ಬಾಗಲಕೋಟೆ: ಜೂನ್ 30 ರಿಂದ ಕರ್ಫ್ಯೂ ಜಾರಿ: ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ, ಜೂನ್ 29: ಬಾಗಲಕೋಟೆ ಜಿಲ್ಲೆಯಾದ್ಯಂತ ಜೂನ್ 30 ರಿಂದ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
Recommended Video
ನಗರದ ನೂತನ ಪ್ರವಾಸಿ ಮಂದರದಲ್ಲಿ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಬಜ್ಜಿ, ಚೋಡ, ತಂಪು ಪಾನೀಯ ಹಾಗೂ ಹಣ್ಣಿನ ರಸ ಅಂಗಡಿಗಳಿಂದ ಅಪಾಯವಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರ ವರೆಗೆ ಕರ್ಫ್ಯೂ ಜಾರಿ ಮಾಡಲಾಗುವುದು. ಅಲ್ಲದೇ ಜಿಲ್ಲೆಯಲ್ಲಿರುವ 9 ತಾಲ್ಲೂಕು ಕೇಂದ್ರಗಳಿಗೆ ಫ್ಲೈಯಿಂಗ್ ಸ್ಕ್ವಾಡ್ ಗಳನ್ನು ನೇಮಕಮಾಡಲಾಗಿದ್ದು, ಅವರು ದಿನದಿತ್ಯ ಮಾರುಕಟ್ಟೆ, ಹೋಟೆಲ್, ಖರೀದಿ ಸ್ಥಳಗಳಲ್ಲಿ ನಿಗಾವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 12,587 ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 11,089 ನೆಗಟಿವ್, 184 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಿಂದ ಕಳುಹಿಸಲಾದ 1,245 ಸ್ಯಾಂಪಲ್ ಗಳ ವರದಿ ಬರಬೇಕಾಗಿದ್ದು, 117 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 62 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಗಳೆಂದು ಘೋಷಿಸಲಾಗಿದ್ದು, ಸದ್ಯ 18 ಕಂಟೈನ್ಮೆಂಟ್ ಝೋನ್ ಗಳಿವೆ. ನಿಷೇಧಿತ ಪ್ರದೇಶದಲ್ಲಿರುವ ಜನರಿಗೆ ಆಹಾರ ಧಾನ್ಯ, ತರಕಾರಿ, ಹಣ್ಣು ಹಂಪಲು, ಔಷಧ ಹಾಗೂ ಇನ್ನಿತರ ಮೂಲಭೂತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ. ಬೇರೆ ರಾಜ್ಯದಿಂದ ಬಸ್ ಗಳ ಮೂಲಕ 2833, ರೈಲಿನ ಮೂಲಕ 446 ಜನ ಬಂದಿದ್ದು, ಅವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಕ್ವಾರಂಟೈನ್ ವಾಚ್ ಆ್ಯಪ್, ಕಾಂಟ್ಯಾಕ್ಟ ಟ್ರೇಸಿಂಗ್ ಆ್ಯಪ್, ಹೆಲ್ತ ವಾಚ್ ಮತ್ತು ಕಂಟೈನ್ಮೆಂಟ್ ವಾಚ್ ಆ್ಯಪ್ ಗಳ ನಿರ್ವಹಣೆಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿಯನ್ನು ಕ್ರೂಢೀಕರಿಸಲು ಸೂಕ್ತ ಕ್ರಮವಹಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮ ಮಟ್ಟದಲ್ಲಿ ಗಸ್ತು ಜಾಗೃತಿ ತಂಡವನ್ನು ರಚಿಸಿ ಗ್ರಾಮಗಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications