ಪಂಜಾಬ್ನಲ್ಲಿ ತಪ್ಪಿದ ಬೃಹತ್ ಉಗ್ರ ದಾಳಿ, 3 ಶಂಕಿತ ಉಗ್ರರ ಬಂಧನ
ಅಮೃತಸರ, ಸೆಪ್ಟೆಂಬರ್ 23: ಪಂಜಾಬ್ನಲ್ಲಿ ಸಂಭವಿಸಬಹುದಾಗಿದ್ದ ಬೃಹತ್ ಉಗ್ರ ದಾಳಿಯನ್ನು ಪೊಲೀಸರು ತಡೆದಿದ್ದಾರೆ.
ರಾಜ್ಯದ ತಾರ್ನ್ ತರನ್ ಜಿಲ್ಲೆಯಲ್ಲಿ ನಡೆಯಬುದಾಗಿದ್ದ ಬೃಹತ್ ದಾಳಿಯನ್ನು ತಪ್ಪಿಸಿದ್ದಲ್ಲದೆ, ಮೂವರು ಶಂಕಿತ ಉಗ್ರರನ್ನು ಕೂಡ ಬಂಧಿಸಿದ್ದಾರೆ.
ಬುಧವಾರ ತಡ ರಾತ್ರಿ ತಾರ್ನ ತರನ್ನ ಭಗವಾನ್ಪುರ ಗ್ರಾಮದ ಬಳಿ ಮೂವರು ಶಂಕಿತ ಉಗ್ರರನ್ನು ಹಿಡಿಯಲಾಯಿತು. ಅವರ ಬಳಿ ಒಂದು 9 ಎಂಎಂ ಪಿಸ್ತೂಲು, 11 ಸಜೀವ ಕಾಟ್ರಿಡ್ಜ್, ಒಂದು ಹ್ಯಾಂಡ್ ಗ್ರೆನೇಡ್ ಮತ್ತು ಇತರೆ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

ಶಂಕಿತ ಉಗ್ರರನ್ನು ಕಮಲ್ಪ್ರೀತ್ ಸಿಂಗ್ ಮಾನ್, ಕುಲ್ವಿಂದರ್ ಸಿಂಗ್ ಮತ್ತು ಕನ್ವರ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಎಲ್ಲರೂ ರಾಜ್ಯದ ಮೊಗಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಈ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದು, ಶೋಧಕಾರ್ಯ ನಡೆಯುತ್ತಿದೆ. ಈ ತಿಂಗಳ ಆರಂಭದಲ್ಲಿ ಪಂಜಾಬ್ನ ಭಾರತ-ಪಾಕ್ ಗಡಿಯಲ್ಲಿ ಟಿಫಿನ್ ಬಾಕ್ಸ್ ಐಇಡಿ ಪತ್ತೆಯಾದ ಘಟನೆ ಬಳಿಕ ಈ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಸ್ಫೋಟಕಗಳು ಪತ್ತೆಯಾದ ಹಲವು ಘಟನೆಗಳು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಳೆಯ ಶಂಕಿತರನ್ನೂ ಕೂಡ ಪರಿಶೀಲಿಸುತ್ತಿದ್ದಾರೆ.
ಸೆಪ್ಟೆಂಬರ್ 21 ರಂದು ಜಮ್ಮು ಕಾಶ್ಮೀರದಲ್ಲೂ ಇಂತಹದೊಂದು ಅನಾಹುತ ತಪ್ಪಿದೆ. ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಐಇಡಿ ಸ್ಫೋಟವನ್ನು ವಿಫಲಗೊಳಿಸಿದ್ದು ಭಾರಿ ಅನಾಹುತ ತಪ್ಪಿದೆ.
ಬದ್ಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶ ರಕ್ಷಣಾ ವಲಯ, ಶ್ರೀನಗರ ವಿಮಾನ ನಿಲ್ದಾಣ, ತಾಂತ್ರಿಕ ಏರ್ ಪೋರ್ಟ್, ಜಮ್ಮು-ಕಾಶ್ಮೀರ ಲೈಟ್ ಇನ್ಫಾಂಟ್ರಿ ಸೇನೆಯ ಕೇಂದ್ರ ಕಚೇರಿ, ಸಾರ್ವಜನಿಕರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶವಾಗಿದೆ.
ಐಇಡಿ ಪತ್ತೆಯಾದ ಗೊಗೊ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಸಂಭಾವ್ಯ ದಾಳಿಯ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧಕಾರ್ಯಾಚರಣೆಯನ್ನು ಆರಂಭಿಸಿದ ವೇಳೆ ಈ ಐಇಡಿ ಪತ್ತೆಯಾಗಿದೆ. ತಕ್ಷಣವೇ ಬಾಂಬ್ ನಿಗ್ರಹ ದಳವನ್ನು ಕರೆಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಕಾಶ್ಮೀರದ ಕಣಿವೆಯಲ್ಲಿ ವಿವಿಧೆಡೆ ಎನ್ಐಎ ದಾಳಿ
ರಾಷ್ಟ್ರೀಯ ತನಿಖಾ ದಳ ಸೆ.21 ರಂದು ಬೆಳಿಗ್ಗೆ ಕಾಶ್ಮೀರ ಕಣಿವೆಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಎನ್ಐಎ ಪೊಲೀಸರು ಲಸ್ಜನ್ ನ ನಿವಾಸಿ ಮೊಹಮ್ಮದ್ ಶಫಿ ವಾನಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ವಾನಿ ನಿವಾಸದಲ್ಲಿ ಶೋಧಕಾರ್ಯಾಚರಣೆ ನಡೆದಿದ್ದು, ಆ ವ್ಯಕ್ತಿ ಹಾಗೂ ಆತನ ಪುತ್ರನ ಮೊಬೈಲ್ ಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಳಿಕ ವಾನಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಚೌಕ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇನ್ನು ಕುಲ್ಗಾಮ್ ಜಿಲ್ಲೆಯಲ್ಲಿ ವಸೀಮ್ ಅಹ್ಮದ್ ದರ್ ನಿವಾಸದ ಮೇಲೆ ಎನ್ಐಎ ದಾಳಿ ನಡೆದಿದೆ. ಅನನಂತ್ ನಾಗ್ ನಲ್ಲಿ ಬಶೀರ್ ಅಹ್ಮದ್ ನಿವಾಸದ ಮೇಲೆ, ಬಾರಾಮುಲ್ಲಾ ಜಿಲ್ಲೆಯಲ್ಲಿ ಘುಲಾಮ್ ಮೊಹ್ಯುದ್ ದಿನ್ ವಾನಿ- ರೇಷ್ಮೆ ಇಲಾಖೆಯ ನೌಕರನ ನಿವಾಸದ ಮೇಲೆಯೂ ದಾಳಿ ನಡೆದಿದೆ.












Click it and Unblock the Notifications