ ಕೂಡ ಮಾಡಿದ್ದಾರೆ. ಆ ಮೂರು ಮಕ್ಕಳಿಗೆ ಅಕ್ಕನೇ ಅಮ್ಮ! ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಕೂಡ ಪ್ರಕಟ ಆಗಿದೆ.

ಮೊದಲ ಸ್ಪಂದನೆ ವಿಜಯವಾಣಿ ಪತ್ರಿಕೆಯಿಂದಲೇ ಆರಂಭ
ಹೀಗೊಂದು ವರದಿ ಮಾಡಿದರೆ, ಆ ನಾಲ್ಕು ಮಕ್ಕಳ ಬದುಕು ಸುಧಾರಿಸಬಹುದು. ಸರಕಾರದಿಂದ ಒಂದು ಮನೆ ಹಾಗೂ ರೇಷನ್ ಕಾರ್ಡ್ ಸಿಕ್ಕರೂ ಸಾಕು ಎಂಬುದು ಮಂಜುನಾಥ್ ನಿರೀಕ್ಷೆ ಆಗಿತ್ತು. ಆ ಮಕ್ಕಳ ಸಲುವಾಗಿ ತಮ್ಮ ಜಮೀನಲ್ಲಿ ಬೆಳೆದಿದ್ದ ಸ್ವಲ್ಪ ದವಸವನ್ನು ಕೂಡ ಕೊಟ್ಟುಬಂದಿದ್ದರು. ಆದರೆ ಆ ನಂತರ ಸಂಭವಿಸಿದ್ದು ಪವಾಡ. ಅದು ಶುರುವಾಗಿದ್ದು ಸ್ವತಃ ವಿಜಯವಾಣಿ ಪತ್ರಿಕೆಯಿಂದಲೇ. ವಿಜಾಪುರ ವಿಭಾಗದ ಸ್ಥಾನಿಕ ಸಂಪಾದಕರಾದ ಕೆ.ಎನ್.ರಮೇಶ್ ಅವರ ಮಗ ಈ ವರದಿ ಓದಿ, ಕಣ್ಣೀರಾಗಿದ್ದಾರೆ. ಆ ಕುಟುಂಬಕ್ಕೆ ಸಣ್ಣ ಮೊತ್ತದ ದುಡ್ಡು ಕೊಡೋಣ ಎಂದಿದ್ದಾರೆ. ಆ ನಂತರ ಪತ್ರಿಕೆಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಸೇರಿ, ಒಂದಿಷ್ಟು ಹಣ ಒಗ್ಗೂಡಿಸಿ, ಆ ಮಕ್ಕಳ ಸಲುವಾಗಿ ನೀಡಿದ್ದಾರೆ.

ಹದಿನೈದು ಲಕ್ಷ ರುಪಾಯಿ ಬ್ಯಾಂಕ್ ಗೆ ಜಮೆ
ಇವೆಲ್ಲದರ ತೂಕ ಒಂದಾಯಿತು. ಆ ನಂತರದ್ದು ಮತ್ತೊಂದು ಮಜಲು. ಚಿತ್ರದುರ್ಗದ ಮುರುಘಾ ಶರಣರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹೀಗೆ ಹಲವರು ಆ ಕುಟುಂಬದ ನೆರವಿಗೆ ನಿಂತಿದ್ದಾರೆ. ನಾನಾ ಕಡೆಯಿಂದ ಹರಿದುಬಂದ ನೆರವಿನ ಮೊತ್ತ ಬ್ಯಾಂಕ್ ನಲ್ಲಿ ಜಮೆಯಾಗಿದ್ದು ಹದಿನೈದು ಲಕ್ಷ ರುಪಾಯಿ. ಇನ್ನು ದೇಶದ ಪ್ರಧಾನಿ ಕಚೇರಿಯಿಂದಲೂ ಸ್ಪಂದನೆ ದೊರೆತಿದೆ. ಆ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ತಿಂಗಳು-ತಿಂಗಳು ಹಣ ಕಳುಹಿಸುವುದಕ್ಕೆ ಹಲವರು ಮುಂದೆ ಬಂದಿದ್ದಾರೆ. ಸರಕಾರದಿಂದ ಅಗತ್ಯ ನೆರವು ಕೂಡ ದೊರೆತಿದೆ ಎಂದು ಮಂಜುನಾಥ್ ಮಾಹಿತಿ ನೀಡಿದರು.

