ಜಗನ್ ಚಿಕ್ಕಪ್ಪನನ್ನು ಕೊಂದವರಾರು, ಜಗನ್ ಬೊಟ್ಟು ಯಾಕೆ ಚಂದ್ರಬಾಬು ನಾಯ್ಡು ಕಡೆಗೆ?
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ರಾಜಕೀಯಕ್ಕೆ ರಕ್ತಸಿಕ್ತದ ಇತಿಹಾಸವೇ ಇದೆ. ಇವರು ಅವರನ್ನು ಕೊಂದು ಮೇಲಾಟ ನಡೆಸುವುದು, ಅವರು ಇನ್ನೊಬ್ಬರನ್ನು ಕೊಂದು ರಾಜಕೀಯ ನಡೆಸುವುದು. ಹೆಚ್ಚಾಗಿ ಬಡಪಾಯಿ ಕಾರ್ಯಕರ್ತರೇ ಇದಕ್ಕೆ ಬಲಿಯಾಗುತ್ತಿದ್ದರೆ, ಅಪರೂಪ ಎನ್ನುವಂತೆ ಪ್ರಮುಖ ಮುಖಂಡರೊಬ್ಬರು ರಾಜಕೀಯ ವೈಷಮ್ಯಕ್ಕೆ ಬಲಿಯಾಗಿದ್ದಾರೆ.
ವೈ ಎಸ್ ಜಗನ್ ಅವರ ಚಿಕ್ಕಪ್ಪ ವೈ ಎಸ್ ವಿವೇಕಾನಂದ ರೆಡ್ಡಿಯವರ ಬರ್ಭರ ಹತ್ಯೆಯಿಂದ, ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಆಂಧ್ರ ತಲ್ಲಣಗೊಂಡಿದೆ. ಘಟನೆ ನಡೆದ ಕೂಡಲೇ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಎಸ್ಐಟಿ ತನಿಖೆಗೆ ಆದೇಶಿಸಿದ್ದಾರೆ.
ಕಡಪ ಜಿಲ್ಲೆಯ ಪುಲಿವೆಂದದಲ್ಲಿ ನಡೆದ ಈ ಘಟನೆಯಿಂದಾಗಿ, ತೆಲುಗುದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ ನಡುವೆ 'ಶವ ಸಂಸ್ಕಾರಕ್ಕೂ' ಮುನ್ನವೇ ಕೀಳುಮಟ್ಟದ ರಾಜಕೀಯ ತಾರಕಕ್ಕೇರಿದೆ. ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ, ಚಿಕ್ಕಪ್ಪನ ಕೊಲೆಗೆ ಚಂದ್ರಬಾಬು ನಾಯ್ಡುವೇ ಕಾರಣ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಪ್ಪನ ಕೊಲೆಯಲ್ಲಿ ಚಂದ್ರಬಾಬು ನಾಯ್ಡು ಕೈವಾಡ: ಜಗನ್ ಆರೋಪ
ಕಡಪ ಜಿಲ್ಲೆಯಾದ್ಯಂತ ವೈಎಸ್ಆರ್ ಕಾಂಗ್ರೆಸ್ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದ ವಿವೇಕಾನಂದ ರೆಡ್ಡಿ ಚುನಾವಣಾ ಸಭೆಗಳನ್ನು ಮುಗಿಸಿ ಪುಲಿವೆಂದದಲ್ಲಿರುವ ತಮ್ಮ ಮನೆಗೆ ಗುರುವಾರ (ಮಾ 14) ತಡರಾತ್ರಿ ಆಗಮಿಸಿದ್ದರು. ಪಕ್ಕದ ಗೂಡು ಅಂಗಡಿಯಲ್ಲಿ ಸಿಗರೇಟ್ ಪ್ಯಾಕ್ ತೆಗೆದುಕೊಂಡು ಮನೆಯೊಳಗೆ ವಿವೇಕಾನಂದ ರೆಡ್ಡಿ ಹೋದ ನಂತರ, ಅವರ ಆಪ್ತ ಸಹಾಯಕ ಮತ್ತು ಡ್ರೈವರ್ ಅಲ್ಲಿಂದ ಹೊರಟು ಹೋಗಿದ್ದರು.
