ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸದಿದ್ದರೆ ವಿಷ ಕುಡಿತೀವಿ: ಕಾಂಗ್ರೆಸ್ ಮುಖಂಡರ ಬೇಡಿಕೆ
ಬಾಗಲಕೋಟೆ, ನವೆಂಬರ್ 11: ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿದ ಮೇಲೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಅವರಿಂದ ಕ್ಷೇತ್ರವನ್ನು ರಾಜ್ಯಾದ್ಯಂತ ಗುರುತಿಸಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿಯೂ ಅವರು ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಶುಕ್ರವಾರ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಬಾಗಲಕೋಟೆಯಲ್ಲಿ ಸೇರಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಆಗ್ರಹಿಸಿದರು.
ನನ್ನ ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಾರೆ ಎಂಬ ವಿಶ್ವಾಸವಿದೆ: ಡಿಕೆಶಿ
ಸಿದ್ದರಾಮಯ್ಯ ಇತ್ತೀಚೆಗೆ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಬಾದಾಮಿ ನನಗೆ ದೂರ ಆಗುತ್ತದೆ. ಇದರಿಂದ ಅಲ್ಲಿನ ಜನರ ಜೊತೆಗೆ ಹೆಚ್ಚು ಬೆರೆಯುವುದಕ್ಕೆ ಆಗುತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ 2023ರ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಅಸಾಧ್ಯ ಎನ್ನುವ ದಾಟಿಯಲ್ಲಿ ಮಾತನಾಡಿದ್ದರು. ಈ ಹೇಳಿಕೆಯಿಂದ ಹತಾಶಗೊಂಡ ಬಾದಾಮಿ ಕಾಂಗ್ರೆಸ್ ಮುಖಂಡರು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅಲ್ಲದೇ ಹಿಂದಿನ ಶಾಸಕರು ಮಾಡದ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಹಾಗಾಗಿ ಮುಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು. ಸಿದ್ದರಾಮಯ್ಯರಿಗೆ ಈಗಾಗಲೇ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವುದಕ್ಕೆ ಆಹ್ವಾನಗಳು ಬರುತ್ತಿವೆ. ಆದರೆ ಸಿದ್ದರಾಮಯ್ಯ ಕಳೆದ ಸಾರಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದಿದ್ದಾರೆ. ಮುಂದಿನ ಸಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು
ಮೋದಿ ಬೆಂಗಳೂರು ಭೇಟಿ; ಸಿದ್ದರಾಮಯ್ಯ ಹೇಳುವುದೇನು?
ಸಿಎಂ ಆದರೆ ಇಡೀ ಜಿಲ್ಲೆ ಅಭಿವೃದ್ಧಿಯಾಗುತ್ತೆ
ಈಗಾಗಲೇ ಕ್ಷೇತ್ರದ ಶಾಸಕರಾಗಿ ಸುಮಾರು 3 ಸಾವಿರ ಕೋಟಿಯಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಐತಿಹಾಸಿಕ ತಾಣವಾಗಿರುವ ಬಾದಾಮಿ ಅಭಿವೃದ್ಧಿಯಾಗಿದೆ. ಮತ್ತೆ ಸ್ಪರ್ಧೆ ಮಾಡಿದರೆ, ಮುಂದೆ ಮುಖ್ಯಮಂತ್ರಿಯಾಗಲಿರುವ ಸಿದ್ದರಾಮಯ್ಯನವರಿಂದ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಇಡೀ ಬಾಗಲಕೋಟೆ ಜಿಲ್ಲೆಯು ಮುಖ್ಯಮಂತ್ರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತದೆ. ಈಗಾಗಲೇ ವಿವಿಧ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುವಂತೆ ಕರೆ ನೀಡಲಾಗಿದೆ. ಆದರೆ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಇಲ್ಲವಾದಲ್ಲಿ ಅವರ ಮನೆ ಎದುರು ಧರಣಿ ನಡೆಸುವುದಾಗಿ ಸಿದ್ದರಾಮಯ್ಯ ಆಪ್ತರಾದ ಹೊಳ ಬಸು ಶೆಟ್ಟರ್ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ವಿರೋಧವಿಲ್ಲ
ಸಿದ್ದರಾಮಯ್ಯ ಕಳೆದ ಸಾರಿ ಕೊನೆಯ ಕ್ಷಣದಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರಿಂದ ಕೇವಲ 1500 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಜೊತೆಗೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಹಿಂದಿನ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಕೂಡಾ ನೀಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಚಿಮ್ಮನಕಟ್ಟಿಯವರಿಗೆ ಸಿದ್ದರಾಮಯ್ಯ ಯಾವುದೇ ಸೂಕ್ತ ಸ್ಥಾನ ನೀಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಈ ಸಾರಿ ಚಿಮ್ಮನಕಟ್ಟಿ ಅವರಿಂದ ಸೋಲಿನ ಭಯ ಕಾಡುತ್ತಿದೆ ಎಂಬ ಮಾತುಗಳು ಇವೆ. ಆದರೆ ಕ್ಷೇತ್ರದಲ್ಲಿ ಯಾವುದೇ ವಿರೋಧಿ ವಾತಾವರಣ ಇಲ್ಲ ಎನ್ನುವುದು ಸಿದ್ದು ಆಪ್ತರ ಮಾತಾಗಿದೆ.
ಸಿದ್ದರಾಮಯ್ಯ ಮನೆ ಮುಂದೆ ಹೋರಾಟ
ಅಲ್ಲದೇ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಂದ್ಮೇಲೆ 4 ಸಾವಿರ ಕೋಟಿ ರೂಪಾಯಿ ಅಧಿಕ ಅನುದಾನ ತಂದಿದ್ದಾರೆ. ಸಿದ್ದರಾಮಯ್ಯ ಕೂಡಲೇ ಬಾದಾಮಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಬೇಕು. ಇಲ್ಲದೆ ಇದ್ರೆ ಸಿದ್ದರಾಮಯ್ಯ ಮನೆಮುಂದೆ ಹೋರಾಟ ಮಾಡಲಾಗುವುದು. ಮುಂದುವರೆದು ಎಐಸಿಸಿ ಮೇಲೂ ಒತ್ತಡ ಹಾಕಲಾಗುವುದು ಎಂದು ಹೊಳಬಸು ಶೆಟ್ಟರ್ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಸ್ಪರ್ಧಿಸದಿದ್ದರೆ ವಿಷ ತಗೋತಿವಿ
ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಕೇವಲ 2ದಿನಗಳಿದ್ದಾಗ ನಾಮಿನೇಷನ್ ಮಾಡಿದ್ದರು. ಆದರೂ ಇಲ್ಲಿನ ಜನರು ಅವರನ್ನ ಗೆಲ್ಲಿಸಿದರು. ನಂತರೂ ಅವರೂ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ ಮುಂದಿನ ಬಾರಿಯೂ ಬಾದಾಮಿಯಲ್ಲೆ ಅವರು ಸ್ಪರ್ಧಿಸಬೇಕು. ಚಾಲುಕ್ಯರ ರಾಜಧಾನಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕು. ಒಂದು ವೇಳೆ ಅವರು ಒಪ್ಪದಿದ್ದರೆ ನಾವೆಲ್ಲಾ ವಿಷ ತೆಗೆದುಕೊಳ್ಳುತ್ತೇವೆ, ನಾನಂತೂ ಮೊದಲೇ ತೆಗೆದುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯರ ಆಪ್ತರಾದ ಹಂಗರಗಿ ಮನವಿ ಮಾಡಿಕೊಂಡಿದ್ದಾರೆ.