ಶಿಕ್ಷಣ, ಹೆಣ್ಣು ಮಕ್ಕಳ ಮದುವೆಗೂ ಯಾವುದೇ ತೊಂದರೆಯಿಲ್ಲ
ಆ ಮಕ್ಕಳ ಶಿಕ್ಷಣಕ್ಕೆ, ಭವಿಷ್ಯಕ್ಕೆ ಈಗ ಏನೂ ಸಮಸ್ಯೆಯಿಲ್ಲ. ಬಂಜಾರ ಸಮುದಾಯಕ್ಕೆ ಸೇರಿದ ಈ ಕುಟುಂಬದ ಮಕ್ಕಳಿಗೆ ಈಗ ಶಿಕ್ಷಣ ದೊರೆಯುತ್ತದೆ. ಆ ಹೆಣ್ಣುಮಕ್ಕಳಿಗೆ ಮದುವೆಗೆ ಕೂಡ ಏನೂ ತೊಂದರೆ ಆಗುವುದಿಲ್ಲ. ನಾನು ಅಂದುಕೊಂಡಿದ್ದಕ್ಕಿಂತ ಲಕ್ಷ ಪಟ್ಟು ಹೆಚ್ಚು ಅನುಕೂಲವೇ ಆಗಿದೆ. ಆ ಕುಟುಂಬದಲ್ಲಿ ಈಗ ನೆಮ್ಮದಿ ಮನೆ ಮಾಡಿದೆ. ಇಂಥದ್ದೊಂದು ದಿನ ಇಷ್ಟು ಬೇಗ ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ. ಒಂದು ರೇಷನ್ ಕಾರ್ಡ್, ಪುಟ್ಟ ಮನೆಯೊಂದು ಆದರೆ ಸಾಕು ಎಂಬ ನನ್ನ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಸ್ಪಂದನೆ ಇದು ಎಂದರು ಮಂಜುನಾಥ್.

ಮಂಜುನಾಥ್ ಗೆ ರಾಷ್ಟ್ರೀಯ ಮಟ್ಟದ ಸನ್ಮಾನ
ಇಂಥದೊಂದು ಮಾನವೀಯ ನೆಲೆಯ ವರದಿ ಮಾಡಿದ ಮಂಜುನಾಥ್ ಅವರಿಗೆ ಡಿಸೆಂಬರ್ ಒಂಬತ್ತನೇ ತಾರೀಕು ಅಂಬೇಡ್ಕರ್ ಹೆಸರಿನಲ್ಲೊಂದು ಸನ್ಮಾನ ಆಗಿದೆ. ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿದ ಅವರು, ಆ ವರದಿ ಮಾಡುತ್ತಾ ನಾನೇ ಕಣ್ಣೀರಾಗಿದ್ದೆ. ಆ ಮಕ್ಕಳಿಗೆ ಅಕ್ಕನಾದ ಮಂಜುಳಾ ಸಮಾಧಾನ ಮಾಡುತ್ತಿದ್ದ ರೀತಿಗೆ ಎಂಥವರ ಕರುಳು ಚುರುಕ್ ಅನ್ನೋ ಹಾಗಿತ್ತು. ಆ ಹೆಣ್ಣುಮಗಳ, ಆ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಅಂತಃಕರುಣಿ ಸಮಾಜ ನಮ್ಮದು. ಅಂಥ ವರದಿಯನ್ನು ಮೊದಲ ಪುಟಕ್ಕೆ ಹಾಕಿದ ಪತ್ರಿಕೆ ನಿಲುವನ್ನು ಸ್ಮರಿಸಬೇಕು. ಹೂವಿನ ಜತೆಗೆ ನಾರು ಸ್ವರ್ಗಕ್ಕೆ ಹೋಯಿತು ಅನ್ನೋ ಹಾಗೆ ವಿವಿಧ ಸಂಘಟನೆಗಳು ನನಗೆ ಸನ್ಮಾನ ಮಾಡುತ್ತಿವೆ ಎಂದರು.












Click it and Unblock the Notifications