ರೆಡ್ಡಿಯವರ ಕುಟುಂಬ ಪುಲಿವೆಂದದಲ್ಲಿದ್ದಾಗ, ಅವರ ಕುಟುಂಬ ಹೈದರಾಬಾದ್ ನಲ್ಲಿತ್ತು
ವಿವೇಕಾನಂದ ರೆಡ್ಡಿ ಪುಲಿವೆಂದದ ಮನೆಯಲ್ಲಿ ಇದ್ದಾಗ, ಅವರ ಕುಟುಂಬದ ಸದಸ್ಯರು ಹೈದರಾಬಾದ್ ನಲ್ಲಿದ್ದರು. ರೆಡ್ಡಿಯವರು ಒಬ್ಬರೇ ಇರುವುದನ್ನು ಮೊದಲೇ ಅರಿತಿದ್ದ ಕಟುಕರು, ಮನೆಯಲ್ಲೇ ಹೊಂಚು ಹಾಕಿ ಕೂತಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಮೊದಲು ಇದು ಹೃದಯಾಘಾತವೆಂದು ವರದಿಯಾಗಿದ್ದರೂ , ಪೋಸ್ಟ್ ಮಾರ್ಟಂ ಕಥೆ ಬೇರೇನೇ ಹೇಳುತ್ತಿತ್ತು. ರೆಡ್ಡಿಯವರ ದೇಹ ಬಾತ್ ರೂಂನಲ್ಲಿ ಬಿದ್ದಿತ್ತು.
ಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್ಟಿಆರ್ ಮೊಮ್ಮಗ
ಅಖಂಡ ಆಂಧ್ರದ ಮಾಜಿ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ
ಅಖಂಡ ಆಂಧ್ರದ ಮಾಜಿ ಸಿಎಂ ವೈ ಎಸ್ ರಾಜಶೇಖರ ರೆಡ್ಡಿಯವರ ಕಿರಿಯ ಸಹೋದರರೂ ಆಗಿರುವ ವಿವೇಕಾನಂದ ರೆಡ್ಡಿಯವರ ದೇಹವನ್ನು ಮೊದಲು ನೋಡಿದ ಅವರ ಆಪ್ತ ಸಹಾಯಕ ಕೃಷ್ಣರೆಡ್ಡಿ, ಬೆಡ್ ರೂಂ ಮತ್ತು ಬಾತ್ ರೂಂನಲ್ಲಿ ರಕ್ತದ ಕಲೆಯಿರುವುದನ್ನು ಗಮನಿಸಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ, ಪೊಲೀಸರು ಪೋಸ್ಟ್ ಮಾರ್ಟಂಗೆ ಕಳುಹಿಸಿದಾಗ, ದೇಹದಲ್ಲಿ ಏಳು ಗಾಯದ ಗುರುತುಗಳು ಪತ್ತೆಯಾಗಿದ್ದವು. ಹೈದರಾಬಾದ್ ನಿಂದ ದೌಡಾಯಿಸಿದ ಜಗನ್ ಮತ್ತು ಅವರ ತಾಯಿ, ಇದೊಂದು ವ್ಯವಸ್ಥಿತ ಕೊಲೆ ಎಂದು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಬಲಿಯಾದ ಆಂಧ್ರದ ಮಾಜಿ ಸಿಎಂ
ಸಹೋದರ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಬಲಿಯಾದ ನಂತರ, ಅಣ್ಣನ ಪತ್ನಿ (ಅತ್ತಿಗೆ) ವಿಜಯಮ್ಮ ವಿರುದ್ದವೇ ಸ್ಪರ್ಧಿಸಿ ವಿವೇಕಾನಂದ ರೆಡ್ಡಿ ಸೋಲು ಕಂಡಿದ್ದರು. ಅಣ್ಣನ ಮಗ ಜಗನ್, ಕಾಂಗ್ರೆಸ್ ತೊರೆದು ವೈಎಸ್ಆರ್ ಪಕ್ಷವನ್ನು ಹುಟ್ಟುಹಾಕಿದರೂ, ಕಾಂಗ್ರೆಸ್ ಪಕ್ಷದಲ್ಲಿ ವಿವೇಕಾನಂದ ರೆಡ್ಡಿ ಉಳಿದುಕೊಂಡಿದ್ದರು. ಎರಡು ಕುಟುಂಬಗಳ ನಡುವಿನ ವೈಮನಸ್ಸು ಹಲವು ವರ್ಷಗಳ ನಂತರ ಕಮ್ಮಿಯಾಗಿ, ವಿವೇಕಾನಂದ ರೆಡ್ಡಿ, ಕಾಂಗ್ರೆಸ್ ತೊರೆದು ಜಗನ್ ಪಕ್ಷವನ್ನು ಸೇರಿದ್ದರು.
