ಬಾಗಲಕೋಟೆ: 92 ರ ತಾಯಿಗೆ ತುಲಾಭಾರ ಮಾಡಿ ಆದರ್ಶ ಮೆರೆದ ಮಕ್ಕಳು
ಬಾಗಲಕೋಟೆ, ಅಕ್ಟೋಬರ್ 24: ಇಂದಿನ ಕಾಲದಲ್ಲಿ ದಿನೇ ದಿನೇ ಒಂದಿಲ್ಲೊಂದು ಕಾಯಿಲೆಗಳು ಗುರುತಾಗುತ್ತಿರುವಾಗ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ ಬದುಕುವುದೇ ಕಷ್ಟ ಎಂಬಂತಾಗಿದೆ. ಅವಿಭಕ್ತ ಕುಟುಂಬವೇ ಮರೆಯಾಗುತ್ತಿರುವ ಈ ಕಾಲದಲ್ಲೂ ಬಾಗಲಕೋಟೆ ನಗರದ ವೃದ್ಧೆಯೋರ್ವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಬಂಧುಗಳೊಂದಿಗೆ ಅವಿಭಕ್ತ ಕುಟುಂಬವನ್ನು ಉಳಿಸಿಕೊಂಡು ಬಂದಿದ್ದಾರೆ.
ಕುಟುಂಬಸ್ಥರೆಲ್ಲರೂ ಒಂದೇ ಸೂರಿನಡಿ ಬದುಕುವಂಥ ಸೌಹಾರ್ದ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಈ ವೃದ್ಧೆಗೆ ಕುಟುಂಬದ ಸದಸ್ಯರೆಲ್ಲ ಸೇರಿ ಚಿನ್ನಾಭರಣ ಪುಷ್ಪದ ತುಲಾಭಾರ ಮಾಡಿ ಕೃತಜ್ಞತೆ ಅರ್ಪಿಸಿದರು.
ಬಾಗಲಕೋಟೆ ನಗರದಲ್ಲಿರುವ ಗಂಗಾಧರ ಕಾಟವಾ ಎಂಬುವವರು ತಮ್ಮ 92 ವರ್ಷದ ತಾಯಿ ಪಾರ್ವತಿಬಾಯಿಯವರಿಗೆ ವಿಶೇಷ ರೀತಿಯಲ್ಲಿ ಗೌರವ ನೀಡಿದರು. ತಾಯಿಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿಕೊಂಡು ಅವರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಮಕ್ಕಳ ನಿಜವಾದ ಕರ್ತವ್ಯವೇನು ಎಂಬುದನ್ನು ತೋರಿಸಿಕೊಟ್ಟರು.
ಸುಮಾರು ಮೂವತ್ತಕ್ಕೂ ಹೆಚ್ಚು ಜನ ಒಂದೇ ಸೂರಿನಡಿ ಬದುಕುತ್ತಿರುವ ಅವಿಭಕ್ತ ಕುಟುಂಬದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಯಿತು. ಸಕಲ ಬಂಧು ಬಾಂಧವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.