ಪ್ರವೀಣ್ ಹತ್ಯೆ ಖಂಡಿಸಿ ಬಾಗಲಕೋಟೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ
ಬಾಗಲಕೋಟೆ, ಜುಲೈ 27 : ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಜಿಲ್ಲೆಯ ಯುವ ಬಿಜೆಪಿ ಮುಖಂಡರು ಖಂಡಿಸಿದ್ದು, ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಬುಧವಾರ ಸಭೆ ನಡೆಸಿ, ರಾಜೀನಾಮೆ ನೀಡುವ ತೀರ್ಮಾನ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯ ಯುವ ಮೋರ್ಚಾದ 12 ಮಂಡಳಗಳ ಪದಾಧಿಕಾರಿಗಳು, ಕಾರ್ಯಕರ್ತರಿಂದ ರಾಜೀನಾಮೆ ನಿರ್ಧಾರಕ್ಕೆ ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರ ಇದ್ದರೂ ಸಹಾ ಹಿಂದೂಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಭದ್ರತೆ ಇಲ್ಲದೇ ಇರುವುದು ವಿಷಾದಕರವೆಂದು ಅಸಮಾಧಾನ ಹೂರ ಹಾಕಿದ್ದಾರೆ.
"ಪ್ರವೀಣ್ ಹತ್ಯೆಯಿಂದ ನಮಗೆ ತೀವ್ರ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರ ಸೂಕ್ತ ಕ್ರಮವಾಗಬೇಕು. ಸಿಎಂ ಮತ್ತು ಗೃಹ ಸಚಿವರು ಸೇರಿದಂತೆ ಸಂಬಂಧಪಟ್ಟವರೆಲ್ಲರೂ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕ್ರಮ ಕೈಗೊಳ್ಳುವವರೆಗೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ತೀರ್ಮಾನ ಮಾಡಲಾಗಿದೆ. ಜಿಲ್ಲೆಯ ಯುವ ಮೋರ್ಚಾದ 12 ಮಂಡಳಗಳ ಪದಾಧಿಕಾರಿಗಳು,ಕಾರ್ಯಕರ್ತರು ರಾಜೀನಾಮೆ ನೀಡಿದ್ದೇವೆ" ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಾಂವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗ ಮೋರ್ಚಾ
ಬಾಗಲಕೋಟೆ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ವೀರಣ್ಣ ಹಳೆಗೌಡರ ಕೂಡ ರಾಜೀನಾಮೆ ನೀಡಿದ್ದಾರೆ. " ಕರ್ನಾಟಕ ರಾಜ್ಯದಲ್ಲಿ ಹಿಂದು ಯುವಕರ ಮೇಲೆ, ವಿಶೇಷವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ, ಹತ್ಯೆ ಮಾಡಲಾಗುತ್ತಿದೆ. ಈ ಘಟನೆಯನ್ನು ಖಂಡಿಸಿ ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಶ್ರೀರಾಮಸೇನೆ ಆಕ್ರೋಶ
"ಹಿಂದುತ್ವದ ಆಧಾರದ ಮೇಲೆ ಬಂದಂತಹ ಬಿಜೆಪಿ, ಇಂದು ಹಿಂದು ಯುವಕರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗುತ್ತಿದೆ. ಅಧಿಕಾರದಾಸೆಗೆ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ. ಹಿಂದುತ್ವಕ್ಕೋಸ್ಕರ ಭಟ್ಕಳದಲ್ಲಿ ಚಿತ್ತರಂಜನ್ ದಾಸ್ ಬಿಟ್ಟೆ, ಇಲ್ಲಿಯವರೆಗೆ ಯಾವ ಎಂಎಲ್ಎ ಕೊಲೆಯಾಗಿದ್ದಾರೆ?, ಕೇವಲ ಸಾಮಾನ್ಯ ಕಾರ್ಯಕರ್ತರ ಕೊಲೆಗಳಾಗುತ್ತಿವೆ ಅಷ್ಟೇ" ಎಂದು ಶ್ರೀರಾಮಸೇನೆ ಬಳ್ಳಾರಿ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿಸಿ "ನಿನ್ನೆ ಮೊನ್ನೆ ಬಂದ ಎಂಎಲ್ಎ ಗಳಿಗೆ ಮೂರು ಗನ್ ಮ್ಯಾನ್ಗಳನ್ನು ನೀಡಿದ್ದಾರೆ. ಆದರೆ ಧರ್ಮದ ಸಲುವಾಗಿ ಆಸ್ತಿ, ಮನೆ, ಮಠ, ತಂದೆ-ತಾಯಿ ಬಿಟ್ಟು ಬಂದ ಹೋರಾಟ ಮಾಡುವ ವ್ಯಕ್ತಿಗಳಿಗೆ ಸೆಕ್ಯುರಿಟಿ ಕೊಡುವ ಯೋಗ್ಯತೆ ನಿಮಗಿಲ್ಲ ಎನ್ನುತ್ತಿದ್ದಾರೆ. ಮುತಾಲಿಕ್ಗೆ ಇಬ್ಬರು ಗನ್ ಮ್ಯಾನ್ ಗಳಿದ್ದರು, ಅದರಲ್ಲಿ ಒಬ್ಬರನ್ನು ತೆಗೆದಿದ್ದಾರೆ. ಸಿದ್ದಲಿಂಗ ಸ್ಚಾಮೀಜಿಗೆ ಇದ್ದಂತಹ ಒಬ್ಬ ಗನ್ಮ್ಯಾನ್ನನ್ನು ತೆಗೆದಿದ್ದಾರೆ. ಮುತಾಲಿಕ್, ಸಿದ್ದಲಿಂಗ ಸ್ವಾಮೀಜಿ ಕೊಲೆಗಳನ್ನು ಮಾಡಿಸಿ ಮತ್ತೊಮ್ಮೆ ಬರೋದಿಕ್ಕೆ ಯೋಚನೆ ಮಾಡಿದ್ದೀರಾ" ಎಂದು ಸಂಜೀವ್ ಬಿಜೆಪಿ ವಿರುದ್ಧ ಕಿಡಿಕಾರಿದರು.












Click it and Unblock the Notifications