ಕೊಲೆಯೆಂದು ಧೃಡೀಕರಿಸಿದ ನಂತರ ಜಗನ್, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ
ಪೊಲೀಸರು ವಿವೇಕಾನಂದ ರೆಡ್ಡಿಯವರದ್ದು ಕೊಲೆಯೆಂದು ಧೃಡೀಕರಿಸಿದ ನಂತರ ಜಗನ್, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಈ ಕೊಲೆಯ ಹಿಂದೆ ಇದ್ದಾರೆಂದು ಆರೋಪಿಸಿದ್ದಾರೆ. ರಾಜ್ಯ ಪೊಲೀಸರ ಮೇಲೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಂಬಿಕೆ ಇಲ್ಲದೇ ಇರುವುದರಿಂದ ಸಿಬಿಐ ತನಿಖೆಯೇ ಆಗಬೇಕೆಂದು ಜಗನ್ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ, ನಮ್ಮ ಕುಟುಂಬದವರ ಕೊಲೆಯಾಗುತ್ತದೆ
ಪ್ರತೀ ಬಾರಿಯೂ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ, ನಮ್ಮ ಕುಟುಂಬದವರ ಕೊಲೆಯಾಗುತ್ತದೆ. ನನ್ನಜ್ಜ ರಾಜಾ ರೆಡ್ಡಿ, ನನ್ನ ಮೇಲೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಕೊಲೆಯತ್ನ ನಡೆಯಿತು. ಇದೆಲ್ಲಾ ನಡೆದದ್ದು ತೆಲುಗುದೇಶಂ ಅಧಿಕಾರದಲ್ಲಿದ್ದಾಗ ಎನ್ನುವುದು ಎಲ್ಲರೂ ಗಮನಿಸಬೇಕಾದ ವಿಚಾರ. ನನ್ನ ತಂದೆ ದುರ್ಮರಣವಾದ ಎರಡು ದಿನದ ಹಿಂದೆ, ನೀವು ಮತ್ತೆ ವಾಪಸ್ ಬರುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಅಸೆಂಬ್ಲಿಯಲ್ಲಿ ಹೇಳಿದ್ದರು ಎಂದು ಜಗನ್, ಆಂಧ್ರ ಸಿಎಂ ಕಡೆ ಬೊಟ್ಟು ತೋರಿಸಿದ್ದಾರೆ.
ತನ್ನ ಸ್ವಂತ ತಂದೆಯ ಸಾವಿಗೇ ಚಂದ್ರಬಾಬು ಕಾರಣ
ತನ್ನ ಸ್ವಂತ ತಂದೆಯ ಸಾವಿಗೇ ಚಂದ್ರಬಾಬು ಕಾರಣರಾಗಿದ್ದರು ಎನ್ನುವ ಗುರುತರ ಆರೋಪ ಮಾಡಿರುವ ಜಗನ್, ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೂ ಚಂದ್ರಬಾಬು ಇಳಿಯುತ್ತಾರೆ ಎನ್ನುವುದಕ್ಕೆ ಹಲವಾರು ನಿರ್ದರ್ಶನಗಳಿವೆ. ಆಂಧ್ರದ ಪೊಲೀಸ್ ಇವರ ಸುಪರ್ದಿಯಲ್ಲೇ ಬರುವುದರಿಂದ, ನನ್ನ ಚಿಕ್ಕಪ್ಪನ ಸಾವಿಗೆ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ನಮಗಿಲ್ಲ.ಹಾಗಾಗಿ, ನಾವು ಈ ಕೊಲೆಗೆ ನೇರವಾಗಿ ಚಂದ್ರಬಾಬು ನಾಯ್ಡುವೇ ಕಾರಣ ಎನ್ನುವ ಬಲವಾದ ಶಂಕೆಯನ್ನು ವ್ಯಕ್ತ ಪಡಿಸುತ್ತಿದ್ದೇವೆ ಎಂದು ವೈ ಎಸ್ ಜಗನ್ ಹೇಳಿದ್ದಾರೆ.
ಪೊಲೀಸರು ಆಗಮಿಸುವ ಮುನ್ನವೇ, ರಕ್ತದ ಕಲೆಯನ್ನು ತೊಳೆದು ಹಾಕಲಾಗಿತ್ತು
ವಿವೇಕಾನಂದ ರೆಡ್ಡಿಯವರ ಕೊಲೆಯ ತನಿಖೆಗೆ ಪೊಲೀಸರು ಆಗಮಿಸುವ ಮುನ್ನವೇ, ರಕ್ತದ ಕಲೆಯನ್ನು ತೊಳೆದು ಹಾಕಲಾಗಿತ್ತು. ಇದೊಂದು ಸಹಜ ಸಾವು ಎಂದು ಅವರ ಕುಟುಂಬದವರು ಪೊಲೀಸರನ್ನು ನಂಬಿಸುತ್ತಿದ್ದರು. ಇದೊಂದು ಹೃದಯಾಘಾತವೆಂದು ಪೊಲೀಸರಿಗೆ ಅವರ ಕುಟುಂಬದವರು ಹೇಳುತ್ತಿದ್ದರು. ದೇಹವನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಇದು ಕೊಲೆ ಎಂದು ಅವರ ಕುಟುಂಬದವರು ಹೇಳುತ್ತಿದ್ದಾರೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.