ಕಬ್ಬಿನ ದರ ಸಮಸ್ಯೆ: ಶಾಂತ ರೀತಿಯಿಂದ ಬಗೆಹರಿಸಿಕೊಳ್ಳುವಂತೆ ಬಾಗಲಕೋಟೆ ಡಿಸಿ ಮನವಿ
ಬಾಗಲಕೋಟೆ, ನವೆಂಬರ್ 10: ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರು ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರದಂತೆ ಪ್ರಸಕ್ತ ಹಂಗಾಮಿಗೆ ಕಬ್ಬಿನ ದರ ಘೋಷಣೆಯ ಸಮಸ್ಯೆಯನ್ನು ಶಾಂತ ರೀತಿಯಿಂದ ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರುಗಳು ಕಬ್ಬಿನ ದರ ಘೋಷಣೆಯ ಸಮಸ್ಯೆಯನ್ನು ಶಾಂತ ರೀತಿಯಿಂದ ವರ್ತಿಸಬೇಕು. ಜಿಲ್ಲೆಯ ಶಾಂತಿಗೆ ಭಂಗ ತರುವಂತಹ, ಸಾರ್ವಜನಿಕರ ಆಸ್ತಿ, ಪಾಸ್ತಿಗೆ ಧಕ್ಕೆಯಾಗಬಾರದು ಎಂಬುವುದೇ ಜಿಲ್ಲಾಡಳಿತ ಆಶಯವಾಗಿದೆ. ಮಾಲೀಕರ ಕೋರಿಕೆಯಂತೆ ಕಾರ್ಖಾನೆಗಳಿಗೆ ಭದ್ರತೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯ ಕಬ್ಬು ಬೆಳೆಗಾರರು ಬೆಳೆದ ಕಬ್ಬಿನ ಕಟಾವು ಮತ್ತು ಸಾಗಾಣಿಕೆಯನ್ನು ಸುಗಮವಾಗಿಸುವ ದೃಷ್ಟಿಯಿಂದ ಆಯಾ ಕಾರ್ಖಾನೆಯ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ ಮತ್ತು ರೈತರಿಗೆ ಸಂಬಂಧಪಟ್ಟ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳವರು ನೊಂದಾಯಿತ ಕಬ್ಬು ಬೆಳೆಯುವ ಕ್ಷೇತ್ರಕ್ಕೆ ಪ್ರತಿ ಕಬ್ಬು ಬೆಳೆಗಾರರ ಜೇಷ್ಠತೆಯ ಆಧಾರದ ಮೇಲೆ ಕಬ್ಬು ಕಟಾವು ಅವಧಿಯನ್ನು ನಿಗಧಿಪಡಿಸಿ, ಕಬ್ಬು ಕಟಾವಿನ ಆದ್ಯತಾ ಪಟ್ಟಿಯನ್ನು ಕಾರ್ಖಾನೆಯ ಸೂಚನಾ ಫಲಕಕ್ಕೆ ಪ್ರಕಟಿಸಬೇಕು. ಇದರಿಂದ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡಲು ಅನಾವಶ್ಯಕವಾಗಿ ಕಬ್ಬು ಬೆಳೆಗಾರರಿಗೆ ಆಗುವ ತೊಂದರೆಯನ್ನು ಹೋಗಲಾಡಿಸಲು ಅನುಕೂಲವಾಗುತ್ತದೆ ಎಂದರು.

ಕಬ್ಬಿನ ಬಿಲ್ ಅನ್ನು ಪಾವತಿ ಮಾಡುವ ಸಂಬಂಧ ಕಬ್ಬು ಬೆಳೆಗಾರರಿಗೆ ನಿರ್ಧಿಷ್ಟವಾದ ಬ್ಯಾಂಕಿನಲ್ಲಿಯೇ ಖಾತೆಯನ್ನು ಹೊಂದಲು ಕಡ್ಡಾಯ ಅಥವಾ ಒತ್ತಾಯ ಮಾಡಲು ಕಾರ್ಖಾನೆಗಳಿಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ರೈತರ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಪೂರ್ವದಲ್ಲಿ ಸಂಬಂಧಿಸಿದ ರೈತರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಪ್ರತಿವರ್ಷ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳ ಸಂಬಂಧ ಮಾರ್ಗಸೂಚಿಗಳನ್ನು ನೀಡಲಾಗುತ್ತಿದ್ದು, ಪ್ರಸಕ್ತ ಹಂಗಾಮಿಗೆ ಹೊರಡಿಸಲಾಗುವ ಕಬ್ಬು ಕಟಾವು ಮತ್ತು ಸಾಗಾಣಿಕೆ ಅಂದಾಜು ವೆಚ್ಚಗಳ ವಿವರಗಳನ್ನು ಪರಿಗಣನೆಗೆ ತೆಗೆದುಕೊಂಡು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಅನುಷ್ಠಾನಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡುವ ನಿವ್ವಳ ಮೊತ್ತವನ್ನು ಅಕ್ಟೋಬರ್ 31ರಂದು ಜರುಗಿದ ರೈತರು ಮತ್ತು ಸಕ್ಕರೆ ಕಾರ್ಖಾನೆಯವರ ಸಭೆಯಲ್ಲಿ ಘೋಷಿಸಿದಂತೆ ನೀಡುವುದಾಗಿ ತಿಳಿಸಿದರು. ಇನ್ನುಳಿದ ಕಾರ್ಖಾನೆಗಳವರು ರೈತರೊಂದಿಗೆ ಮಾತನಾಡಿ ದರ ಘೋಷಣೆ ಮಾಡಿದ ನಂತರವೇ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ನವೆಂಬರ 7 ರಂದು ಕಾರ್ಖಾನೆಗೆ ಕೆಲ ರೈತರ ಜೊತೆ ಬಂದ ಕಿಡಿಗೇಡಿಗಳು ಗಲಾಟೆ ಮಾಡಿ ಕಾರ್ಖಾನೆಗೆ ಹಾಗೂ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಹಾನಿಯನ್ನುಂಟು ಮಾಡಿರುವ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಯಲ್ಲಿ ಪ್ರಸ್ತಾಪಿಸಿದ್ದು. ತಮಗೆ ಜೀವಕ್ಕೆ ಹಾನಿಯಾಗುವ ಸ್ಥಿತಿ ಬಂದಿದ್ದು, ತಮಗೆ ಭದ್ರತೆಯನ್ನು ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಮಾತನಾಡಿ, ಕಾರ್ಖಾನೆ ಮಾಲೀಕರು ತಮ್ಮ ವ್ಯಾಪ್ತಿಯ ರೈತರನ್ನು ಕರೆಯಿಸಿ, ಶಾಂತಯುತವಾಗಿ ಸಭೆಯನ್ನು ಜರುಗಿಸಬೇಕು. ಪ್ರಸಕ್ತ ಹಂಗಾಮಿನ ದರ ಘೋಷಣೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್, ಆಹಾರ ಇಲಾಖೆಯ ಲೆಕ್ಕಾಧಿಕಾರಿ ಆರ್.ಎಸ್.ಚೌದರಿ ಸೇರಿದಂತೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.












Click it and Unblock the Notifications