ತೆಲಂಗಾಣ ವಿಧಾನಸಭೆಗೆ ಪವನ್ ಕಲ್ಯಾಣ್ ಪಕ್ಷದಿಂದಲೂ ಸ್ಪರ್ಧೆ
ಅಮರಾವತಿ, ಅಕ್ಟೋಬರ್ 14: ತೆಲಂಗಾಣ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಇಪ್ಪತ್ನಾಲ್ಕು ಸ್ಥಾನಗಳಲ್ಲಿ ಜನಸೇನಾ ಪಾರ್ಟಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ಮುಖ್ಯಸ್ಥ ಹಾಗೂ ನಟರಾದ ಪವನ್ ಕಲ್ಯಾಣ್ ಹೇಳಿದ್ದಾರೆ. ವಿಜಯವಾಡದಲ್ಲಿ ಪಕ್ಷದ ರಾಜ್ಯ ಕಚೇರಿಯನ್ನು ಉದ್ಘಾಟಿಸಿದ ನಂತರ ಅವರು ಈ ಮಾಹಿತಿ ನೀಡಿದ್ದಾರೆ.
ತೆಲಂಗಾಣದಲ್ಲಿ ಅವಧಿಗೆ ಮುನ್ನ ಚುನಾವಣೆಗೆ ಹೋಗುವ ಅಗತ್ಯವಿರಲಿಲ್ಲ ಎಂದಿರುವ ಪವನ್ ಕಲ್ಯಾಣ್, ಜನಸೇನಾ ಪಾರ್ಟಿಯು ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಇನ್ನೂ ಚರ್ಚೆ ನಡೆಸಿಲ್ಲ ಎಂದು ಮಾತ್ರ ಹೇಳಿದ್ದಾರೆ. ಆದರೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತೇನೂ ಅವರು ತಿಳಿಸಿಲ್ಲ.
ತೆಲಂಗಾಣ ಚುನಾವಣೆ : ಕೆಸಿಆರ್ಗೆ ಎದುರಾಯಿತು ದೊಡ್ಡ ಸವಾಲು!
ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು. ಇಪ್ಪತ್ಮೂರರಿಂದ ಇಪ್ಪತ್ನಾಲ್ಕು ಸ್ಥಾನಗಳಿಗೆ ಜನಸೇನಾ ಪಾರ್ಟಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆಲವು ಕಾರ್ಪೊರೇಟರ್ ಗಳು ಜನಸೇನಾ ಪಾರ್ಟಿಗೆ ಸೇರುವ ಹಾಗೂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ನಿರ್ಧಾರ ಮಾಡಲಾಗುವುದು ಎಂದು ನಟ-ರಾಜಕಾರಣಿ ಪವನ್ ಕಲ್ಯಾಣ್ ತಿಳಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಅವಧಿಪೂರ್ವ ಚುನಾವಣೆ
ರಾಜಕೀಯ ಲಾಭಕ್ಕಾಗಿ ವಿಧಾನಸಭೆ ಚುನಾವಣೆಯನ್ನು ಮುಂಚಿತವಾಗಿ ನಡೆಸಲಾಗುತ್ತಿದೆ. ಇದಕ್ಕೆ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವೇ ಕಾರಣ. ಅವಧಿ ಪೂರ್ಣಗೊಳ್ಳದೆ ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಬಾರದಿತ್ತು ಎಂದು ತಮ್ಮ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.
ಎಲ್ಲ ಪಕ್ಷದವರು ಸೇರಿ ಒತ್ತಡ ತರಬೇಕು
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಎಲ್ಲ ಪಕ್ಷಗಳವರು ಸೇರಿ ಒತ್ತಡ ಹಾಕಬೇಕು. ಈ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಆಂಧ್ರಪ್ರದೇಶ ಸರಕಾರ ಎಲ್ಲ ಪಕ್ಷಗಳ ಸಭೆಯೊಂದನ್ನು ಕರೆದು, ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರಕ್ಕೆ ಒತ್ತಡ ಹಾಕಬೇಕು. ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಹಾಗೆ ಭರವಸೆ ಈಡೇರಿಸುವಂತೆ ತಾಕೀತು ಮಾಡಬೇಕು ಎಂದಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ : ಅಂಕಿ-ಅಂಶಗಳು
ಆಂಧ್ರ ಸರಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ
ಆಂಧ್ರಪ್ರದೇಶ ಸರಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ. ವಿಶೇಷ ಸ್ಥಾನಮಾನ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆ ಕಾರಣಕ್ಕೇ ಕಳೆದ ಬಾರಿ ಸರ್ವ ಪಕ್ಷಗಳ ಸಭೆಗೆ ಹಾಜರಾಗಲಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಯಿತು. ಒಂದು ವೇಳೆ ಸರಕಾರ ತನ್ನ ನಿಲುವಿಗೆ ಬದ್ಧವಾಗಿರುವುದಾದರೆ ನಾವು ಸಭೆಗೆ ಹಾಜರಾಗಲು ಮತ್ತು ಒಟ್ಟಿಗೆ ಕೆಲಸ ಮಾಡಲು ಸಿದ್ಧ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು
ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಆಗ್ರಹ
ಆಂಧ್ರಪ್ರದೇಶವು (ಆಂಧ್ರ ಪ್ರದೇಶ ಹಾಗೂ ತೆಲಂಗಾಣ) ಎರಡು ರಾಜ್ಯವಾಗಿ ವಿಭಜನೆ ಆದ ನಂತರ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ, ಆಂಧ್ರದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬುದು ಆಗ್ರಹವಾಗಿದೆ.